ದಾವಣಗೆರೆ: ಮನುಷ್ಯನ ಶರೀರದೊಳಗಿನ ಜೀವಕೋಶಗಳ ಬೆಳವಣಿಗೆ ಪ್ರಕ್ರಿಯೆಯಲ್ಲಿ ಏರುಪೇರು ಉಂಟಾದಾಗ ಬಾಧಿಸುವ ಮಾರಣಾಂತಿಕ ಕಾಯಿಲೆಯೇ ಕ್ಯಾನ್ಸರ್.
ದೇಹದೊಳಗಿನ ಪ್ರತಿ ಜೀವಕೋಶವೂ ಒಂದು ನಿಯಮಿತ ಚಕ್ರದಲ್ಲಿ ಬೆಳವಣಿಗೆ ಹೊಂದುವುದರ ಜೊತೆಗೆ ಕಾಲ ಕಾಲಕ್ಕೆ ಸಾಯುವುದೂ ಇದೆ. ಸತ್ತ ಮೇಲೆ ಅವು ಹೊಸ ಜೀವಕೋಶಕ್ಕೆ ದಾರಿ ಮಾಡಿಕೊಡುತ್ತವೆ. ಈ ಪ್ರಕ್ರಿಯೆಯನ್ನು ‘ಅಪೊಪ್ಟೋಸಿಸ್’ ಎಂದು ಕರೆಯಲಾಗುತ್ತದೆ.
ಜೀವಕೋಶಗಳ ಬೆಳವಣಿಗೆಯನ್ನು ನಿಯಂತ್ರಿಸುವ ಡಿಎನ್ಎಯಲ್ಲಿ ಒಮ್ಮೊಮ್ಮೆ ರೂಪಾಂತರಗಳು ಸಂಭವಿಸುವುದುಂಟು. ಆಗ ಜೀವಕೋಶಗಳು ಸಾಯುವ ಬದಲು ಅತಿಯಾಗಿ ವಿಭಜನೆಗೊಳ್ಳಲು ಆರಂಭಿಸುತ್ತವೆ. ಹೀಗೆ ಅನಗತ್ಯವಾಗಿ ಸಂಗ್ರಹವಾಗುವ ಜೀವಕೋಶಗಳ ಗುಂಪನ್ನು ‘ಗೆಡ್ಡೆ’ ಅಥವಾ ‘ಟ್ಯೂಮರ್’ ಎಂದು ಹೇಳಲಾಗುತ್ತದೆ.
ಜಾಗತಿಕ ಮಟ್ಟದಲ್ಲಿ ಪ್ರಸ್ತುತ ಅತಿ ಹೆಚ್ಚು ಚರ್ಚೆಯಾಗುತ್ತಿರುವುದು ಕರುಳಿನ ಕ್ಯಾನ್ಸರ್ ಬಗ್ಗೆ. ಮೊದಲೆಲ್ಲಾ ವೃದ್ಧರಲ್ಲಿ ಕಾಣಿಸಿಕೊಳ್ಳುತ್ತಿದ್ದ ಈ ಕಾಯಿಲೆ ಈಗ ಯುವ ಪೀಳಿಗೆಯನ್ನೇ ಹೆಚ್ಚು ಬಾಧಿಸುತ್ತಿದ್ದು, ಅದೃಶ್ಯ ವೈರಿಯಂತೆ ಕಾಡುತ್ತಿದೆ.
