ADVERTISEMENT

ಇನ್ನೂ ನೂರು ಕೋಟಿ ಅನುದಾನಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 14 ಜನವರಿ 2012, 9:40 IST
Last Updated 14 ಜನವರಿ 2012, 9:40 IST

ಹುಬ್ಬಳ್ಳಿ: `ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಹೆಚ್ಚುವರಿ ಯಾಗಿ ನೂರು ಕೋಟಿ ರೂಪಾಯಿ ಅನುದಾನ ನೀಡುವಂತೆ ಒತ್ತಾಯಿಸಲು ಮುಖ್ಯಮಂತ್ರಿಗಳ ಬಳಿಗೆ ಸರ್ವಪಕ್ಷ ಸದಸ್ಯರ ನಿಯೋಗವನ್ನು ಕರೆದು ಕೊಂಡು ಹೋಗಬೇಕು~ ಎಂದು ಪಾಲಿಕೆ ಸದಸ್ಯರು ಪಕ್ಷಭೇದ ಮರೆತು ಮೇಯರ್ ಪೂರ್ಣಾ ಪಾಟೀಲ ಅವ ರನ್ನು ಒತ್ತಾಯಿಸಿದರು.

ಪಾಲಿಕೆ ಸಭಾಂಗಣದಲ್ಲಿ ಶುಕ್ರವಾರ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಈ ಒತ್ತಾಯ ಕೇಳಿಬಂತು. ಪ್ರತಿ ಸಭೆಯಲ್ಲಿ ಸಾಮಾನ್ಯವಾಗಿದ್ದ `ಆರೋಪ- ಪ್ರತ್ಯಾರೋಪ~ಗಳ ಹಾವಳಿಯಿಲ್ಲದೆ ಅಪ ರೂಪಕ್ಕೆ ಎಲ್ಲ ಸದಸ್ಯರು ಪಾಲಿಕೆ ಆದಾಯ ಹೆಚ್ಚಿಸುವ ಕುರಿತು ಸುದೀರ್ಘ ವಾಗಿ ಚರ್ಚಿಸಿದರು.

`ಸಭೆಯಲ್ಲಿ ಕೇಳಿಬಂದ ಸಲಹೆಗಳ ಆಧಾರದ ಮೇಲೆ ಆದಾಯ ಹೆಚ್ಚಿಸುವ ಮಾರ್ಗಗಳನ್ನು ಕಂಡುಕೊಳ್ಳಲು ಹತ್ತು ದಿನಗಳೊಳಗೆ ಎಲ್ಲ ಪಕ್ಷಗಳ ಮುಖಂಡರು ಹಾಗೂ ಹಿರಿಯ ಅಧಿಕಾ ರಿಗಳ ಸಭೆ ಕರೆಯಬೇಕು~ ಎಂದು ಆಯುಕ್ತ ಡಾ.ಕೆ.ವಿ. ತ್ರಿಲೋಕಚಂದ್ರ ಅವರಿಗೆ ಮೇಯರ್ ಆದೇಶಿಸಿದರು.

ಸಭಾನಾಯಕ ವೀರಣ್ಣ ಸವಡಿ ಮಾತ ನಾಡಿ, `ಆಡಳಿತ ವೆಚ್ಚ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದು, ಪಾಲಿಕೆಯನ್ನು ಸ್ವಾವಲಂಬಿ ಮಾಡಲು ಆದಾಯ ಮೂಲಗಳನ್ನು ಹೆಚ್ಚಿಸಿಕೊಳ್ಳುವ ಅಗತ್ಯ ವಿದೆ~ ಎಂದು ಅಭಿಪ್ರಾಯಪಟ್ಟರು.

`ಪರವಾನಗಿ ಹಾಗೂ ಪೂರ್ಣ ಗೊಂಡ ಪ್ರಮಾಣಪತ್ರ (ಸಿ.ಸಿ) ಪಡೆ ಯದ ಕಟ್ಟಡಗಳನ್ನು ಗುರುತಿಸಿ, ದಂಡ ಮತ್ತು ತೆರಿಗೆ ಸಂಗ್ರಹಿಸಲು ವಿಶೇಷ ಕಾರ್ಯಪಡೆ ರಚಿಸಬೇಕು. ಪಾನ್-ಬೀಡಾ ಮಳಿಗೆ ಸೇರಿದಂತೆ ಲೈಸನ್ಸ್ ಪಡೆಯದ ಎಲ್ಲ ಅಂಗಡಿಗಳನ್ನು ಪತ್ತೆ ಮಾಡಿ ತೆರಿಗೆ ವ್ಯಾಪ್ತಿಗೆ ತರಬೇಕು~ ಎಂದು ಅವರು ಸಲಹೆ ನೀಡಿದರು.

