ADVERTISEMENT

ವಾಯು ಮಾಲಿನ್ಯ ನಿಯಂತ್ರಣಕ್ಕೆ ಕಾರ್ಯಪಡೆ ರಚನೆ

ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಭೆ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2018, 16:33 IST
Last Updated 4 ಅಕ್ಟೋಬರ್ 2018, 16:33 IST

ದಾವಣಗೆರೆ: ನಗರದಲ್ಲಿ ಮಿತಿ ಮೀರುತ್ತಿರುವ ವಾಯು ಮಾಲಿನ್ಯವನ್ನು ನಿಯಂತ್ರಿಸಲು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಕಾರ್ಯಪಡೆ ಸಮಿತಿಯನ್ನು ರಚಿಸಲಾಗಿದ್ದು, ಮೊದಲ ಸಭೆ ಶುಕ್ರವಾರ ಬೆಳಿಗ್ಗೆ 11ಕ್ಕೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯಲಿದೆ.

ರಾಜ್ಯದಲ್ಲಿ ದಾವಣಗೆರೆ, ಬೆಂಗಳೂರು, ಕಲಬುರ್ಗಿ ಹಾಗೂ ಹುಬ್ಬಳ್ಳಿ–ಧಾರವಾಡ ನಗರವನ್ನು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ‘ನಾನ್‌ ಅಟೈನ್‌ಮೆಂಟ್‌ ಸಿಟಿ’ ಎಂದು ಪರಿಗಣಿಸಿದೆ. ದಾವಣಗೆರೆ ನಗರದಲ್ಲಿ ಪರಿವೇಷ್ಠಿಕಾ ವಾಯುವಿನಲ್ಲಿ ಉಸಿರಾಡುವಾಗ ದೇಹವನ್ನು ಸೇರುವ ದೂಳಿನ ಕಣಗಳ ಪಿಎಂ–10 ಪ್ರಮಾಣವು ರಾಷ್ಟ್ರೀಯ ವಾರ್ಷಿಕ ಮಿತಿ (60 ಗಾಳಿಯಲ್ಲಿರುವ ಪ್ರತಿ ಘನ ಮೀಟರ್‌ ಮೈಕ್ರೊ ಗ್ರಾಂ) ಹೆಚ್ಚಾಗಿದೆ. ಹೀಗಾಗಿ ಇಲ್ಲಿ ವಾಯು ಮಾಲಿನ್ಯ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದೆ.

ವಾಹನಗಳಿಂದ ಉಂಟಾಗುವ ಮಾಲಿನ್ಯ ನಿಯಂತ್ರಿಸುವುದು, ರಸ್ತೆಯಲ್ಲಿನ ದೂಳಿನ ಪ್ರಮಾಣ ನಿಯಂತ್ರಿಸುವುದು, ಹೊಲಗದ್ದೆಗಳಲ್ಲಿ ಬೆಳೆದ ಕಬ್ಬು ಮತ್ತು ಭತ್ತದ ಕಟಾವಿನ ನಂತರ ಸುಡುವುದರಿಂದ ಉಂಟಾಗುವ ವಾಯು ಮಾಲಿನ್ಯ ತಡೆಯುವುದು, ಘನತ್ಯಾಜ್ಯ ವಸ್ತುಗಳನ್ನು ಸುಡುವುದರಿಂದ ಉಂಟಾಗುವ ಮಾಲಿನ್ಯ ಹಾಗೂ ಕೈಗಾರಿಕೆಗಳಿಂದ ಹೊರಹೊಮ್ಮುವ ಮಾಲಿನ್ಯವನ್ನು ನಿಯಂತ್ರಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುತ್ತದೆ.

ADVERTISEMENT

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಮಹಾನಗರ ಪಾಲಿಕೆ, ‘ಧೂಡಾ’ ಆಯುಕ್ತರು, ಸಾಮಾಜಿಕ ಅರಣ್ಯ ವಿಭಾಗದ ಡಿಎಫ್‌ಸಿ, ಸ್ಮಾರ್ಟ್‌ ಸಿಟಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ, ಪ್ರಾದೇಶಿಕ ಸಾರಿಗೆ ಅಧಿಕಾರಿ, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಕಾರ್ಯಪಡೆಯ ಸದಸ್ಯರಾಗಿರುತ್ತಾರೆ.

**

ದಾವಣಗೆರೆಯಲ್ಲಿನ ಪಿಎಂ–10 ಪ್ರಮಾಣ

ವರ್ಷ→ಪ್ರಮಾಣ (ug/m3)

2011→67

2012→75

2013→92

2014→85

2015→109

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.