ADVERTISEMENT

100 ಎಕರೆ ಪ್ರದೇಶದಲ್ಲಿ ಅನಧಿಕೃತ ಬಡಾವಣೆ ನಿರ್ಮಾಣ: ರಾಜನಹಳ್ಳಿ ಶಿವಕುಮಾರ್

​ಪ್ರಜಾವಾಣಿ ವಾರ್ತೆ
Published 9 ಜುಲೈ 2021, 16:42 IST
Last Updated 9 ಜುಲೈ 2021, 16:42 IST
ರಾಜನಹಳ್ಳಿ ಶಿವಕುಮಾರ್‌
ರಾಜನಹಳ್ಳಿ ಶಿವಕುಮಾರ್‌   

ದಾವಣಗೆರೆ: ‘ನಗರದಲ್ಲಿ 100 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಅನಧಿಕೃತ ಬಡಾವಣೆಗಳು ಇದ್ದು, ಮಾಲೀಕರಿಗೆ ಈಗಾಗಲೇ ಎಚ್ಚರಿಕೆಯ ನೋಟಿಸ್ ನೀಡಲಾಗಿದೆ. ಶೀಘ್ರ ಅವುಗಳ ತೆರವು ಕಾರ್ಯಾಚರಣೆ ಆರಂಭಿಸಲಾಗುವುದು’ ಎಂದು ಧೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಎಚ್ಚರಿಕೆ ನೀಡಿದರು.

‘ಅನಧಿಕೃತ ಬಡಾವಣೆಗಳ ಒತ್ತುವರಿ ತೆರವಿಗೆ ಭದ್ರತೆ ಒದಗಿಸುವಂತೆ ಮನವಿ ಮಾಡಿ ಈಗಾಗಲೇ ಪೊಲೀಸ್ ಇಲಾಖೆಗೆ ಪತ್ರ ಬರೆದಿದ್ದು, ಅವರು ಅನುಮತಿ ನೀಡಿದ ಬಳಿಕ ತೆರವು ಕಾರ್ಯಾಚರಣೆ ಆರಂಭಿಸಲಾಗುವುದು. ದೊಡ್ಡಬೂದಿ ಹಾಳ್, ಯರಗುಂಟೆ ಮುಂತಾದ ಭಾಗಗಳಲ್ಲಿ ಕೃಷಿ ಭೂಮಿಯಲ್ಲಿ ನಿವೇಶನ ನೀಡಿರುವುದು. ಯೋಜನೆಗೆ ಅನುಮೋದನೆ ಪಡೆಯದಿರುವ ಪ್ರಕರಣಗಳು ಕಂಡುಬಂದಿವೆ. ನೋಂದಣಿ ಕಾರ್ಯ ಸ್ಥಗಿತಗೊಳಿಸುವಂತೆ ಧೂಡಾದಿಂದ ಮಾಡಿದ ಮನವಿಯ ಮೇರೆಗೆ ಉಪನೋಂದಣಾ ಧಿಕಾರಿ ಕಚೇರಿಯಲ್ಲಿ ನೋಂದಣಿ ಸ್ಥಗಿತಗೊಳಿ ಸಲಾಗಿದೆ’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಅನಧಿಕೃತ ಬಡಾವಣೆಗಳ ಬಗ್ಗೆ ನನ್ನ ಬಳಿ ಸಾಕ್ಷ್ಯ, ಆಧಾರಗಳು ಇವೆ. ಅಧಿಕಾರ ಹೋದರೂ ಚಿಂತೆ ಇಲ್ಲ. ಕಾನೂನು ಹೋರಾಟ ಮಾಡಿ ಧೂಡಾ ಆಸ್ತಿಯನ್ನು ವಾಪಸ್ ತರುತ್ತೇನೆ’ ಎಂದು ಎಚ್ಚರಿಸಿದರು.

ADVERTISEMENT

‘ಕಾಂಗ್ರೆಸ್ ಸದಸ್ಯನಿಂದ ಅನಧಿಕೃತ ಬಡಾವಣೆ ನಿರ್ಮಾಣ’: ‘ಕಾಂಗ್ರೆಸ್ ಮುಖಂಡರು ಈಚೆಗೆಪತ್ರಿಕಾಗೋಷ್ಠಿ ನಡೆಸಿ ನನ್ನ ವಿರುದ್ಧ ಆರೋಪ ಮಾಡಿದ್ದಾರೆ. ಆದರೆ ಕಾಂಗ್ರೆಸ್ ಪಾಲಿಕೆ ಸದಸ್ಯರೊಬ್ಬರು ಧೂಡಾಕ್ಕೆ ಶುಲ್ಕ ಪಾವತಿಸದೇ ಅನಧಿಕೃತ ಬಡಾವಣೆ ನಿರ್ಮಾಣ ಮಾಡಿ, ಲಕ್ಷಾಂತರ ರೂಪಾಯಿಯನ್ನು ವಂಚಿಸಿ
ದ್ದಾರೆ.ದೊಡ್ಡ ಬೂದಿಹಾಳ್ ಹಾಗೂ ಕರೂರು ಭಾಗದಲ್ಲಿ ಅನಧಿಕೃತ ಬಡಾವಣೆ ನಿರ್ಮಿಸುತ್ತಿದ್ದಾರೆ.‌ ಕಾಂಗ್ರೆಸ್ ಮುಖಂಡರಿಗೆ ನಿಜವಾಗಿಯೂ ಕಾಳಜಿ ಇದ್ದರೆ ಅನಧಿಕೃತ ಬಡಾವಣೆಗಳನ್ನು ತೆರವುಗೊಳಿಸಲಿ. ಧೂಡಾದಿಂದ ಅನುಮತಿ ಪಡೆದು
ಬಡಾವಣೆ ನಿರ್ಮಿಸುವಂತೆ ತಿಳಿ ಹೇಳಲಿ.ಇಲ್ಲದಿದ್ದರೆ, ಅವರಿಂದ ಪಾಲಿಕೆ ಸದಸ್ಯತ್ವಕ್ಕೆ ರಾಜೀನಾಮೆ ಕೊಡಿಸಲಿ’ ಎಂದು ಸವಾಲು ಹಾಕಿದರು.

ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ: ‘ಆವರಗೆರೆ ಸರ್ವೇ ನಂಬರ್ 220ರಲ್ಲಿ ನಿರ್ಮಾಣವಾಗಿರುವ ಬಡಾಣೆಯಲ್ಲಿ ಯಾವುದೇ ಕಾಮಗಾರಿ ನಡೆಯದೇ ಧೂಡಾ ಅಧ್ಯಕ್ಷರು ಹಣ ಪಡೆದು ಅಂತಿಮ ವಿನ್ಯಾಸ ನೀಡಿದ್ದಾರೆ ಎಂದು ಆರೋಪಿಸಿರುವ ಕಾಂಗ್ರೆಸ್ ಮುಖಂಡರು,ದಾಖಲೆ ನೀಡಿ ಆರೋಪ ಸಾಬೀತು ಪಡೆಸಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ’ ಎಂದುರಾಜನಹಳ್ಳಿ ಶಿವಕುಮಾರ್ ಸವಾಲು ಹಾಕಿದರು.

‘ಕೆಲ ಕಾಮಗಾರಿನಡೆಯದಿದ್ದರೂ ಧೂಡಾ ಅಧ್ಯಕ್ಷರು ಬಡಾವಣೆಗೆ ಅಂತಿಮ ವಿನ್ಯಾಸ ನೀಡಿದ್ದಾರೆ. ದುಡ್ಡು ಕೊಟ್ಟರೆ ಧೂಡಾದಲ್ಲಿ ಏನು ಬೇಕಾದರೂಮಾಡಿಕೊಳ್ಳಬಹುದು ಎಂದು ಪಾಲಿಕೆ ವಿರೋಧ ಪಕ್ಷದ ನಾಯಕ ಎ. ನಾಗರಾಜ್ ಆರೋಪಿಸಿದ್ದು, ಅವರು ದಾಖಲೆ ಸಮೇತ ಬಂದು ಆರೋಪ ಸಾಬೀತುಪಡಿಸಲಿ. ಅಲ್ಲಿ ಏನು ತಪ್ಪಾಗಿದೆ ಎಂಬುದನ್ನು ತೋರಿಸಲಿ’ ಎಂದು ಹೇಳಿದರು.

‘ನಾನು ಯಾವುದೇ ಬಡಾವಣೆಗೆ ಅಂತಿಮ ವಿನ್ಯಾಸ ನೀಡಬೇಕಾದರೆ ಹತ್ತು ಬಾರಿ ಪರಿಶೀಲಿಸುತ್ತೇನೆ. ಕಾನೂನು ಬಾಹಿರವಾಗಿ ಒಂದೇ ಒಂದು ಗೆರೆ ಎಳೆದಿರುವುದನ್ನು ಕಾಂಗ್ರೆಸ್ ಮುಖಂಡರು ಸಾಬೀತುಪಡಿಸಲಿ ಎಂದು ಸವಾಲು ಹಾಕಿದರು.

‘ಆವರಗೆರೆ ಸರ್ವೆ ನಂಬರ್‌ನಲ್ಲಿನಿರ್ಮಾಣವಾಗಿರುವ ಬಡಾವಣೆಯಲ್ಲಿ ಮುಖ್ಯ ರಸ್ತೆಯಿಂದ ಒಳ ರಸ್ತೆಗಳಿಗೆಸಂಪರ್ಕ ಇಲ್ಲದಿದ್ದರೂ 2018ರಲ್ಲಿ ಕಾಂಗ್ರೆಸ್‍ನವರೇ ಆ ಬಡಾವಣೆಗೆ ಮೊದಲ ಹಂತದ ಅನುಮತಿ ನೀಡಿದ್ದಾರೆ.ಈಗ ಆರೋಪ ಮಾಡುತ್ತಿರುವ ಅವರು ಆಗ ಕತ್ತೆ ಕಾಯುತ್ತಿದ್ದರಾ’ ಎಂದು ಪ್ರಶ್ನಿಸಿದರು.

ಧೂಡಾ ಸದಸ್ಯರಾದ ದೇವಿರಮ್ಮ, ಸೌಭಾಗ್ಯ ಮುಕುಂದ, ಜಯರುದ್ರೇಶ್, ರಾಜು ರೋಖಡೆ, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಎಲ್.ಡಿ. ಗೋಣೆಪ್ಪ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.