`ನಗರಾಭಿವೃದ್ಧಿ ಪ್ರಾಧಿಕಾರ ಸೇರಿ ದಂತೆ ವಿವಿಧ ಸರ್ಕಾರಿ ಏಜನ್ಸಿಗಳು ನಿರ್ಮಿಸಿದ ಬಡಾವಣೆಗಳ ಸುಮಾರು 50 ಸಾವಿರ ಆಸ್ತಿಗಳು ಪಾಲಿಕೆಗೆ ಇನ್ನೂ ಹಸ್ತಾಂತರವಾಗಿಲ್ಲ. ಈ ಆಸ್ತಿಗಳ ಹಸ್ತಾಂತರದ ವಿಷಯದಲ್ಲಿ ಕಾಣಿಸಿ ಕೊಂಡ ತಾಂತ್ರಿಕ ತೊಂದರೆಯನ್ನು ಅಧಿ ಕಾರಿಗಳು ಬಗೆಹರಿಸಬೇಕು~ ಎಂದು ಅವರು ಹೇಳಿದರು.

ಚರ್ಚೆಯಲ್ಲಿ ಪಾಲ್ಗೊಂಡ ವಿರೋಧ ಪಕ್ಷದ ನಾಯಕ ದೀಪಕ ಚಿಂಚೋರೆ, `ಪಾಲಿಕೆಗೆ ಸದ್ಯ 2.18 ಲಕ್ಷ ಆಸ್ತಿಗಳಿಂದ ತೆರಿಗೆ ಬರುತ್ತದೆ. ತೆರಿಗೆ ದರ ಹೆಚ್ಚಿಸದೆ ಆದಾಯ ಹೆಚ್ಚಿಸಿ ಕೊಳ್ಳಲು ಇನ್ನೂ ಬೇಕಾದಷ್ಟು ಅವ ಕಾಶಗಳಿವೆ. ಅತ್ತ ಅಧಿಕಾರಿಗಳು ಗಮನ ಹರಿಸಬೇಕಿದೆ~ ಎಂದರು. `ಗುತ್ತಿಗೆ ನೀಡಿದ ಭೂಮಿಯನ್ನು ಮಾರಾಟ ಮಾಡಿದರೆ ಪಾಲಿಕೆಗೆ ರೂ. 50 ಕೋಟಿ ಯಷ್ಟು ಆದಾಯ ಸಿಗುವುದಲ್ಲದೆ ನಿರಂತರ ತೆರಿಗೆ ಆಕರಿಸಲೂ ದಾರಿ ಯಾಗುತ್ತದೆ~ ಎಂದು ಅವರು ತಿಳಿಸಿದರು.

`ಕಲ್ಯಾಣಮಂಟಪ, ಹೋಟೆಲ್ ಮತ್ತು ಆಸ್ಪತ್ರೆಗಳಲ್ಲದೆ ಖಾಸಗಿ ಬಸ್‌ಗಳ ಮೇಲೂ ಹೆಚ್ಚಿನ ತೆರಿಗೆ ಹಾಕಬೇಕು. ಎಪಿಎಂಸಿಯಲ್ಲಿ ಅಂಗಡಿ ನಿರ್ಮಿಸಿ ದವರು ತೆರಿಗೆ ತುಂಬಲು ಸಿದ್ಧರಿದ್ದು, ವಿವಾದ ಬಗೆಹರಿಸಿಕೊಂಡು ಅವರಿಂದ ತೆರಿಗೆ ಮೊತ್ತವನ್ನು ತುಂಬಿಸಿ ಕೊಳ್ಳಬೇಕು~ ಎಂದು ಸಲಹೆ ನೀಡಿದರು. `ಪಾಲಿಕೆ ವ್ಯಾಪ್ತಿಯಲ್ಲಿ ಎರಡು ನಗರ ಗಳು ಇರುವುದರಿಂದ ಹೆಚ್ಚುವರಿಯಾಗಿ ನೂರು ಕೋಟಿ ಅನುದಾನ ನೀಡುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಬೇಕು~ ಎಂದೂ ಅವರು ಸೂಚಿಸಿದರು.

