ಉಚ್ಚಂಗಿದುರ್ಗ: ಅರಸೀಕೆರೆ ಹೋಬಳಿ ವ್ಯಾಪ್ತಿಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ನಾಗತಿಕಟ್ಟೆ ತಾಂಡಾದಲ್ಲಿ ಮಂಗಳವಾರ ರಾತ್ರಿ ಮನೆಯ ಗೋಡೆ ಕುಸಿದು ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಗ್ರಾಮದ ಶೇಖರನಾಯ್ಕ, ಅವರ ಪತ್ನಿ ಲಕ್ಷ್ಮೀಬಾಯಿ, ಪುತ್ರಿ ತೇಜಸ್ವಿನಿ ಗಾಯಗೊಂಡವರು. ಮಂಗಳವಾರ ರಾತ್ರಿ ಮಲಗಿದ್ದಾಗ ಸಿಮೆಂಟ್ ಇಟ್ಟಿಗೆಯಿಂದ ಕಟ್ಟಿದ ಗೋಡೆ ಕುಸಿದು ಅವರ ಮೇಲೆ ಬಿದ್ದಿದೆ. ಗಾಯಗೊಂಡು ಕೂಗುತ್ತಿದ್ದುದನ್ನು ಕೇಳಿ ಅಕ್ಕಪಕ್ಕದವರು ಇಟ್ಟಿಗೆಯ ಮಧ್ಯದಲ್ಲಿ ಸಿಲುಕಿಕೊಂಡಿದ್ದ ಅವರನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದರು.
ಹೋಬಳಿಯ ಉಚ್ಚಂಗಿದುರ್ಗ, ಹಿರೇಮೆಗಳಗೆರೆ ವ್ಯಾಪ್ತಿಯಲ್ಲಿ ಈಚೆಗೆ ಸುರಿದ ದಾಖಲೆ ಮಳೆಗೆ ಶೇಖರನಾಯ್ಕ ಅವರ ಮನೆಗೆ ನೀರು ನುಗ್ಗಿ, ಸಂಪೂರ್ಣ ಜಲಾವೃತಗೊಂಡಿತ್ತು. ಮನೆಯಲ್ಲಿನ ನೀರನ್ನು ಸೋಮವಾರ ಹೊರಹಾಕಿ ವಾಸಕ್ಕೆ ವ್ಯವಸ್ಥೆ ಮಾಡಿಕೊಂಡಿದ್ದರು. ಆದರೆ ಅಧಿಕ ತೇವಾಂಶದಿಂದ ಮನೆಯೊಳಗಿನ ಗೋಡೆ ಕುಸಿದಿದೆ.
ಬುಧವಾರ ಬೆಳಿಗ್ಗೆ ಸ್ಥಳಕ್ಕೆ ಅರಸೀಕೆರೆ ರಾಜಸ್ವ ನಿರೀಕ್ಷಕ ಶ್ರೀಧರ್, ಗ್ರಾಮ ಲೆಕ್ಕಾಧಿಕಾರಿ ಶ್ರೀಕಾಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಹಿರೇಮೆಗಳಗೆರೆ ಪಿಡಿಒ ಚಂದ್ರಶೇಖರ್, ಮುಖಂಡರಾದ ವಡ್ಡಿನಹಳ್ಳಿ ಮಂಜುನಾಥ್, ವೆಂಕಟೇಶ್ ನಾಯ್ಕ ಆಸ್ಪತ್ರೆಗೆ ತೆರಳಿ ಸಂತ್ರಸ್ತರಿಗೆ ಆರ್ಥಿಕ ನೆರವು ನೀಡಿದರು.
ಹಾಳಾದ ರಸ್ತೆ– ಎರಡು ಗಂಟೆ ತಡವಾಗಿ ಬಂದ ಆಂಬುಲೆನ್ಸ್: ಮನೆಯ ಗೋಡೆ ಕುಸಿದು ತೀವ್ರವಾಗಿ ಗಾಯಗೊಂಡಿದ್ದವರನ್ನು ಆಸ್ಪತ್ರೆಗೆ ಸಾಗಿಸಲು ಆಂಬುಲೆನ್ಸ್ಗೆ ಕರೆ ಮಾಡಿದ ಎರಡು ಗಂಟೆ ಬಳಿಕ ಬಂತು. ಗ್ರಾಮಕ್ಕೆ ಬರುವ ಯಾವ ರಸ್ತೆಯೂ ಅಭಿವೃದ್ಧಿ ಕಂಡಿಲ್ಲ. ಇರುವ ಕಚ್ಚಾ ರಸ್ತೆಯು ಮಳೆ ಸುರಿದಿದ್ದರಿಂದ ತಗ್ಗುಗಳಲ್ಲಿ ನೀರು ನಿಂತು ರಸ್ತೆ ಗೋಚರಿಸದೇ ಆಂಬುಲೆನ್ಸ್ ಚಾಲಕ ಹರಸಾಹಸ ಪಟ್ಟು ಬಂದರು ಎಂದು ಸ್ಥಳೀಯರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.