ADVERTISEMENT

ರಂಗಭೂಮಿಯ ಹಿಂದಿನ ವೈಭವ ಉಳಿದಿಲ್ಲ: ಸಾಣೇಹಳ್ಳಿ ಶ್ರೀ

ಸಾಂಸ್ಕೃತಿಕ ಸಂಭ್ರಮ, ನಾಟಕ ಪ್ರದರ್ಶನ ಉದ್ಘಾಟಿಸಿದ ಸಾಣೇಹಳ್ಳಿ ಶ್ರೀ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2022, 4:16 IST
Last Updated 9 ಸೆಪ್ಟೆಂಬರ್ 2022, 4:16 IST
ದಾವಣಗೆರೆ ಕುವೆಂಪು ಕನ್ನಡ ಭವನದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಸಾಂಸ್ಕೃತಿಕ ಸಂಭ್ರಮ ಮತ್ತು ನಾಟಕ ಪ್ರದರ್ಶನ ಕಾರ್ಯಕ್ರಮವನ್ನು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಶಾಸಕ ಎಸ್‌.ಎ. ರವೀಂದ್ರನಾಥ್‌ ಉದ್ಘಾಟಿಸಿದರು
ದಾವಣಗೆರೆ ಕುವೆಂಪು ಕನ್ನಡ ಭವನದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಸಾಂಸ್ಕೃತಿಕ ಸಂಭ್ರಮ ಮತ್ತು ನಾಟಕ ಪ್ರದರ್ಶನ ಕಾರ್ಯಕ್ರಮವನ್ನು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಶಾಸಕ ಎಸ್‌.ಎ. ರವೀಂದ್ರನಾಥ್‌ ಉದ್ಘಾಟಿಸಿದರು   

ದಾವಣಗೆರೆ: ರಂಗಭೂಮಿಯ ಹಿಂದಿನ ವೈಭವ ಈಗ ಉಳಿದಿಲ್ಲ. ಇದಕ್ಕೆ ಜನರ ಒಲವು ಕಡಿಮೆಯಾಗುತ್ತಿರುವುದು ಕಾರಣವೋ, ಕಲಾವಿದರ ಭಾವನೆ ಬದಲಾಗುತ್ತಿರುವುದು ಕಾರಣವೋ ಎಂಬುದು ಗೊತ್ತಾಗುತ್ತಿಲ್ಲ ಎಂದು ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಶ್ರೀ ಗುರುವಾದ್ಯವೃಂದ, ಚಿಂದೋಡಿ ಶಾಂತರಾಜ್ ಅಸೋಸಿಯೇಷನ್ ವತಿಯಿಂದ ಕುವೆಂಪು ಕನ್ನಡ ಭವನದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಸಾಂಸ್ಕೃತಿಕ ಸಂಭ್ರಮ ಮತ್ತು ನಾಟಕ ಪ್ರದರ್ಶನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಜನರ ಅಭಿರುಚಿ ಬದಲಾಯಿಸುವುದು ನಮ್ಮ ಕೈಯಲ್ಲಿದೆ. ಅಭಿರುಚಿ ಹಾಳು ಮಾಡದೆ ಒಳ್ಳೆಯದನ್ನು ನೀಡಿದರೆ ಖಂಡಿತ ಜನರು ಸ್ವೀಕರಿಸುತ್ತಾರೆ.ವೃತ್ತಿ ರಂಗಭೂಮಿಯು ಹವ್ಯಾಸಿ ರಂಗಭೂಮಿಯ ಗುಣಗಳನ್ನು ಕೂಡ ಅಳವಡಿಸಿಕೊಂಡರೆ ಅದ್ಭುತವಾದ ನಾಟಕಗಳಲ್ಲಿ ಕಟ್ಟಿಕೊಡಲು ಸಾಧ್ಯವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

ಶಾಸಕ ಎಸ್.ಎ. ರವೀಂದ್ರನಾಥ್ ಕಾರ್ಯಕ್ರಮ ಉದ್ಘಾಟಿಸಿ, ‘ಹಳ್ಳಿಗಳಲ್ಲಿ ಹಿಂದೆ ಜಾತ್ರೆ ಪೂರ್ಣವಾಗಬೇಕಿದ್ದರೆ ನಾಟಕ ನೋಡಬೇಕಿತ್ತು. ಅನಕ್ಷರಸ್ತರಾದರೂ ಅದ್ಭುತ ಕಲಾವಿದರು ಆಗ ಇದ್ದರು. ಈಗ ನಾಟಕ ಕಂಪನಿಗಳನ್ನು ನಡೆಸುವುದೇ ಕಷ್ಟದ ಕೆಲಸ’ ಎಂದು ವಿಶ್ಲೇಷಿಸಿದರು.

ಚಿಂದೋಡಿ ಕಂಪನಿಗೆ ದಾವಣಗೆರೆ ತವರು ಮನೆಯಾದರೆ ಬೇರೆಲ್ಲ ಕಂಪನಿಗಳಿಗೆ ಸಾಕು ಮನೆ. ಅನೇಕ ಕಂಪನಿಗಳು ನಷ್ಟದಲ್ಲಿದ್ದಾಗ ದಾವಣಗೆರೆಗೆ ಬಂದು ಲಾಭ ಮಾಡಿಕೊಂಡು ಹೋಗಿದ್ದವು ಎಂದು ಜನಪದ ತಜ್ಞ ಡಾ.ಎಂ.ಜಿ. ಈಶ್ವರಪ್ಪ ನೆನಪು ಮಾಡಿಕೊಂಡರು.

ಸಂಗೀತ, ನೃತ್ಯ, ನಾಟಕ ಪ್ರಕಾರಗಳು ಮೃಗತ್ವದಿಂದ ಮನುಷ್ಯತ್ವದ ಕಡೆಕೊಂಡೊಯ್ಯುತ್ತವೆ ಎಂದು ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಡಾ. ಎಚ್.ಎಸ್. ಮಂಜುನಾಥ ಕುರ್ಕಿ ತಿಳಿಸಿದರು.

ಪಾಲಿಕೆ ಸದಸ್ಯ ದಿನೇಶ್ ಕೆ. ಶೆಟ್ಟಿ, ಶ್ರೀಗುರು ವಾದ್ಯವೃಂದದ ಅಧ್ಯಕ್ಷ ಚಿಂದೋಡಿ ಶಂಭುಲಿಂಗಪ್ಪ, ಚಿಂದೋಡಿ ಬಂಗಾರೇಶ್, ಧೂಡಾ ಅಧ್ಯಕ್ಷ ಕೆ.ಎಂ. ಸುರೇಶ್ ಇತರರು ಉಪಸ್ಥಿತರಿದ್ದರು.

ಸಂಗೀತ ಅವರಿಂದ ನೃತ್ಯ ಪ್ರದರ್ಶನ, ಪ್ರಭುಶಂಕರ್‌ ತಂಡದಿಂದ ಸುಗಮ ಸಂಗೀತ ನಡೆಯಿತು. ಬಳಿಕ ‘ಸಾಧ್ವಿ ಸರಸ್ವತಿ’ ನಾಟಕ ಪ್ರದರ್ಶನಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.