ಸಂತೇಬೆನ್ನೂರು: ‘ಮಣ್ಣಿನ ಫಲವತ್ತತೆ ಹೆಚ್ಚಿಸಲು ಸೋಯಾಬೀನ್ ಉತ್ತಮ ದ್ವಿದಳ ಧಾನ್ಯ ಬೆಳೆ. ಮೆಕ್ಕೆಜೋಳಕ್ಕೆ ಪರ್ಯಾಯವಾಗಿ ಸೋಯಾಬೀನ್ ಬೆಳೆಯಿರಿ’ ಎಂದು ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ತಜ್ಞ ಬಿ.ಒ.ಮಲ್ಲಿಕಾರ್ಜುನ ಹೇಳಿದರು.
ಸಮೀಪದ ನುಗ್ಗಿಹಳ್ಳಿ ಗ್ರಾಮದಲ್ಲಿ ಸೋಮವಾರ ರೈತ ಸಂಪರ್ಕ ಕೇಂದ್ರ ಹಾಗೂ ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಆಶ್ರಯದಲ್ಲಿ ಸೋಯಾಬೀನ್ ಸಮಗ್ರ ಬೆಳೆ ನಿರ್ವಹಣೆ ಮುಂಚೂಣಿ ಪ್ರಾತ್ಯಕ್ಷಿಕೆ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸೋಯಾಬೀನ್ ಶೇ 40ರಷ್ಟು ಪ್ರೊಟೀನ್ ಹೊಂದಿರುವ ಏಕೈಕ ಬೆಳೆ. ಇದರ ಹೊಸ ತಳಿ ಡಿಎಸ್ಬಿ 34 ಪರಿಚಯಿಸಲಾಗುತ್ತಿದೆ. ಕೇವಲ 90 ದಿನಗಳಲ್ಲಿ ಉತ್ತಮ ಇಳುವರಿ ಕೊಡಲಿದೆ. ಬಿತ್ತನೆ ಸಂದರ್ಭದಲ್ಲಿ ಪ್ರತಿ ಕೆ.ಜಿ. ಬೀಜಕ್ಕೆ 4 ಗ್ರಾಂ ಟ್ರೈಕೋಡರ್ಮದಿಂದ ಬೀಜೋಪಚಾರ ಮಾಡಿ ಬಿತ್ತನೆ ಮಾಡಬೇಕು’ ಎಂದು ತಿಳಿಸಿದರು.
ಕೃಷಿ ಇಲಾಖೆ ಸೌಲಭ್ಯಗಳು ಹಾಗೂ ವಿಜ್ಞಾನಿಗಳು ತಿಳಿಸಿದ ತಾಂತ್ರಿಕತೆ ಬಳಸಿಕೊಂಡು ಆದಾಯ ಹೆಚ್ಚಿಸಿಕೊಳ್ಳಿ ಎಂದು ಕೃಷಿ ಅಧಿಕಾರಿ ಕುಮಾರ್ ತಿಳಿಸಿದರು.
ವಿಸ್ತರಣಾ ತಜ್ಞ ರಘುರಾಜ್, ಕೃಷಿ ಇಲಾಖೆ ಸಿಬ್ಬಂದಿ, ಪ್ರಗತಿಪರ ರೈತರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.