ADVERTISEMENT

ವಚನ ಸಾಹಿತ್ಯದ ಪಿತಾಮಹಾ ಫ.ಗು. ಹಳಕಟ್ಟಿ

ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆಯಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ

​ಪ್ರಜಾವಾಣಿ ವಾರ್ತೆ
Published 3 ಜುಲೈ 2022, 2:19 IST
Last Updated 3 ಜುಲೈ 2022, 2:19 IST
ದಾವಣಗೆರೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ವಚನ ಸಂರಕ್ಷಣಾ ದಿನಾಚರಣೆಯಲ್ಲಿ ಫಕೀರಪ್ಪ ಗುರುಬಸಪ್ಪ ಹಳಕಟ್ಟಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು
ದಾವಣಗೆರೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ವಚನ ಸಂರಕ್ಷಣಾ ದಿನಾಚರಣೆಯಲ್ಲಿ ಫಕೀರಪ್ಪ ಗುರುಬಸಪ್ಪ ಹಳಕಟ್ಟಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು   

ದಾವಣಗೆರೆ: ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ಒಂದು ಗುಂಪು ವಚನಗಳನ್ನು ನಾಶಮಾಡುತ್ತಿದ್ದಾಗ ಬಹಳಷ್ಟು ಶರಣರು ವಿವಿಧ ಜಾಗಗಳಲ್ಲಿ ಅವುಗಳನ್ನು ಜೋಪಾನವಾಗಿ ಇಟ್ಟಿದ್ದರು. ಅಂಥ ಎಲ್ಲ ಸಂಗ್ರಹಗಳನ್ನು ಒಂದೆಡೆ ಜೋಡಿಸಿ ನೀಡಿರುವ ಫ.ಗು. ಹಳಕಟ್ಟಿ ವಚನ ಸಾಹಿತ್ಯದ ಪಿತಾಮಹಾ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ವತಿಯಿಂದ ಆಯೋಜಿಸಲಾಗಿದ್ದ ಫಕೀರಪ್ಪ ಗುರುಬಸಪ್ಪ ಹಳಕಟ್ಟಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಮಾಜದಲ್ಲಿ ನಡೆಯುವ ಅಸಮಾನತೆ, ದೌರ್ಜನಗಳನ್ನು ತಡೆಯಲು ವಚನ ಸಾಹಿತ್ಯದಿಂದ ಮಾತ್ರ ಸಾಧ್ಯ. ಇಂದು ನಮಗೆ ವಚನಗಳು ಸುಲಭವಾಗಿ ಸಿಗುತ್ತಿವೆ ಅಂದರೆ ಅದಕ್ಕೆ ಫಕೀರಪ್ಪ ಗುರುಬಸಪ್ಪ ಹಳಕಟ್ಟಿ ಮೂಲ ಕಾರಣ. ಅವರು ಸಾಕಷ್ಟು ಸಂಶೋಧನೆ ನಡೆಸಿ ವಚನಗಳನ್ನು ಸಂರಕ್ಷಿಸಿ ಸಮಾಜಕ್ಕೆ ಕೊಡುಗೆಯಾಗಿ ನೀಡಿದ್ದಾರೆಎಂದರು.

ADVERTISEMENT

ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷೆ ಸುಮತಿ ಜಯಪ್ಪ ಉಪನ್ಯಾಸ ನೀಡಿದರು. ಬಾಲ್ಯದಿಂದಲೂ ತಂದೆಯ ಸಾಹಿತ್ಯ ವಲಯದಲ್ಲಿ ಹಳಕಟ್ಟಿ ಒಡನಾಟವಿಟ್ಟುಕೊಂಡಿದ್ದರು. ಕುಟುಂಬದಲ್ಲಿ ಕಿತ್ತು ತಿನ್ನುವ ಬಡತನ, ಅನಾರೋಗ್ಯ, ಸಾಲು ಸಾಲು ಸಾವುಗಳಾದರೂ ಕೂಡ ಧೃತಿಗೆಡದೆ ಅವರು ಓಲೆಗರಿ, ಹಸ್ತಪ್ರತಿಗಳಲ್ಲಿದ್ದ ವಚನ ಸಾಹಿತ್ಯಗಳನ್ನು ಸಂಗ್ರಹಿಸಿ, ವಿಶ್ಲೇಷಿಸಿ ಅವುಗಳನ್ನು ಪ್ರಕಟಿಸುವ ಸಾಹಸವನ್ನು ಅವರು ಮಾಡಿದ್ದರು ಎಂದು ತಿಳಿಸಿದರು.

ಒಂದು ಸೈಕಲ್‍ನ ಸಹಾಯದಿಂದ ಹಲವಾರು ಕಡೆ ಸುತ್ತಾಡಿ ಸಂಗ್ರಹಿತ ತಾಳೆಗರಿಗಳನ್ನು ಹಸ್ತಪ್ರತಿಗಳನ್ನು ಸಂಗ್ರಹಿಸಿ ತಂದು ಸಂರಕ್ಷಿಸಿದರು. 1923 ರಲ್ಲಿ ಬೆಳಗಾವಿಯ ಮಹಾವೀರ ಮುದ್ರಣಾಲಯದಲ್ಲಿ ಇವರ ವಚನ ಸಾಹಿತ್ಯ ಸಂಪುಟ-1 ಪ್ರಕಟವಾಯಿತು. 1925ರಲ್ಲಿ ತಮ್ಮ ಸ್ವ ಗೃಹದಲ್ಲಿಯೇ ಹಿತಸಾಹಿತ್ಯ ಮುದ್ರಣಾಲಯ ಸ್ಥಾಪಿಸಿ ಸುಮಾರು 175 ಕೃತಿಗಳು ಹಾಗೂ ಹರಿಹರ ಕವಿಯ 42 ರಗಳೆಗಳನ್ನು ಮುದ್ರಣ ಮಾಡಿ ಪ್ರಸಾರ ಮಾಡಿದರು. 250ಕ್ಕೂ ಹೆಚ್ಚು ವಚನಕಾರರ ಪರಿಚಯಿಸಿದ ಕೀರ್ತಿ ಅವರಿಗೆ ಸಲ್ಲಿಸುತ್ತದೆ ಎಂದರು.

ವಚನ ಸಾಹಿತ್ಯದ ದಿನಾಚರಣೆಯು ಒಂದು ಜ್ಞಾನದ ದಿನಾಚರಣೆಯಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಎ.ಚನ್ನಪ್ಪ ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ವಾಮದೇವಪ್ಪ ಮಾತನಾಡಿದರು. ವಚನ ನೃತ್ಯ ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರಶಸ್ತಿಪತ್ರ ವಿತರಿಸಲಾಯಿತು. ಮೇಯರ್ ಜಯಮ್ಮ ಗೋಪಿನಾಯ್ಕ್, ಹೆಚ್ಚುವರಿ ಜಿಲ್ಲಾಧಿಕಾರಿ ಎನ್.ಪಿ. ಲೋಕೇಶ್, ಹೊನ್ನಾಳಿ ಉಪ ವಿಭಾಗಾಧಿಕಾರಿ ಹುಲ್ಲುಮನಿ ತಿಮ್ಮಣ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ, ರೇವಣಸಿದ್ದಪ್ಪ ಅಂಗಡಿ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.