`ಪರವಾನಗಿ ಇಲ್ಲದೆ ಕಟ್ಟಡ ನಿರ್ಮಿಸಿದ ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೆ ದಂಡ ವಿಧಿಸಬೇಕು. ಬಹಳಷ್ಟು ಕಡತಗಳು ಸರ್ಕಾರದ ಮಟ್ಟದಲ್ಲಿ ಒಪ್ಪಿಗೆಗಾಗಿ ಕಾಯ್ದಿದ್ದು, ಅವುಗಳ ತ್ವರಿತ ವಿಲೇವಾರಿಗೆ ಕ್ರಮ ಕೈಗೊಳ್ಳ ಬೇಕು~ ಎಂದು ಗಣೇಶ ಟಗರಗುಂಟಿ ತಿಳಿಸಿದರು. `ಎಲ್ಲ ವಾಹನಗಳ ಮೇಲೆ ಮೂಲಸೌಕರ್ಯ ಸೆಸ್ ಹಾಕಬೇಕು~ ಎಂದು ಯಾಸಿನ್ ಹಾವೇರಿಪೇಟೆ ಸಲಹೆ ನೀಡಿದರು.

`ತೆರಿಗೆ ವಸೂಲಿಗೆ ಸಿಬ್ಬಂದಿ ಸಂಖ್ಯೆ ಹೆಚ್ಚಿಸಬೇಕು~ ಎಂದು ಪ್ರಕಾಶ ಗೋಡ ಬೊಲೆ ಸಲಹೆ ನೀಡಿದರೆ, `ತೆರಿಗೆ ಕಳ್ಳ ರಾದ ದೊಡ್ಡ ಕುಳಗಳ ಮೇಲೆ ಕ್ರಮ ಕೈಗೊಳ್ಳಬೇಕು~ ಎಂದು ಹಜರತ್ ಅಲಿ ದೊಡ್ಡಮನಿ ಆಗ್ರಹಿಸಿದರು.

`ಗುತ್ತಿಗೆ ನೀಡಿದ ಭೂಮಿಯ ಹರಾಜು ಪ್ರಕ್ರಿಯೆ ಆರಂಭಿಸಿದರೆ ಸಮಸ್ಯೆ ಏನೆಂಬುದು ಗೊತ್ತಾಗುತ್ತದೆ~ ಎಂದು ಅಶೋಕ ಜಾಧವ ಹೇಳಿದರು. ಖಾಲಿ ಅಂಗಡಿಗಳನ್ನು ಬಾಡಿಗೆ ಕೊಡಬೇಕು ಹಾಗೂ ಅವಳಿನಗರದ ಈಜುಗೊಳ ಗಳನ್ನು ಗುತ್ತಿಗೆ ನೀಡಬೇಕು ಎಂಬ ಸಲಹೆಗಳು ಕೇಳಿಬಂದವು.

ಪಾಲಿಕೆಯ ಹಿರಿಯ ಸದಸ್ಯ ಡಾ. ಪಾಂಡುರಂಗ ಪಾಟೀಲ ಚರ್ಚೆಯಲ್ಲಿ ಪಾಲ್ಗೊಂಡು, `ಪಾಲಿಕೆ ವ್ಯಾಪ್ತಿಯ ಎಲ್ಲ ಆಸ್ತಿಗಳ ಸಮಗ್ರವಾದ ಮಾಹಿತಿ ಅಧಿ ಕಾರಿಗಳ ಬಳಿ ಇಲ್ಲ. ಇದರಿಂದ ಆದಾಯ ಹೆಚ್ಚಿಸಿಕೊಳ್ಳುವುದು ಕಷ್ಟವಾಗುತ್ತದೆ~ ಎಂದರು. `ಸೇವೆಯನ್ನು ಉತ್ತಮ ಪಡಿಸಿದರೆ ಜನ ತೆರಿಗೆ ತುಂಬಲು ತಾವೇ ಮುಂದೆ ಬರುತ್ತಾರೆ~ ಎಂದು ಅವರು ಹೇಳಿದರು.

