ADVERTISEMENT

ಶಿಕ್ಷಕರ ವೇತನ ಪರಿಷ್ಕರಣೆ ಆಗದಿರುವುದು ಅವಮಾನಕಾರಿ ಸಂಗತಿ

ಶೈಕ್ಷಣಿಕ ಕಾರ್ಯಾಗಾರದಲ್ಲಿ ಎಂ.ಎಲ್‌.ಸಿ ಭೋಜೇಗೌಡ ಕಳವಳ

​ಪ್ರಜಾವಾಣಿ ವಾರ್ತೆ
Published 7 ಜನವರಿ 2019, 19:08 IST
Last Updated 7 ಜನವರಿ 2019, 19:08 IST
ಎಸ್.ಎಲ್. ಭೋಜೇಗೌಡ
ಎಸ್.ಎಲ್. ಭೋಜೇಗೌಡ   

ದಾವಣಗೆರೆ: ಒಂದು ವರ್ಷ ಸೇವೆ ಸಲ್ಲಿಸಿದ ಶಾಸಕರಿಗೂ ಪಿಂಚಣಿ ಕೊಡಲಾಗುತ್ತಿದೆ. ಆದರೆ, 30 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿಯಾದ ಶಿಕ್ಷಕರಿಗೆ ಪಿಂಚಣಿ ಸಿಗದಿರುವುದು ಅವಮಾನಕರ ಸಂಗತಿ ಎಂದು ವಿಧಾನ ಪರಿಷತ್‌ ಸದಸ್ಯ ಎಸ್‌.ಎಲ್‌. ಭೋಜೇಗೌಡ ಬೇಸರ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾ ಘಟಕ ಸೋಮವಾರ ಹಮ್ಮಿಕೊಂಡಿದ್ದ ಶೈಕ್ಷಣಿಕ ಸಮಾವೇಶ ಹಾಗೂ ಎಸ್‌.ಎಸ್‌.ಎಲ್‌.ಸಿ ಪರೀಕ್ಷಾ ಫಲಿತಾಂಶ ಸುಧಾರಣಾ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳ ವೇತನವು ಸುದ್ದಿಯಾಗದೇ ₹ 2.50 ಲಕ್ಷ ಪರಿಷ್ಕರಣೆಯಾಗಿದೆ. ಐದು ವರ್ಷಗಳಲ್ಲಿ ಮೂರು ಬಾರಿ ಶಾಸಕರ ಗೌರವಧನ ಹೆಚ್ಚಿಸಲಾಗಿದೆ. ಆದರೆ, 30 ವರ್ಷಗಳ ಕಾಲ ಸೇವೆ ಸಲ್ಲಿಸಿದ ಶಿಕ್ಷಕರು ವೇತನ ಪರಿಷ್ಕರಣೆ ಹಾಗೂ ಬಡ್ತಿ ಸೌಲಭ್ಯ ಪಡೆಯಲು ಹೋರಾಟ ಮಾಡಬೇಕಾದ ಪರಿಸ್ಥಿತಿ ಬಂದಿರುವುದು ನೋವಿನ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದರು.

ADVERTISEMENT

ವಾರಕ್ಕೆ ಒಂದು ಸಭೆ ನಡೆಸಿದರೆ ಶಾಸಕರ ಬ್ಯಾಂಕಿನ ಖಾತೆಗೆ ಭತ್ಯೆ ಸೇರಿ ₹ 40 ಸಾವಿರ ಜಮಾ ಆಗುತ್ತದೆ. ಕೆಲವರು ಸಾಮರ್ಥ್ಯಕ್ಕೆ ಅನುಗುಣವಾಗಿ ವಾರಕ್ಕೆ ಎರಡು– ಮೂರು ಸಭೆಗಳನ್ನೂ ಮಾಡುತ್ತಾರೆ. ಶಾಸಕರು, ವಿಧಾನ ಪರಿಷತ್‌ ಸದಸ್ಯರು ತಮ್ಮ ಪಾಸ್‌ಬುಕ್‌ ಖಾತೆಗೆ ಹಣ ಜಮಾ ಆಗಿದೆಯೇ ಎಂಬುದನ್ನೂ ತೆಗೆದು ನೋಡುವುದಿಲ್ಲ. ಆದರೆ, ವಿಧಾನ ಪರಿಷತ್‌ ಸದಸ್ಯರನ್ನು ಆಯ್ಕೆ ಮಾಡುವ ಶಿಕ್ಷಕರ ವೇತನ ಮಾತ್ರ ಪರಿಷ್ಕರಣೆ ಆಗುತ್ತಿಲ್ಲ. ಇದಕ್ಕೆ ರಾಜಕಾರಣಿಗಳು ಕಾರಣರಲ್ಲ; ಐ.ಎ.ಎಸ್‌ ಅಧಿಕಾರಿಗಳು ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಭೋಜೇಗೌಡ ಅಸಮಾಧಾನ ವ್ಯಕ್ತಪಡಿಸಿದರು.

‘ಶಿಕ್ಷಕರು ರಾಷ್ಟ್ರಪತಿ ಆಗುವವರ ವ್ಯಕ್ತಿತ್ವವನ್ನೂ ನಿರ್ಮಾಣ ಮಾಡಿರುತ್ತಾರೆ. ಇವರಿಗೆ ಸಂವಿಧಾನ ಬದ್ಧವಾದ ಸೌಲಭ್ಯಗಳನ್ನು ಕೊಡದಿದ್ದರೆ ನಾವು (ಎಂ.ಎಲ್‌.ಸಿ) ಯಾವ ಪುರುಷಾರ್ಥಕ್ಕೆ ಈ ಸ್ಥಾನದಲ್ಲಿ ಇರಬೇಕು? ಹೀಗಾಗಿ 14 ಎಂ.ಎಲ್.ಸಿಗಳೂ ಪಕ್ಷ ಭೇದ ಮರೆತು ವಿಧಾನ ಪರಿಷತ್ತಿನಲ್ಲಿ ಒಕ್ಕೊರಲಿನಿಂದ ಶಿಕ್ಷಕರ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುತ್ತಿದ್ದೇವೆ. ಸರ್ಕಾರದಿಂದ ಸೌಲಭ್ಯ ಕಲ್ಪಿಸಿಕೊಡಲು ಯತ್ನಿಸುತ್ತೇವೆ’ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.