ADVERTISEMENT

ಕೊರೊನಾ ವಾರಿಯರ್ಸ್ | 'ಕೋವಿಡ್ ರೋಗಿಗಳಿಗೆ ಆತ್ಮಸ್ಥೈರ್ಯ ತುಂಬುವವರೇ ನಾವು'

ಚಿಗಟೇರಿ ಜಿಲ್ಲಾ ಆಸ್ಪತ್ರೆಯ ಡಿ ಗ್ರೂಪ್ ನೌಕರರ ಮನದಾಳ

ಡಿ.ಕೆ.ಬಸವರಾಜು
Published 11 ಜುಲೈ 2020, 8:35 IST
Last Updated 11 ಜುಲೈ 2020, 8:35 IST
ಕೋವಿಡ್ ಆಸ್ಪತ್ರೆಯ ‘ಡಿ’ ಗ್ರೂಪ್ ನೌಕರರು
ಕೋವಿಡ್ ಆಸ್ಪತ್ರೆಯ ‘ಡಿ’ ಗ್ರೂಪ್ ನೌಕರರು   
""

ದಾವಣಗೆರೆ: ಕೋವಿಡ್–19 ರೋಗಿಗಳನ್ನು ನೋಡಲು ಯಾರೂ ಸಂಬಂಧಿಕರು ಬರುವುದಿಲ್ಲ. ಅಂತಹುದರಲ್ಲಿ ಅವರನ್ನು ಮಾತನಾಡಿಸಿ ಆತ್ಮಸ್ಥೈರ್ಯ ತುಂಬುತ್ತೇವೆ.

ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಡಿ –ಗ್ರೂಪ್‌ ನೌಕರರ ಮಾತು. ಸೇವಾ ಅಭದ್ರತೆಯ ಭಯದಲ್ಲೇ 100 ಮಹಿಳೆಯರೂ ಸೇರಿ 250 ಡಿ ಗ್ರೂಪ್ ನೌಕರರು ಇದ್ದು, ಅವರು ಆಸ್ಪತ್ರೆಯಲ್ಲಿ ಶುಚಿತ್ವದ ವೈದ್ಯರಿಗೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದಾರೆ.

‘ಆಸ್ಪತ್ರೆಯಲ್ಲಿ ರೋಗಿಗಳಿಗೆ ಸಂಬಂಧಿಗಳು ಇರಲಿ ಸ್ವಂತ ಮಕ್ಕಳೂ ರೋಗಿಗಳನ್ನು ನೋಡಲು ಆಸ್ಪತ್ರೆಗೆ ಬರುವುದಿಲ್ಲ. ಇಂತಹ ಸಮಯದಲ್ಲಿ ರೋಗಿಗಳಿಗೆ ನೋವು ಬಾರದಂತೆ ನೋಡಿಕೊಳ್ಳುತ್ತೇವೆ. ರೋಗಿಗಳನ್ನು ಅನುಮಾನದಿಂದ ನೋಡಿದರೆ ಅವರಿಗೆ ನೋವು ಆಗುತ್ತದೆ. ‘ಕೊರೊನಾ ಏನು ಮಾಡುವುದಿಲ್ಲ. ಮೂರ್ನಾಲ್ಕು ದಿವಸ ಇದ್ದು ಹೋಗುತ್ತದೆ’ ಎಂದು ಆತ್ಮಸ್ಥೈರ್ಯ ತುಂಬುತ್ತೇವೆ.

ADVERTISEMENT

ವೈದ್ಯರಿಗಿಂತ ಹೆಚ್ಚು ಹೊತ್ತು ರೋಗಿಗಳ ಜೊತೆಯಲ್ಲಿ ಇರುತ್ತೇವೆ’ ಎಂದು ಹೇಳುತ್ತಾರೆ. ಸರ್ಕಾರಿ ಚಿಗಟೇರಿ ಜಿಲ್ಲಾ ಚಿಗಟೇರಿ ಆಸ್ಪತ್ರೆ ದಿನಗೂಲಿ ನೌಕರರ ಡಿ–ಗ್ರೂಪ್‌ ಸಂಘದ ಅಧ್ಯಕ್ಷ ಜಿ.ಎಚ್. ಮಾಲತೇಶ್,