ರೂ 20.06 ಕೋಟಿ ತೆರಿಗೆ ಸಂಗ್ರಹ
ಹುಬ್ಬಳ್ಳಿ: `ಪ್ರಸಕ್ತ ಹಣಕಾಸು ವರ್ಷದಲ್ಲಿ ರೂ 33 ಕೋಟಿ ಆಸ್ತಿ ತೆರಿಗೆ ನಿರೀಕ್ಷೆ ಮಾಡಲಾಗಿದ್ದು, ಈವರೆಗೆ ರೂ 20.06 ಕೋಟಿ ಸಂಗ್ರಹಿಸಲಾಗಿದೆ. ಹತ್ತು ಸಾವಿರ ಆಸ್ತಿಗಳನ್ನು ಹೆಚ್ಚುವರಿಯಾಗಿ ತೆರಿಗೆ ವ್ಯಾಪ್ತಿಗೆ ತರಲಾಗಿದೆ~ ಎಂದು ಆಯುಕ್ತ ಡಾ.ಕೆ.ವಿ.ತ್ರಿಲೋಕಚಂದ್ರ ಸಭೆಗೆ ವಿವರ ನೀಡಿದರು.

`ಹೊಸ ಆಸ್ತಿ ಪತ್ತೆ ಹಚ್ಚಿದ ಮೇಲೆ ಪಾಲಿಕೆಗೆ ಕಳೆದ ವರ್ಷ 2.80 ಕೋಟಿ ಹಾಗೂ ಪ್ರಸಕ್ತ ವರ್ಷ 1.1 ಕೋಟಿ ಹೆಚ್ಚುವರಿ ಆದಾಯ ಬಂದಿದೆ~ ಎಂದು ಅವರು ತಿಳಿಸಿದರು.

`ಪಾಲಿಕೆ ವ್ಯಾಪ್ತಿಯಲ್ಲಿ 13 ಸಾವಿರ ಅಂಗಡಿಗಳು ಲೈಸನ್ಸ್ ಪಡೆದಿದ್ದು, ಈ ವರ್ಷ ಏಳು ಸಾವಿರ ಹೊಸ ಮಳಿಗೆಗಳನ್ನು ತೆರಿಗೆ ವ್ಯಾಪ್ತಿಗೆ ತರಲಾಗಿದೆ. ಇದರಿಂದ ರೂ 30 ಲಕ್ಷ ಹೆಚ್ಚುವರಿ ಆದಾಯ ಬಂದಿದೆ~ ಎಂದ ಅವರು, ಜಾಹೀರಾತು  ಫಲಕಗಳಿಂದ ರೂ 57 ಲಕ್ಷ, ಮಳಿಗೆಗಳ ಬಾಡಿಗೆಯಿಂದ 1.80 ಕೋಟಿ ಆದಾಯ ಬಂದಿದೆ~ ಎಂದು ವಿವರ ನೀಡಿದರು.

`ಪರವಾನಗಿ ಪಡೆಯದೆ 207 ವಿದ್ಯಾಸಂಸ್ಥೆಗಳು ಕಟ್ಟಡ ನಿರ್ಮಿಸಿದ್ದು, 30 ಲಕ್ಷ ದಂಡ ತುಂಬಿ 85 ಜನ ಅನುಮತಿ ಪಡೆದಿದ್ದಾರೆ. ಉಳಿದ ಸಂಸ್ಥೆಗಳ ದಂಡದಿಂದ 20 ಕೋಟಿ ಆದಾಯದ ನಿರೀಕ್ಷೆ ಇದೆ~ ಎಂದು ಅವರು ಹೇಳಿದರು.

`ಪಾರ್ಕಿಂಗ್ ಅತಿಕ್ರಮಣ ತೆರವಿನಿಂದ 20 ಸಾವಿರ ಚದರ ಅಡಿ ಸ್ಥಳ ವಾಹನ ನಿಲುಗಡೆಗೆ ಮುಕ್ತವಾಗಿದ್ದು, ರೂ 72 ಲಕ್ಷ ದಂಡ ವಸೂಲಿ ಮಾಡಲಾಗಿದೆ~ ಎಂದು ಅವರು ಸಭೆ ಗಮನಕ್ಕೆ ತಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT