ದಾವಣಗೆರೆ: ಪ್ರಪಂಚದ ಅತಿ ದೊಡ್ಡ ಶಕ್ತಿ ಜ್ಞಾನವೇ ಹೊರತು ಹಣ ಅಲ್ಲ. ಜ್ಞಾನ ಇದ್ದರೆ ಎಲ್ಲರೂ ನಿಮ್ಮನ್ನು ಗೌರವಿಸುತ್ತಾರೆ. ಆದ್ದರಿಂದ ವಿದ್ಯಾರ್ಥಿಗಳು ದೊಡ್ಡ ಸಾಧನೆ ಮಾಡಿ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಕಲಾ ನಿಕಾಯದ ಡೀನ್ ಡಾ. ಬಿ.ಪಿ. ವೀರಭದ್ರಪ್ಪ ಸಲಹೆ ನೀಡಿದರು.
ವಿಶ್ವವಿದ್ಯಾಲಯ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಮಂಗಳವಾರ ನಡೆದ ಚಿತ್ರೋತ್ಸವ–2019ರ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ವಿದ್ಯಾರ್ಥಿಗಳು ಕೀಳರಿಮೆ ತೊರೆಯಬೇಕು. ಅನೇಕ ದೊಡ್ಡ ದೊಡ್ಡ ಸಾಧಕರು ನಮ್ಮ ಮುಂದೆ ಇದ್ದಾರೆ. ಅವರು ನಿಮಗೆ ಸ್ಫೂರ್ತಿಯಾಗಬೇಕು. ಸಾಧನೆ ಇಂದು ಚಿಕ್ಕದು ಇರಬಹುದು ಆದರೆ ಮುಂದಿನ ದಿನಗಳಲ್ಲಿ ದೊಡ್ಡದು ಆಗುತ್ತದೆ. ಉತ್ತಮ ಸಾಧನೆ ಮಾಡುವ ಮೂಲಕ ಓದಿದ ಸಂಸ್ಥೆ ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಒಳ್ಳೆಯ ಹೆಸರು ತರಬೇಕು ಎಂದು ಕಿವಿ ಮಾತು ಹೇಳಿದರು.
‘ಕಲೆಗೆ ತನ್ನದೇ ಆದ ಶಕ್ತಿ ಇದೆ. ಕಲಾಕೃತಿಗಳಿಗೆ ತುಂಬಾ ಬೇಡಿಕೆ ಇದೆ. ಹರಪ್ಪ, ಮೆಹೆಂಜೊದಾರೊ ಹಾಗೂ ಅಜಂತಾ, ಎಲ್ಲೊರಾಗಳಲ್ಲೂ ಪ್ರಾಚೀನ ನಾಗರಿಕತೆಯ ಕಲೆ ಇತ್ತು. ಹಿಂದುಳಿದ ರಾಜ್ಯ ಬಿಹಾರ ಒಂದು ಕಾಲದಲ್ಲಿ ಜ್ಞಾನಕೇಂದ್ರ ಆಗಿತ್ತು. ನಳಂದ ವಿಶ್ವವಿದ್ಯಾಲಯದಲ್ಲಿ 8 ಸಾವಿರಾರು ವಿದ್ಯಾರ್ಥಿಗಳು, ನೂರಾರು ಅಧ್ಯಾಪಕರು ಇದ್ದರು. ಹಿಂದುಳಿದ ಹೈದ್ರಾಬಾದ್ ಕರ್ನಾಟಕ ಪ್ರಾಂತ್ಯದಲ್ಲಿ ಅನೇಕ ರಾಜ ಮಹಾರಾಜರು ಆಳ್ವಿಕೆ ಮಾಡಿದ್ದಾರೆ’ ಎಂದು ಸ್ಮರಿಸಿದರು.
ದೃಶ್ಯಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ರವೀಂದ್ರ ಎಸ್. ಕಮ್ಮಾರ್ ಅಧ್ಯಕ್ಷತೆ ವಹಿಸಿದ್ದರು. ಚಿತ್ರಕಲಾ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಸತೀಶ್ ಕುಮಾರ್ ವಲ್ಲೇಪುರೆ ಸ್ವಾಗತಿಸಿದರು. ಶಿಲ್ಪಕಲಾ ವಿಭಾಗದ ಎಸ್. ಹರೀಶ್ರಾವ್ ವಾರ್ಷಿಕ ವರದಿ ಮಂಡಿಸಿದರು. ದತ್ತಾತ್ರೇಯ ಎನ್ ಭಟ್ ನಿರೂಪಿಸಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷ ಎಸ್.ಎನ್. ಪ್ರವೀಣ್, ಸಿ.ನಿಖಿತ್ ಪಾಲ್ಗೊಂಡಿದ್ದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.