ADVERTISEMENT

ದಾವಣಗೆರೆ| ಮರೆಯಾದ ಜಾತೀಯತೆ, ಸೃಷ್ಟಿಯಾದ ಸಮಾನತೆ: ವೀರೇಂದ್ರ ಹೆಗ್ಗಡೆ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2026, 4:46 IST
Last Updated 1 ಫೆಬ್ರುವರಿ 2026, 4:46 IST
<div class="paragraphs"><p>ದಾವಣಗೆರೆಯಯಲ್ಲಿ ಆಯೋಜಿಸಿದ್ದ ಸರ್ವಧರ್ಮ ಸಮ್ಮೇಳನ ಹಾಗೂ ಸಾಧಕರಿಗೆ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ದೀಪ ಬೆಳಗಿಸಿ ಉದ್ಘಾಟಿಸಿದರು</p></div>

ದಾವಣಗೆರೆಯಯಲ್ಲಿ ಆಯೋಜಿಸಿದ್ದ ಸರ್ವಧರ್ಮ ಸಮ್ಮೇಳನ ಹಾಗೂ ಸಾಧಕರಿಗೆ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ದೀಪ ಬೆಳಗಿಸಿ ಉದ್ಘಾಟಿಸಿದರು

   

ಪ್ರಜಾವಾಣಿ ಚಿತ್ರ

ದಾವಣಗೆರೆ: ‘ದಶಕಗಳ ಹಿಂದೆ ಇದ್ದ ಜಾತೀಯತೆ ಈಗಿಲ್ಲ. ಜಾತೀಯತೆ ದೂರಾಗಿ ಎಲ್ಲಾ ಜಾತಿ, ಜನಾಂಗದವರು, ಧರ್ಮದವರು ಒಟ್ಟಾಗಿ ಕುಳಿತು ಮಾತನಾಡುವ, ಊಟ ಮಾಡುವಂತಹ ಸಮಾನತೆಯ ವಾತಾವರಣ ಸೃಷ್ಟಿಯಾಗಿರುವುದು ಸಂತೋಷದ ವಿಷಯವಾಗಿದೆ’ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟರು. 

ADVERTISEMENT

ನಗರದ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಕಲ್ಯಾಣ ಮಂಟಪದಲ್ಲಿ ಅದ್ವೈತ ನ್ಯಾಷನಲ್ ಸೇವಾ ಫೌಂಡೇಷನ್ ವತಿಯಿಂದ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಶನಿವಾರ ನಡೆದ ಸರ್ವಧರ್ಮ ಸಮ್ಮೇಳನ ಹಾಗೂ ಸಾಧಕರಿಗೆ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. 

‘ಸಮಾಜದಲ್ಲಿ ಅಂತರ್‌ಜಾತಿ, ಅಂತರ್‌ಧರ್ಮ ವಿವಾಹಗಳು ನಡೆಯುತ್ತಿವೆ. ಹಿಂದೆ ಜಾತಿ ಆಧರಿಸಿ ಸಂಬಂಧಗಳು ಬೆಳೆಯುತ್ತಿದ್ದವು. ಇದೀಗ ವೈಯಕ್ತಿಕ ಗುಣದ ಮೇಲೆ ಸಂಬಂಧಗಳು ಬೆಳೆಯುತ್ತಿವೆ. ಗ್ರಾಮೀಣ ಪ್ರದೇಶಗಳಲ್ಲೂ ಬದಲಾವಣೆ ಕಾಣುತ್ತಿದ್ದೇವೆ’ ಎಂದು ಹೇಳಿದರು. 

‘ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದಲ್ಲಿ ಜಾತಿ, ಮತಗಳ ಬೇಧವಿಲ್ಲದೇ ಎಲ್ಲ ವರ್ಗದವರೂ ಸದಸ್ಯತ್ವ ಪಡೆದಿದ್ದಾರೆ. ಲಕ್ಷಾಂತರ ಸದಸ್ಯರು ಸಂಘದಿಂದ ಸಾಲ –ಸೌಲಭ್ಯ ಪಡೆದು ಬದುಕು ಕಟ್ಟಿಕೊಂಡಿದ್ದಾರೆ. ಸಂಘದಿಂದ ಮದ್ಯವರ್ಜನ ಶಿಬಿರ, ಕೆರೆ ಹಾಗೂ ದೇವಸ್ಥಾನಗಳ ಅಭಿವೃದ್ಧಿ ಸೇರಿದಂತೆ ಹಲವು ಸತ್ಕಾರ್ಯಗಳು ನಡೆಯುತ್ತಿವೆ’ ಎಂದರು. 

‘ಶಾಮನೂರು ಶಿವಶಂಕರಪ್ಪ ಅವರು ಈ ಭಾಗದ ಯಜಮಾನರಾಗಿದ್ದರು. ಅವರ ಪ್ರೀತಿ ಅಪೂರ್ವವಾದುದು. ದಾವಣಗೆರೆಗೆ ಭೇಟಿ ನೀಡಿದಾಗ ಅವರ ಒಡೆತನದ ವಿದ್ಯಾಸಂಸ್ಥೆಗಳನ್ನು ನೋಡಿ ಪ್ರೇರಣೆಗೊಂಡು, ನಮ್ಮ ಶಾಲೆ– ಕಾಲೇಜುಗಳ ಕಟ್ಟಡಗಳನ್ನು ವ್ಯವಸ್ಥಿತವಾಗಿ ನಿರ್ಮಿಸಿದೆವು’ ಎಂದು ಹೇಳಿದರು. 

