ADVERTISEMENT

ಇಳಿಯದ ತುಂಗಭದ್ರಾ: ಮರದಲ್ಲೇ ಉಳಿದ ಮುಸಿಯಗಳು

ಮೂರು ದಿನಗಳಿಂದ ಮುಂದುವರಿದ ರಕ್ಷಣಾ ಕಾರ್ಯ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2020, 6:56 IST
Last Updated 9 ಆಗಸ್ಟ್ 2020, 6:56 IST
ರಾಜನಹಳ್ಳಿ ಬಳಿ ನದಿ ಮಧ್ಯೆ ಮರದಲ್ಲಿ ಉಳಿದ ಮುಸಿಯಗಳು
ರಾಜನಹಳ್ಳಿ ಬಳಿ ನದಿ ಮಧ್ಯೆ ಮರದಲ್ಲಿ ಉಳಿದ ಮುಸಿಯಗಳು   

ಹರಿಹರ: ತುಂಗಭದ್ರಾ ನದಿಯಲ್ಲಿ ಒಳಹರಿವು ಮತ್ತಷ್ಟು ಹೆಚ್ಚಾಗಿದೆ. ಮೂರು ದಿನಗಳಿಂದ ನದಿ ಮಧ್ಯದ ಮರದಲ್ಲಿ ಸಿಲುಕಿಕೊಂಡಿರುವ ಮುಸಿಯಗಳನ್ನು ರಕ್ಷಣೆ ಮಾಡಲು ಇನ್ನೂ ಸಾಧ್ಯವಾಗಿಲ್ಲ.

ಅರಣ್ಯ ಇಲಾಖೆ, ಪೊಲೀಸ್‌ ಹಾಗೂ ಅಗ್ನಿಶಾಮಕದಳ ಸಿಬ್ಬಂದಿ ಎರಡು ದಿನಗಳಿಂದ ಹರಸಾಹಸ ಮಾಡಿದ್ರು, ರಕ್ಷಣೆ ಮಾಡಲಾಗಿಲ್ಲ. ರಾಜನಹಳ್ಳಿ ಜಾಕ್‌ವೆಲ್‌ ಪಂಪ್‌ಹೌಸ್‌ ಬಳಿ ನದಿಯಲ್ಲಿ ಮರದಲ್ಲಿ 50 ಹೆಚ್ಚು ಮುಸಿಯಗಳು ವಾಸವಾಗಿದ್ದವು. ಮಲೆನಾಡಿನಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ನದಿ ನೀರಿನ ಹರಿವು ಹೆಚ್ಚಾಗಿದ್ದರಿಂದ ದಡಗಳನ್ನು ಮೀರಿ ಹೊಲಗದ್ದೆಗಳಿಗೂ ನೀರು ನುಗ್ಗಿದೆ. ಮುಸಿಯಗಳು ವಾಸಿಸುತ್ತಿದ್ದ ಮರವನ್ನೂ ಮೀರಿ ಸುಮಾರು 60 ಮೀಟರ್‌ಗಳಷ್ಟು ದೂರದವರೆಗೆ ನದಿ ಪಾತ್ರ ವಿಸ್ತರಿಸಿಕೊಂಡು ಹರಿಯುತ್ತಿದೆ.

ಆಗ್ನಿಶಾಮಕದ ಸಿಬ್ಬಂದಿ ಬೋಟ್‌ ಸಹಾಯದಿಂದ ಮುಸಿಯಗಳ ರಕ್ಷಣೆಗೆ ಪ್ರಯತ್ನಿಸಿದ್ದರು. ಆದರೆ ಇವರನ್ನು ಕಂಡು ಮುಸಿಯಗಳು ಮರದಲ್ಲಿ ಇನ್ನಷ್ಟು ಎತ್ತರಕ್ಕೆ ಹೋದವೇ ಹೊರತು ಇಳಿಯಲಿಲ್ಲ. ಆ ಮರದಿಂದ ದಡದಲ್ಲಿರುವ ವಿದ್ಯುತ್‌ ಕಂಬವೊಂದಕ್ಕೆ ಹಗ್ಗವನ್ನು ಕಟ್ಟಿ ಅದಕ್ಕೆ ಬಲೆಯನ್ನೂ ನೇತು ಹಾಕಿದ್ದಾರೆ. ಹಗ್ಗವನ್ನು ಅನುಸರಿಕೊಂಡು ಮುಸಿಯಗಳು ದಡ ಸೇರಬಹುದು ಎಂಬ ಆಶಯದಿಂದ. ಅದಕ್ಕೆ ಬಾಳೆಹಣ್ಣಿನ ಗೊನೆಯನ್ನೂ ಕಟ್ಟಲಾಗಿದೆ. ಆದರೂ ಅವು ದಡಕ್ಕೆ ಬರುತ್ತಿಲ್ಲ.

ADVERTISEMENT

ಮರದಿಂದ ದಡದವರೆಗೆ ರೋಪ್‌ ಲ್ಯಾಡರ್‌ ಕಟ್ಟಬೇಕು. ಅದರ ಮೂಲಕ ಮುಷ್ಯಗಳು ದಡಕ್ಕೆ ಬರಬಹುದು ಎಂಬ ನಂಬಿಕೆಯಿಂದ ಈಗ ರೋಪ್‌ ಲ್ಯಾಡರ್‌ಗಳನ್ನು ಸಿಬ್ಬಂದಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.