ಕಸ ಗುಡಿಸುವುದರಿಂದ ಹಿಡಿದು ಆಸ್ಪತ್ರೆಯ ಬೆಡ್‌ಗಳು, ಶೌಚಾಲಯಗಳನ್ನು ಶುಚಿ ಮಾಡುವುದು. ಧೋಬಿಘಾಟ್‌ನಲ್ಲಿ ಬಟ್ಟೆ ಹೊಗೆಯುವುದು. ಹೆರಿಗೆ ವಿಭಾಗದಲ್ಲಿ ಕೆಲಸ, ನಾನ್‌ ಕ್ಲಿನಿಕಲ್, ಭದ್ರತಾ ಸಿಬ್ಬಂದಿ, ಆಫೀಸ್‌ಬಾಯ್, ಗಂಟಲು ಮಾದರಿ ಸಂಗ್ರಹಿಸುವವರಿಗೆ ಸಹಾಯಕರಾಗಿ ಕೆಲಸ ಮಾಡುತ್ತೇವೆ. ಕೆಲಸದ ಜೊತೆಗೆ ರೋಗಿಗಳಿಗೆ ಮಾನಸಿಕವಾಗಿ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ.

ಕೋವಿಡ್–19 ಸಂದರ್ಭದಲ್ಲಿ ಜೀವವನ್ನು ಕೈಯಲ್ಲಿ ಹಿಡಿದು ಕೆಲಸ ಮಾಡುತ್ತಿದ್ದೇವೆ. ನಮ್ಮಲ್ಲೂ ಮೂವರಿಗೆ ಕೊರೊನಾ ವೈರಸ್ ದೃಢಪಟ್ಟಿತ್ತು. ಆ ಸಂದರ್ಭ 25ಕ್ಕೂ ಹೆಚ್ಚು ಮಂದಿಯನ್ನು ಕ್ವಾರಂಟೈನ್ ಮಾಡಲಾಗಿತ್ತು. ಈಗ ಗುಣಮುಖರಾಗಿದ್ದಾರೆ. ಕೊರೊನಾ ಭಯದಲ್ಲೂ ಧೈರ್ಯದಿಂದ ಕೆಲಸ ಮಾಡುತ್ತಿದ್ದೇವೆ’ ಎಂದು ಹೇಳುತ್ತಾರೆ.

ಬಾಡಿಗೆ ಮನೆಯಲ್ಲಿ ತೊಂದರೆ:‘ನಾವು ಕೋವಿಡ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತೇವೆ ಎಂದು ಗೊತ್ತಾದ ನಂತರ ಬಾಡಿಗೆ ಮನೆಯವರು ಖಾಲಿ ಮಾಡಿ ಎಂದು ಹೇಳಿ ಬೆದರಿಸಿದ್ದಾರೆ. ನಿಟುವಳ್ಳಿಯಲ್ಲಿ ಮಹಿಳೆಯೊಬ್ಬರಿಗೆ ಮನೆ ಖಾಲಿ ಮಾಡಿಸಿದ್ದರು. ಅಕ್ಕಪಕ್ಕದ ಮನೆಯವರೂ ನಮ್ಮನ್ನು ಒಂದು ರೀತಿಯಲ್ಲಿ ನೋಡುತ್ತಾರೆ. ಪೊಲೀಸರಿಗೆ ದೂರು ನೀಡಿದ ಮೇಲೆ ಇನ್‌ಸ್ಪೆಕ್ಟರ್ ಹೋಗಿ ಬುದ್ಧಿಮಾತು ಹೇಳಿ ಕಳುಹಿಸಿದರು‘ ಎಂದು ಸಂಘದ ಗೌರವಾಧ್ಯಕ್ಷ ಡಿ. ಹನುಮಂತಪ್ಪ ಹೇಳುತ್ತಾರೆ.

‘ಕೋವಿಡ್–19 ಬಂದ ಆರಂಭದಲ್ಲಿ ಭಯ ಇತ್ತು. ಪಿಪಿಇ ಕಿಟ್‌ಗಳನ್ನು ಧರಿಸಿ ಕೆಲಸ ಮಾಡಿದೆವು. ಆನಂತರ ಪರೀಕ್ಷಾ ವರದಿ ನೆಗೆಟಿವ್ ಬಂದ ಮೇಲೆ ಧೈರ್ಯದಿಂದ ಕೆಲಸ ಮಾಡುತ್ತಿದ್ದೇವೆ. 15 ವರ್ಷಗಳಿಂದ ಕೆಲಸ ಮಾಡುತ್ತಿದ್ದು, ಇಂತಹ ಸಮಯದಲ್ಲಿ ಕೆಲಸ ಬಿಟ್ಟರೆ ನಮ್ಮ ಜೀವನ ಹಾಳು ಮಾಡಿಕೊಂಡಂತಾಗುತ್ತದೆ. ನಾವು ಬಿಟ್ಟು ಹೋದರೆ ಕೆಲಸ ಮಾಡುವವರು ಯಾರೂ’ ಎಂಬುದು ಅವರ ಪ್ರಶ್ನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.