ಫೌಂಡೇಷನ್‌ನ ರಾಷ್ಟ್ರೀಯ ಅಧ್ಯಕ್ಷ ಸುಮುಖ ಸತೀಶಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿವಿಧ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. 

‘ಧೂಡಾ’ ಅಧ್ಯಕ್ಷ ದಿನೇಶ್ ಶೆಟ್ಟಿ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಯದೇವ ನಾಯ್ಕ, ಸಚಿವ ಎಸ್‌.ಎಸ್.ಮಲ್ಲಿಕಾರ್ಜುನ್ ಪುತ್ರ ಸಮರ್ಥ್ ಶಾಮನೂರು, ಪ್ರಮುಖರಾದ ಎಂ.ಬಿ.ಲಕ್ಷ್ಮಿನಾರಾಯಣ, ಸಂತೋಷಕುಮಾರ್ ಎಂ., ನಿರಂಜನ ದೇಶಪಾಂಡೆ, ಶ್ರೀಕಾಂತ್ ಪ್ರಸಾದ್, ಮಲ್ಲೇಶ್‌, ಸತೀಶ್ ಪಾದ್ರೆ, ವೆಂಕಟೇಶ್ ಗುರೂಜಿ, ತಿಪ್ಪೇಸ್ವಾಮಿ ಆಚಾರ್ಯ, ಸುಜ್ಞಾನಮೂರ್ತಿ, ಅರುಣ್ ಜೆ., ಕುಸುಮಾ ಶ್ರೇಷ್ಠಿ, ನಟರಾಜ್ ಬಾದಾಮಿ, ಎ.ಗೋವಿಂದ ರೆಡ್ಡಿ, ನಾಗನಗೌಡ, ಚಂದ್ರಶೇಖರ ಪೂಜಾರಿ, ಅಣಬೇರು ಮಂಜಣ್ಣ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು. 

ಧರ್ಮಸ್ಥಳದಲ್ಲಿ ಭಕ್ತರು ಈ ಮೊದಲು ನೆಲದ ಮೇಲೆ ಕುಳಿತು ಊಟ ಮಾಡುತ್ತಿದ್ದರು. ಸರ್ವರಿಗೂ ಗೌರವ ದೊರೆಯಬೇಕು ಎಂಬ ಕಾರಣಕ್ಕೆ ದಾಸೋಹದ ಸಭಾಂಗಣದಲ್ಲಿ ಟೇಬಲ್‌ ವ್ಯವಸ್ಥೆ ಮಾಡಿದ್ದೇವೆ
ಡಿ.ವೀರೇಂದ್ರ ಹೆಗ್ಗಡೆ ಧರ್ಮಸ್ಥಳದ ಧರ್ಮಾಧಿಕಾರಿ

‘ಸರ್ವಧರ್ಮೀಯರು ಒಂದಾಗಿ ಬದುಕಲಿ’

‘ಪ್ರತಿ 100 ಕಿ.ಮೀ. ಅಂತರದಲ್ಲೂ ಭಾಷೆ ಜನ ಸಂಸ್ಕೃತಿ ಬದಲಾಗುವ ವೈಶಿಷ್ಟ್ಯವನ್ನು ನೋಡಲು ಭಾರತದಲ್ಲಿ ಮಾತ್ರ ಸಾಧ್ಯ. ಒಂದೇ ತೋಟದ ಬಗೆಬಗೆಯ ಹೂವಿನಂತೆ ಸರ್ವಧರ್ಮೀಯರು ಒಂದಾಗಿ ಬದುಕಬೇಕು’ ಎಂದು ಮಾಜಿ ರಾಷ್ಟ್ರಪತಿ ದಿ. ಗ್ಯಾನಿ ಜೈಲ್‌ಸಿಂಗ್  ಅವರ ಮೊಮ್ಮಗ ಇಂದ್ರಜಿತ್ ಗ್ಯಾನಿ ಜೈಲ್ ಸಿಂಗ್‌ ಹೇಳಿದರು.  ‘ಸರ್ವಧರ್ಮಿಯರನ್ನು ಒಗ್ಗೂಡಿಸುವುದು ಉತ್ತಮ ಕೆಲಸ. ಹಿಂದುಳಿದ ವರ್ಗದವರನ್ನು ಸಂಘಟಿಸಲು ಪ್ರಯತ್ನಿಸುತ್ತಿದ್ದೇನೆ. ಹಿಂದುಳಿದವರು ಪರಿಶಿಷ್ಟ ಜಾತಿ ಮತ್ತು ಪಂಗಡದವರು ಒಂದಾಗಿ ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸಬೇಕು’ ಎಂದು ಕಿವಿಮಾತು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.