ಚನ್ನಗಿರಿ: ತಾಲ್ಲೂಕಿನ ಕೆ. ಹೊಸಹಳ್ಳಿ ಗ್ರಾಮದ ಶಾಲೆಯ ಮುಂಭಾಗದ ರಸ್ತೆಯಲ್ಲಿ ಆಯತಪ್ಪಿ ಬಿದ್ದ ಪರಿಣಾಮ ಬೈಕ್ ಸವಾರರೊಬ್ಬರು ಮಂಗಳವಾರ ಮೃತಪಟ್ಟಿದ್ದಾರೆ.
ಬಿಡುಗೊಂಡಹಳ್ಳಿ ಸಣ್ಣ ತಾಂಡಾ ಗ್ರಾಮದ ಸೇವಾಲಾಲ್ ದೇವಸ್ಥಾನದ ಪೂಜಾರಿ ಹಾಲೇಶ್ ನಾಯ್ಕ (25) ಮೃತಪಟ್ಟವರು. ತಾಲ್ಲೂಕಿನ ಅಮ್ಮನಗುಡ್ಡದ ಕುಕ್ಕುವಾಡೇಶ್ವರಿ ದೇವಸ್ಥಾನದಲ್ಲಿಬೈಕ್ ಪೂಜೆ ಮಾಡಿಸಿಕೊಂಡು ಬರುತ್ತಿದ್ದ ವೇಳೆ ಅಪಘಾತವಾಗಿದೆ. ಹಾಲೇಶ್ ನಾಯ್ಕ್ ಅಂಗವಿಕಲರಾಗಿದ್ದರು.
ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನೆಯ ಹೆಂಚು ತೆಗೆದು ಕಳವು
ಚನ್ನಗಿರಿ: ತಾಲ್ಲೂಕಿನಲಿಂಗದಹಳ್ಳಿ ಗ್ರಾಮದಲ್ಲಿಪಾರ್ವತಮ್ಮ ಎಂಬುವರ ಮನೆಯ ಚಾವಣಿಯ ಹೆಂಚುಗಳನ್ನು ತೆಗೆದ ಕಳ್ಳರು ಚಿನ್ನ, ಬೆಳ್ಳಿ ಹಾಗೂ ನಗದು ಕಳವು ಮಾಡಿದ್ದಾರೆ.
₹ 50 ಸಾವಿರ ಮೌಲ್ಯದ ಬೆಳ್ಳಿ ವಸ್ತುಗಳು, ₹ 30 ಸಾವಿರ ಬೆಲೆ ಬಾಳುವ ಬಂಗಾರದ ಸರ ಹಾಗೂ ₹ 40 ಸಾವಿರ ಕಳವು ಮಾಡಿದ್ದಾರೆ.
ಪಾರ್ವತಮ್ಮ ಅವರು ಅನಾರೋಗ್ಯದ ಕಾರಣ ಬಿಲ್ಲಹಳ್ಳಿ ಗ್ರಾಮದ ತಮ್ಮ ಮಗಳ ಮನೆಯಲ್ಲಿಯೇ ಉಳಿದುಕೊಂಡಿದ್ದರು. ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಟೊ ಡಿಕ್ಕಿಯಾಗಿ ವ್ಯಾಪಾರಿ ಸಾವು
ದಾವಣಗೆರೆ: ನಗರದಕೆ.ಆರ್. ಮಾರುಕಟ್ಟೆ ಹಳೆಗುಜರಿ ರಸ್ತೆಯಲ್ಲಿ ತಳ್ಳುವ ಗಾಡಿಯಲ್ಲಿ ಹಣ್ಣುಗಳ ವ್ಯಾಪಾರ ಮಾಡುತ್ತಿದ್ದ ವ್ಯಕ್ತಿಗೆ ಆಟೊ ಡಿಕ್ಕಿಯಾಗಿ ಮೃತಪಟ್ಟಿದ್ದಾರೆ.
ಮುಸ್ತಫಾ ನಗರದ ಅಬ್ದುಲ್ ಮುತಾಲಿಕ್ (70) ಮೃತಪಟ್ಟವರು. ಅಬ್ದುಲ್ ಮುತಾಲಿಕ್ ಅವರು ರಸ್ತೆ ದಾಟುತ್ತಿದ್ದ ವೇಳೆ ಕೆ.ಆರ್. ಮಾರ್ಕೆಟ್ ರಸ್ತೆ ಕಡೆಯಿಂದ ಎಂ.ಜಿ ರಸ್ತೆ ಕಡೆಗೆ ಬಂದ ಆಟೊ ಡಿಕ್ಕಿ ಹೊಡೆದಿದೆ. ರಿಕ್ಷಾ ಚಾಲಕ ಆನೆಕೊಂಡ ನಿವಾಸಿ ನವೀನ್ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಉತ್ತರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.