ಧಾರವಾಡ: ’ವಕೀಲ ವೃತ್ತಿ ಸಮಾಜದಲ್ಲಿ ಗೌರವಾನ್ವಿತ ಸ್ಥಾನ ಹೊಂದಿದ್ದು, ಕಕ್ಷಿದಾರರಿಗೆ ನ್ಯಾಯ ದೊರಕಿಸಿಕೊಡಲು ಶ್ರಮಿಸಬೇಕು’ ಎಂದು ಜಿಲ್ಲಾ ನ್ಯಾಯಾಧೀಶ ರಾಮಚಂದ್ರ ಹುದ್ದಾರ ಹೇಳಿದರು.
ಇಲ್ಲಿನ ಜಿಲ್ಲಾ ವಕೀಲರ ಸಂಘದಲ್ಲಿ ಸೋಮವಾರ ನಡೆದ ವಕೀಲರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಹಿರಿಯರ ಮಾರ್ಗದರ್ಶನದಲ್ಲಿ ಕಿರಿಯ ವಕೀಲರು ವೃತ್ತಿ ಕೌಶಲ ಮೈಗೂಡಿಸಿಕೊಂಡು ಉತ್ತಮ ನ್ಯಾಯದಾನಕ್ಕೆ ಸಹಕರಿಸಬೇಕು. ಮೌಲ್ಯಗಳನ್ನು ಅಳವಡಿಸಿಕೊಂಡು ಸಮಾಜಮುಖಿಯಾಗಿ ಕೆಲಸ ಮಾಡಬೇಕು' ಎಂದರು.
ಕಾನೂನು ವಿಶ್ವವಿದ್ಯಾಲಯದ ಪ್ರಭಾರ ಉಪಕುಲಪತಿ ಸಿ.ಎಸ್.ಪಾಟೀಲ ಮಾತನಾಡಿ, ‘ಇಂದು ಪ್ರತಿಯೊಂದು ಕ್ಷೇತ್ರದಲ್ಲೂ ತಂತ್ರಜ್ಞಾನ ತನ್ನ ಮಹತ್ವ ಸಾರುತ್ತಿದೆ. ಇದಕ್ಕೆ ವಕೀಲ ವೃತ್ತಿ ಕೂಡಾ ಹೊರತಾಗಿಲ್ಲ. ಸಾಂಪ್ರಾದಾಯಿಕ ವೃತ್ತಿ ಶೈಲಿ ಬದಲಾಗುತ್ತಿದೆ. ತಂತ್ರಜ್ಞಾನದ ಬಳಕೆ ಹೆಚ್ಚಾಗುತ್ತಿದೆ. ಬದಲಾಗುತ್ತಿರುವ ಸಂದರ್ಭದಲ್ಲಿ ವಕೀಲರು ಬದಲಾಗಬೇಕಾದ ಅಗತ್ಯವಿದೆ' ಎಂದರು.
ಸಂಘದ ಅಧ್ಯಕ್ಷ ಆರ್.ಯು.ಬೆಳ್ಳಕ್ಕಿ, ಎಸ್.ಎಸ್.ಬನ್ನೂರ, ಸಿ.ಎಸ್.ಪೊಲೀಸ್ ಪಾಟೀಲ, ಕಲ್ಮೇಶ ನಿಂಗಣ್ಣವರ, ಎನ್.ಆರ್.ಮಟ್ಟಿ, ಶ್ರೀಧರ ಹಂಚಿನಾಳ, ಸಂತೋಷ ಗುಡಿ, ಮಹೇಶ ಕೆಲಗೇರಿ, ವೀರಣ್ಣ ಕಾಜಗಾರ, ಮಹಿಳಾ ಪ್ರತಿನಿಧಿ ರೂಪಾ ಕೆಂಗಾನೂರ, ಎಸ್.ಎಸ್.ಶಿವಳ್ಳಿ, ಜೆ.ಎಲ್.ಜಾಧವ, ಜಿ.ಎಸ್.ಸವದತ್ತಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.