ADVERTISEMENT

ಎಲ್ಲ ಜಿಲ್ಲೆಯಲ್ಲಿ ರುಡ್‌ಸೆಟ್ ಪ್ರಾರಂಭ distt3

​ಪ್ರಜಾವಾಣಿ ವಾರ್ತೆ
Published 20 ಜನವರಿ 2011, 21:35 IST
Last Updated 20 ಜನವರಿ 2011, 21:35 IST

‘ಕೇಂದ್ರ ಸರ್ಕಾರ ನೀಡುವ ಒಂದು ಕೋಟಿ ರೂಪಾಯಿ ಸಹಾಯಧನದಲ್ಲಿ ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಗ್ರಾಮಾಭಿವೃದ್ಧಿ ಮತ್ತು ಸ್ವಯಂ ಉದ್ಯೋಗ ಸಂಸ್ಥೆಯನ್ನು ತೆರೆಯಲಾಗುವುದು’ ಎಂದು ರುಡ್‌ಸೆಟ್ ಸಂಸ್ಥೆಯ ಅಧ್ಯಕ್ಷರಾದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.

ತಾಲ್ಲೂಕಿನ ಅರಶಿನಕುಂಟೆಯಲ್ಲಿ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್, ಕೆನರಾ ಮತ್ತು ಸಿಂಡಿಕೇಟ್ ಬ್ಯಾಂಕ್‌ನ ಸಹಯೋಗದಲ್ಲಿ ಸುಮಾರು 1.50 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಸುಸಜ್ಜಿತ ಉದ್ಯೋಗ ತರಬೇತಿ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಸುಮಾರು 2.40 ಲಕ್ಷ ಮಂದಿ ಯುವಕರು ರುಡ್‌ಸೆಟ್ ಸಂಸ್ಥೆಯಲ್ಲಿ ತರಬೇತಿ ಪಡೆದು ಇದೀಗ ಸ್ವಯಂ ಉದ್ಯೋಗಿಗಳಾಗಿ ಸ್ವಾವಲಂಬಿ ಜೀವನ ನಡೆಸುತ್ತಿರುವುದು ಸಂತಸ ತಂದಿದೆ’ ಎಂದರು.

ವಿಧಾನ ಪರಿಷತ್ ಸದಸ್ಯ ಇ. ಕೃಷ್ಣಪ್ಪ ಮಾತನಾಡಿ, ‘1982ರಲ್ಲಿ ಉಜಿರೆಯಲ್ಲಿ ಪ್ರಾರಂಭವಾದ ರುಡ್‌ಸೆಟ್ ಸಂಸ್ಥೆಯು ದೇಶದ 14 ರಾಜ್ಯಗಳಲ್ಲಿ 23 ಶಾಖೆಗಳನ್ನು ಹೊಂದಿದೆ. ಲಕ್ಷಾಂತರ ಯುವಕರು ಕಿರು ಉದ್ಯಮ ಆರಂಭಿಸಲು ಅಗತ್ಯ ತರಬೇತಿ ಹಾಗೂ ಪ್ರೋತ್ಸಾಹ ನೀಡುತ್ತಿರುವ ವೀರೇಂದ್ರ ಹೆಗ್ಗಡೆ ಅವರ ದೂರದೃಷ್ಟಿ ಅಮೋಘವಾದುದು’ ಎಂದು ಹೇಳಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಆರ್.ಕೆ .ರಾಜು, ಕೆನರಾ ಬ್ಯಾಂಕ್ ಅಧ್ಯಕ್ಷ ಎಸ್.ರಾಮನ್, ಸಿಂಡಿಕೇಟ್ ಬ್ಯಾಂಕ್ ಅಧ್ಯಕ್ಷ ಬಸಂತ್ ಸೇಠ್, ಜಿ.ಪಂ.ಸದಸ್ಯ ಎಂ.ಎನ್. ರಾಮ್, ಮಹಾಪ್ರಬಂಧಕ ಎನ್.ನರಸರೆಡ್ಡಿ, ಜೆ.ಸಿ. ಮಿಶ್ರಾ, ನಿರ್ದೇಶಕರಾದ ಆರ್.ಶಿವಣ್ಣ ಮತ್ತು ಜಗದೀಶ್, ಕಾರ್ಯ ನಿರ್ವಾಹಕ ನಿರ್ದೇಶಕ ಕೆ.ಎನ್.ಜನಾರ್ದನ್ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.