ದಾವಣಗೆರೆ: ಕೇಂದ್ರ ಕಾರ್ಮಿಕ ಸಂಘಟನೆಗಳು ನ.26ರಂದು ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಜಿಲ್ಲೆಯ ವಿವಿವ ಕಾರ್ಮಿಕ ಸಂಘಟನೆಗಳು ಒಟ್ಟು ಸೇರಿ ಅಂದು ಜಯದೇವ ಸರ್ಕಲ್ನಲ್ಲಿ ಬೆಳಿಗ್ಗೆ 11ರಿಂದ ಮಧ್ಯಾಹ್ನ 3ರವರೆಗೆ ಧರಣಿ ನಡೆಸಲಾಗುವುದು ಎಂದು ಎಐಟಿಯುಸಿ ಅಧ್ಯಕ್ಷ ಎಚ್.ಕೆ. ರಾಮಚಂದ್ರಪ್ಪ ತಿಳಿಸಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಆದಾಯ ತೆರಿಗೆ ವ್ಯಾಪ್ತಿ ಹೊರಗಿರುವ ಎಲ್ಲ ಕುಟುಂಬಗಳಿಗೆ ಕೇಂದ್ರ ಸರ್ಕಾರ ತಿಂಗಳಿಗೆ ₹ 7,500 ನಗದು ವರ್ಗಾವಣೆ ಮಾಡಬೇಕು. ಅಗತ್ಯ ಇರುವವರಿಗೆ ತಿಂಗಳಿಗೆ 10 ಕೆ.ಜಿ. ಪಡಿತರ ಉಚಿತವಾಗಿ ನೀಡಬೇಕು. ನರೇಗಾದಡಿಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ವರ್ಷಕ್ಕೆ 200 ದಿನ ಕೆಲಸವನ್ನು ವರ್ಧಿತ ವೇತನದೊಂದಿಗೆ ನೀಡಬೇಕು. ನಗರ ಪ್ರದಶಗಳಿಗೂ ಉದ್ಯೋಗ ಖಾತ್ರಿ ಯೋಜನೆ ವಿಸ್ತರಿಸಬೇಕು. ರೈತ ವಿರೋಧಿ, ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಹಿಂಪಡೆಯಬೇಕು. ಹಣಕಾಸು ವಲಯ, ರೈಲ್ವೆ, ವಿಮಾನ, ಬಂದರು ಸೇರಿದಂತೆ ಸಾರ್ವಜನಿಕ ವಲಯವನ್ನು ಖಾಸಗೀಕರಣ ಮಾಡುವುದನ್ನು ನಿಲ್ಲಿಸಬೇಕು. ಅಕಾಲಿಕ ನಿವೃತ್ತಿಯ ಮೇಲಿನ ಕ್ರೂರ ಸುತ್ತೋಲೆ ರದ್ದುಪಡಿಸಬೇಕು. ಎನ್ಪಿಎಸ್ ರದ್ದು ಮಾಡಿ ಹಳೇ ಪಿಂಚಣಿ ಜಾರಿ ಮಾಡಬೇಕು. ಇಪಿಎಸ್–95 ಸುಧಾರಿಸಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ’ ಎಂದು ತಿಳಿಸಿದರು.
ಎಐಟಿಯುಸಿ, ಎಐಯುಟಿಯುಸಿ, ಇಂಟಕ್, ಸಿಐಟಿಯು, ಬಿಎಕೆಎನ್, ಎಲ್ಐಸಿ, ನೆರಳುಬೀಡಿ ಯೂನಿಯನ್ ಒಳಗೊಂಡಂತೆ ಹಲವು ಕಾರ್ಮಿ ಸಂಘಟನೆಗಳು ಜೆಸಿಟಿಯು ಅಡಿಯಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ. ರೈತ ಸಂಘಗಳೂ ಬೆಂಬಲ ನೀಡಲಿವೆ ಎಂದರು.
ಎಐಯುಟಿಯುಸಿಯ ಕೈದಾಳೆ ಮಂಜುನಾಥ, ಸಿಐಟಿಯುನ ಆನಂದರಾಜ್, ನೆರಳು ಬೀಡಿ ಕಾರ್ಮಿಕರ ಯೂನಿಯನ್ನ ಜಬೀನಾಖಾನಂ, ಬ್ಯಾಂಕ್ ನೌಕರರ ಸಂಘದ ರಾಘವೇಂದ್ರ ನಾಯರಿ ಮಾತನಾಡಿದರು. ದಾಕ್ಷಾಯಣಮ್ಮ, ಆವರಗೆರೆ ವಾಸು, ನಾಗಾರಾಜಾಚಾರ್, ಎಂ.ಬಿ. ಶಾರದಮ್ಮ, ತಿಪ್ಪೇಸ್ವಾಮಿ, ಮಂಜುನಾಥ ಕುಕ್ಕವಾಡ, ಎನ್.ಎಚ್. ರಾಮಪ್ಪ, ಹನುಮಂತಪ್ಪ, ಶಿವಾಜಿರಾವ್ ಅವರೂ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.