ದಾವಣಗೆರೆ: ಮೂರು ವರ್ಷಗಳ ಹಿಂದೆ ಮಾಲೀಕನ ಮೇಲೆ ಹಲ್ಲೆ ನಡೆಸಿ ಟಗರು, ಮೇಕೆ, ಎರಡು ಮೇಕೆಮರಿಗಳನ್ನು ಕಳವು ಮಾಡಿದ್ದ ಮೂವರಿಗೆ 1ನೇ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯ ಏಳು ವರ್ಷ ಕಠಿಣ ಶಿಕ್ಷೆ ಮತ್ತು ₹ 5 ಸಾವಿರ ದಂಡ ವಿಧಿಸಿದೆ.
ಹಾವೇರಿ ಜಿಲ್ಲೆಯ ಹಿರೇಕೆರೂರಿನ ವಿಜಯನಗರ ನಿವಾಸಿ ರವಿ ಅಲಿಯಾಸ್ ಯಲ್ಲಪ್ಪ (25), ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ತಂಬ್ರಿಹಳ್ಳಿ ಚಿರಂಜೀವಿ ಅಲಿಯಾಸ್ ಗಾಳೆಪ್ಪ (23) ಹಾಗೂ ಒಬ್ಬ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ ಅಪರಾಧಿಗಳಾಗಿದ್ದಾರೆ.
2018ರ ಮೇ 31ರಂದು ಚನ್ನಗಿರಿ ತಾಲ್ಲೂಕಿನ ಯಲೋದಹಳ್ಳಿ ಪ್ರಕಾಶ್ ಅವರ ಕೋಳಿ ಫಾರ್ಮ್ ಎದುರು ಒಂದು ಟಗರು, ಮೇಕೆ, ಮೇಕೆ ಮರಿಗಳನ್ನು ಕಟ್ಟಿ ಹಾಕಿದ್ದರು. ಅವುಗಳನ್ನು ಕಳವು ಮಾಡಿ ಒಯ್ಯುವಾಗ ಪ್ರಕಾಶ್ ಪ್ರತಿರೋಧ ತೋರಿದ್ದರು. ಆಗ ದೊಣ್ಣೆಯಿಂದ ಹಲ್ಲೆ ನಡೆಸಿ, ಚಾಕು ತೋರಿಸಿ ಬೆದರಿಸಿ ಅಪರಾಧಿಗಳು ಟಗರು, ಮೇಕೆಗಳನ್ನು ಬೈಕ್ಗಳಲ್ಲಿ ಕೊಂಡೊಯ್ದಿದ್ದರು. ದಾರಿ ಮಧ್ಯೆ ಸಂತೇಬೆನ್ನೂರು ಪಿಎಸ್ಐ ಮಲ್ಲಿಕಾರ್ಜುನ್ ಮತ್ತು ಪೊಲೀಸರು ವಾಹನ ತಪಾಸಣೆ ನಡೆಸುವಾಗ ಸಿಕ್ಕಿಬಿದ್ದಿದ್ದರು. ಎರಡು ಬೈಕ್ಗಳು ಕೂಡ ಕಳವು ಮಾಡಿದ್ದವು ಎಂಬುದು ಆಗ ಗೊತ್ತಾಗಿತ್ತು. ಪ್ರಕರಣವನ್ನು ಬಸವಾಪಟ್ಟಣ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿತ್ತು. ಪಿಎಸ್ಐ ಮೇಘರಾಜ್, ಸಿಪಿಐ ಗಜೇಂದ್ರಪ್ಪ ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ್ದ ನ್ಯಾಯಾಧೀಶ ಕೆಂಗಬಾಲಯ್ಯ ಮಂಗಳವಾರ ಶಿಕ್ಷೆ ವಿಧಿಸಿದ್ದಾರೆ. ಸರ್ಕಾರಿ ಅಭಿಯೋಜಕ ಕೆ.ಕೆಂಚಪ್ಪ ವಾದ ಮಂಡಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.