ADVERTISEMENT

ಖಾಸಗಿ ಶಿಕ್ಷಣ ಸಂಸ್ಥೆಗಳ ಉಳಿವಿಗೆ ಹೋರಾಟ ಅನಿವಾರ್ಯ

ರುಪ್ಸಾದ ರಾಜ್ಯ ಕಾರ್ಯಾಧ್ಯಕ್ಷ ಹಾಲನೂರು‌ ಎಸ್‌.ಲೇಪಾಕ್ಷ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2020, 3:27 IST
Last Updated 22 ಡಿಸೆಂಬರ್ 2020, 3:27 IST
ದಾವಣಗೆರೆಯ ಯುರೊ ಶಾಲೆ ಆವರಣದಲ್ಲಿ ದಾವಣಗೆರೆ ಜಿಲ್ಲಾ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟದ ಸಭೆ ನಡೆಯಿತು–ಪ್ರಜಾವಾಣಿ ಚಿತ್ರ
ದಾವಣಗೆರೆಯ ಯುರೊ ಶಾಲೆ ಆವರಣದಲ್ಲಿ ದಾವಣಗೆರೆ ಜಿಲ್ಲಾ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟದ ಸಭೆ ನಡೆಯಿತು–ಪ್ರಜಾವಾಣಿ ಚಿತ್ರ   

ದಾವಣಗೆರೆ:ಖಾಸಗಿ ಶಿಕ್ಷಣ ಸಂಸ್ಥೆಗಳ ಉಳಿವಿಗಾಗಿ ಹೋರಾಟ ಅನಿವಾರ್ಯವಾಗಿದ್ದು, ಈ ನಿಟ್ಟಿನಲ್ಲಿ ಸಂಘಟನೆ ಬಲಗೊಳ್ಳಬೇಕಿದೆ’ ಎಂದು ರುಪ್ಸಾದ ರಾಜ್ಯ ಕಾರ್ಯಾಧ್ಯಕ್ಷ ಹಾಲನೂರು‌ ಎಸ್‌.ಲೇಪಾಕ್ಷ ಹೇಳಿದರು.

ನಗರದ ಶಾಮನೂರು ರಸ್ತೆಯಲ್ಲಿರುವ ಯೂರೋ ಕಿಡ್ಸ್‌ ಶಾಲಾ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಅವರು ಮಾತನಾಡಿ,‘ಕಾರ್ಪೊರೇಟ್ ಶಾಲೆಗಳು ಲಕ್ಷಕ್ಕೂ ಅಧಿಕ ಡೊನೇಷನ್ ಪಡೆದು ಲೂಟಿ ಮಾಡುತ್ತಿವೆ. ಆದರೆ ಬಜೆಟ್‌ ಶಾಲೆಗಳು ಕೇವಲ ₹30 ರಿಂದ 60 ಸಾವಿರಗಳವರೆಗೆ ಪಡೆಯುತ್ತವೆ. ಈ ಹಣದಲ್ಲಿಯೇ ಶಿಕ್ಷಕರು, ನೌಕರರ ಭತ್ಯೆ, ಮೂಲ ಸೌಕರ್ಯ ಕಲ್ಪಿಸಬೇಕಿದೆ’ ಎಂದರು.

‘ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ನೀಡಲು ಸಾಧ್ಯವಾಗದೆಂಬ ಕಾರಣಕ್ಕೆ ಸರ್ಕಾರ ಖಾಸಗಿ ಶಾಲೆಗಳಿಗೆ ಅನುಮತಿ ನೀಡಿದೆ. ಸರ್ಕಾರ ಮಾಡಬೇಕಾದ ಕಾರ್ಯವನ್ನು ಖಾಸಗಿ ಶಾಲೆಗಳು ಮಾಡುತ್ತಿವೆ. ಆದರೂ ಸರ್ಕಾರ ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೆ ಗದಾಪ್ರಹಾರ ಮಾಡುತ್ತಲೇ ಬಂದಿದೆ. ಖಾಸಗಿ ಶಾಲಾ ಶಿಕ್ಷಣ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ’ ಎಂದು ಆರೋಪಿಸಿದರು.

ADVERTISEMENT

ಒಕ್ಕೂಟದ ಸಂಚಾಲಕ ಎಂ.ಎನ್. ಲೋಕೇಶ್, ‘ಶಿಕ್ಷಕರು ತಮ್ಮ ಹಕ್ಕುಗಳಿಗಾಗಿ ಪ್ರತಿಭಟನೆಗೆ ಮುಂದಾಗಿರುವುದು ದುರಂತ. ಪ್ರಜಾಪ್ರಭುತ್ವ ವ್ಯವಸ್ಥೆ ಯಾವ ಮಟ್ಟಕ್ಕೆ ಕುಸಿದಿದೆ ಎಂಬುದಕ್ಕೆ ಇದು ನಿದರ್ಶನ’ ಎಂದರು.

ಒಕ್ಕೂಟದ ಅಧ್ಯಕ್ಷ ಟಿ.ಎಂ.ಉಮಾಪತಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಸಿ.ಶ್ರೀರಾಮಮೂರ್ತಿ, ಕೆ.ಸಿ. ಲಿಂಗರಾಜು, ಆರ್.ಎಲ್. ಪ್ರಭಾಕರ್, ಎಂ.ಎಸ್. ಸಂತೋಷ್ ಕುಮಾರ್, ಕೆ.ಎಸ್. ಮಂಜುನಾಥ ಅಗಡಿ, ಎ.ಎನ್. ಪ್ರಸನ್ನ ಕುಮಾರ್, ಎಚ್‌.ಜೆ. ಮೈನುದ್ದೀನ್, ಕೆ.ಸಿ. ಮಂಜು, ಸಹನಾ ರವಿ, ಎಚ್.ಜಯಣ್ಣ, ವಿಜಯಕುಮಾರ್, ಪೃಥ್ವಿರಾಜ್ ಬಾದಾಮಿ, ನಾಗರಾಜ ಶೆಟ್ಟಿ, ಶಶಿಧರ್, ಅನಸೂಯ, ಸುರೇಶ್ ಕೆ., ರವಿ ಟಿ.ಆರ್., ಅರವಿಂದ ಪಿ.ಎಸ್. ಸೈಯದ್ ಮನಪುಶ್, ಕೆ.ಎಸ್. ಪ್ರಭುಕುಮಾರ್ ಪಾಲ್ಗೊಂಡಿದ್ದರು.

ಇದೇ ವೇಳೆ ಒಕ್ಕೂಟದ ಸಹ ಕಾರ್ಯದರ್ಶಿ ಕೆ.ಎಸ್. ಮಂಜುನಾಥ ಅಗಡಿ ಅವರನ್ನು ರುಪ್ಸಾದ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದಾಗಿ ಹಾಲನೂರು‌ ಎಸ್‌.ಲೇಪಾಕ್ಷ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.