ADVERTISEMENT

ಮೀಸಲಾತಿ: ಕಿವಿಗೆ ಹೂವಿಡುತ್ತಿರುವ ಸಿ.ಎಂ-ಪ್ರಸನ್ನಾನಂದಪುರಿ ಸ್ವಾಮೀಜಿ

ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2021, 15:58 IST
Last Updated 9 ಏಪ್ರಿಲ್ 2021, 15:58 IST
ಪ್ರಸನ್ನಾನಂದಪುರಿ ಸ್ವಾಮೀಜಿ
ಪ್ರಸನ್ನಾನಂದಪುರಿ ಸ್ವಾಮೀಜಿ   

ದಾವಣಗೆರೆ: ‘ವಾಲ್ಮೀಕಿ ಸಮುದಾಯಕ್ಕೆ ಶೇ 7.5 ಮೀಸಲಾತಿ ನೀಡುವ ವಿಚಾರದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಮಾಜದವರ ಕಿವಿಯ ಮೇಲೆ ಹೂವಿಡುವ ಕೆಲಸ ಮಾಡುತ್ತಿದ್ದಾರೆ’ ಎಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು.

ವಾಲ್ಮೀಕಿ ಜಾತ್ರೆಯ ಯಶಸ್ಸಿಗೆ ಶ್ರಮಿಸಿದವರನ್ನು ಶುಕ್ರವಾರ ಸನ್ಮಾನಿಸಿ ಅವರು ಮಾತನಾಡಿದರು.

‘ರಾಜನಹಳ್ಳಿಯಿಂದ ಬೆಂಗಳೂರಿಗೆ ಪಾದಯಾತ್ರೆ ನಡೆಸಿದಾಗ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿ ರಚಿಸಲಾಗಿತ್ತು. ಮತ್ತೆ ಹೋರಾಟ ನಡೆಸಿದಾಗ ಮೂಗಿಗೆ ತುಪ್ಪ ಸವರುವಂತೆ ಸಚಿವ ಸಂಪುಟದ ಉಪ ಸಮಿತಿ ರಚಿಸಿದರು. ಪುನಃ ಹೋರಾಟ ಪ್ರಾರಂಭಿದಾಗ ತ್ರಿಸದಸ್ಯರ ಉನ್ನತ ಸಮಿತಿಯನ್ನು ಸರ್ಕಾರ ರಚಿಸಿದೆ. ಇದನ್ನು ರಚಿಸುವ ಅವಶ್ಯಕತೆ ಇತ್ತೆ? ಯಾವ ಪ್ರಜ್ಞಾವಂತರೂ ಇದನ್ನು ಒಪ್ಪುವುದಿಲ್ಲ’ ಎಂದರು.

ADVERTISEMENT

‘ಎರಡನೆ ವಾಲ್ಮೀಕಿ ಜಾತ್ರೆಯ ವೇಳೆ ಯಡಿಯೂರಪ್ಪ ಅವರು ನಾಗಮೋಹನ್‌ ದಾಸ್ ಸಮಿತಿ ವರದಿ ನೀಡಿದ ತಕ್ಷಣ ಮೀಸಲಾತಿ ನೀಡಲಾಗುವುದು ಎಂಬ ಭರವಸೆ ನೀಡಿದ್ದರು. ನಾಗಮೋಹನ್‌ ದಾಸ್ ಸಮಿತಿ ಜುಲೈನಲ್ಲೇ ವರದಿ ನೀಡಿದ್ದರೂ ಮೀಸಲಾತಿ ನೀಡಿಲ್ಲ.ಈ ಬಾರಿಯ ಜಾತ್ರೆಯಲ್ಲಿ ಮತ್ತೆ ಕಿವಿಯ ಮೇಲೆ ಹೂವಿಡುತ್ತಾರೆ ಎಂಬುದು ಗೊತ್ತಾಗಿ ಮೀಸಲಾತಿ ಘೋಷಣೆ ಮಾಡಲೇಬೇಕು ಎಂದು ಅವರನ್ನು ಪಟ್ಟು ಹಿಡಿದು ಕೇಳಿದೆ’ ಎಂದರು.

‘ದ್ವಾಪರ ಯುಗದ ಕಾಲದಿಂದಲೂ ಮೇಲ್ವರ್ಗದವರು ಶೋಷಿತ ಸಮುದಾಯವನ್ನು ತುಳಿಯುತ್ತಿದ್ದಾರೆ’ ಎಂದು ಆರೋಪಿಸಿ ಏಕಲವ್ಯನ ನಿದರ್ಶನ ನೀಡಿದ ಸ್ವಾಮೀಜಿ, ‘ಈಗಲೂ ಸಮಾಜದ ಹೆಣ್ಣುಮಗಳನ್ನು ಮುಂದಿಟ್ಟುಕೊಂಡು ಸಮುದಾಯದ ನಾಯಕನನ್ನು ಮುಗಿಸುವ ಪ್ರಯತ್ನ ನಡೆಯುತ್ತಿದೆ’ ಎಂದು ರಮೇಶ ಜಾರಕಿಹೊಳಿ ಅವರ ಹೆಸರನ್ನು ಹೇಳದೇ ಪ್ರಸ್ತಾಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.