ಎನ್ಸಿಡಿ ಸೆಲ್ ಮತ್ತು ಸ್ಥಳೀಯ ಆಂಕಾಲಜಿ ಕೇಂದ್ರಗಳ ಮಾಹಿತಿ ಪ್ರಕಾರ ದಾವಣಗೆರೆಯಲ್ಲಿ ಪತ್ತೆಯಾಗುತ್ತಿರುವ ಕ್ಯಾನ್ಸರ್ ಪ್ರಕರಣಗಳಲ್ಲಿ ಕರುಳಿನ ಕ್ಯಾನ್ಸರ್ನ ಪ್ರಮಾಣ ಶೇ 14ರಷ್ಟಿದೆ. 10 ವರ್ಷಗಳಲ್ಲಿ ಇದು ಗಣನೀಯವಾಗಿ ಏರಿದ್ದು, 30 ರಿಂದ 40 ವರ್ಷದೊಳಗಿನವರನ್ನೇ ಹೆಚ್ಚು ಬಾಧಿಸುತ್ತಿದೆ. ಆಹಾರ ಪದ್ಧತಿಯಲ್ಲಿನ ಬದಲಾವಣೆ ಇದಕ್ಕೆ ಪ್ರಮುಖ ಕಾರಣಗಳಲ್ಲೊಂದು.
ಕ್ಯಾನ್ಸರ್ ಪತ್ತೆ ಹಚ್ಚುವುದು ಮೊದಲೆಲ್ಲಾ ಸವಾಲಾಗಿ ಪರಿಣಮಿಸುತ್ತಿತ್ತು. ತಂತ್ರಜ್ಞಾನ ಬೆಳೆದಂತೆಲ್ಲಾ ಇದು ಅತಿ ಸುಲಭವಾಗುತ್ತಿದೆ. ಲಿಕ್ವಿಡ್ ಬಯಾಪ್ಸಿ ಎಂಬ ಆಧುನಿಕ ವಿಧಾನದಡಿ ಕೇವಲ ಒಂದು ಹನಿ ರಕ್ತದ ಮೂಲಕ ದೇಹದೊಳಗಿನ ಕ್ಯಾನ್ಸರ್ಕಾರಕ ಡಿಎನ್ಎಯನ್ನು ಪತ್ತೆಹಚ್ಚಬಹುದಾಗಿದೆ.
ಎಐ ತಂತ್ರಜ್ಞಾನ ಆಧಾರಿತ ಕೊಲೊನೊಸ್ಕೋಪಿ ಮೂಲಕ ಕಣ್ಣಿಗೆ ಕಾಣದ ಅತ್ಯಂತ ಸಣ್ಣ ಪಾಲಿಪ್ಸ್ಗಳನ್ನೂ ಪತ್ತೆಹಚ್ಚಿ ದೇಹದೊಳಗೆ ಕ್ಯಾನ್ಸರ್ ಬೆಳೆಯದಂತೆ ತಡೆಯಬಹುದಾಗಿದೆ. ಪೆಟ್-ಸಿ.ಟಿ ಮತ್ತು ಎಂಆರ್ಐ ಮೂಲಕ ಕ್ಯಾನ್ಸರ್ ಯಾವ ಹಂತದಲ್ಲಿದೆ ಮತ್ತು ಎಲ್ಲಿಗೆ ಹರಡಿದೆ ಎಂಬುದನ್ನೂ ನಿಖರವಾಗಿ ತಿಳಿಯಬಹುದಾಗಿದೆ.
ಇಮ್ಯುನೊಥೆರಪಿ, ಟಾರ್ಗೆಟೆಡ್ ಥೆರಪಿ, ರೋಬೋಟಿಕ್ ಸರ್ಜರಿ, ಪ್ರೆಸಿಷನ್ ಆಂಕಾಲಜಿ ಎಂಬ ಚಿಕಿತ್ಸಾ ವಿಧಾನಗಳೂ ಬಳಕೆಯಲ್ಲಿದ್ದು, ಇವುಗಳ ಮೂಲಕ ಕ್ಯಾನ್ಸರ್ಗೆ ಕಡಿವಾಣ ಹಾಕಬಹುದಾಗಿದೆ.
(ಲೇಖಕಿ–ಸಹಾಯಕ ಪ್ರಾಧ್ಯಾಪಕಿ, ಜೈವಿಕ ತಂತ್ರಜ್ಞಾನ ವಿಭಾಗ, ಜಿ.ಎಂ.ವಿಶ್ವವಿದ್ಯಾಲಯ).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.