ಕುಂದಗೋಳ: `ಕುಂದಗೋಳದಲ್ಲಿ ಸಂಗೀತ ಕಾಲೇಜು ಆರಂಭಿಸಲು ಕ್ರಮ ಕೈಗೊಳ್ಳಲಾ ಗುತ್ತದೆ~ ಎಂದು ನಗರಾಭಿವೃದ್ಧಿ ಸಚಿವ ಎಸ್. ಸುರೇಶ ಕುಮಾರ ಭರವಸೆ ನೀಡಿದರು.ಇಲ್ಲಿಯ ಶ್ರೀಮಂತ ನಾನಾಸಾಹೇಬ ನಾಡಗೀರ ಸ್ಮೃತಿ ಪ್ರತಿಷ್ಠಾನವು ಸವಾಯಿ ಗಂಧರ್ವರ 59ನೇ ಪುಣ್ಯತಿಥಿ ಅಂಗವಾಗಿ ನಾಡಗೀರ ವಾಡೆಯಲ್ಲಿ ಗುರುವಾರ ಏರ್ಪಡಿಸಿದ ಸಂಗೀತೋತ್ಸವ ಉದ್ಘಾ ಟಿಸಿ ಅವರು ಮಾತನಾಡಿದರು.
`ಮೈಸೂರಿನಲ್ಲಿ ಆರಂಭಗೊಂಡಿರುವ ಡಾ. ಗಂಗೂಬಾಯಿ ಹಾನಗಲ್ ಸಂಗೀತ ವಿಶ್ವ ವಿದ್ಯಾಲಯದ ಅಡಿಯಲ್ಲಿ ಕುಂದಗೋಳ ಸಂಗೀತ ಕಾಲೇಜು ನಡೆಯಲಿದೆ. ಶೀಘ್ರದಲ್ಲೇ ಕಾಲೇಜು ಆರಂಭಿಸಲಾಗುವುದು~ ಎಂದು ಅವರು ಆಶ್ವಾಸನೆ ನೀಡಿದರು.
`ಈಗ ಗುರುಕುಲಗಳಿಲ್ಲ. ಸಂಗೀತದ ತರಗತಿ ಗಳಿವೆ. ಜೊತೆಗೆ ಗುರುಗಳಿಲ್ಲ, `ಟೀಚರ್~ ಇದ್ದಾರೆ. ಇಂಥ ಸಂದರ್ಭದಲ್ಲಿ ಸವಾಯಿ ಗಂಧರ್ವರ ನೆನಪನ್ನು ಜೀವಂತವಾಗಿರಿಸಲು ಕುಂದಗೋಳದಲ್ಲಿ ಸಂಗೀತೋತ್ಸವ ಏರ್ಪಡಿಸುತ್ತಿರುವುದು ಸುತ್ಯರ್ಹ~ ಎಂದರು.
ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ ಕಾರ್ಣಿಕ್, `ಜನರ ಅಭಿರುಚಿಯ ಮಟ್ಟವನ್ನು ಎತ್ತರಕ್ಕೆ ಏರಿಸುವ ಕೆಲಸವನ್ನು ಕಲಾವಿದರು ಮಾಡಬೇಕಿದೆ. ಮಕ್ಕಳನ್ನು ಸಂಗೀತ ಕಛೇರಿಗಳಿಗೆ ಕರೆದೊಯ್ಯಬೇಕು~ ಎಂದು ಸಲಹೆ ನೀಡಿದರು.
`ನಾಡಗೀರ ವಾಡೆಯಲ್ಲಿ ನಡೆಯುವ ಸಂಗೀತೋತ್ಸವವಕ್ಕೆ ಈ ವರ್ಷದಿಂದ ಒಂದು ಲಕ್ಷ ರೂಪಾಯಿ ಅನುದಾನವನ್ನು ನೀಡಲಾಗುತ್ತಿದೆ ಎಂದರು.
ಸನ್ಮಾನ: ಪಂ. ಭೀಮಸೇನ ಜೋಶಿ ಅವರಿಗೆ 35 ವರ್ಷಗಳವರೆಗೆ ತಾಳ ವಾದ್ಯದ ಮೂಲಕ ಸಾಥ್ ನೀಡಿದ ಪುಣೆಯ ಮಾವುಲಿ ಟಾಕಳಕರ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕ ರಿಸಿದ ಟಾಕಳಕರ,
`1975ರಲ್ಲಿ ಪಂ. ಭೀಮಸೇನ ಜೋಶಿಯವರು ಹಾಡುವ ಸಂದರ್ಭದಲ್ಲಿ ಯಾರಾದರೂ ತಾಳವಾದ್ಯದವರನ್ನು ಕರೆಯಿರಿ ಎಂದರು. ಆಗ ನಾನು ತಾಳವಾದ್ಯದ ಸಾಥ್ ನೀಡಿದೆ~ ಎಂದು ಸ್ಮರಿಸಿಕೊಂಡರು.
ಶ್ರೀಮಂತ ಆರ್.ಕೆ. ನಾಡಗೀರ, ಎಸ್ಪಿ ಆರ್. ದಿಲೀಪ್ ಹಾಜರಿದ್ದರು. ಬಿ.ಬಿ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ರವಿ ಕಮಡೊಳ್ಳಿ ಸ್ವಾಗತಿಸಿದರು. ಅರ್ಜುನ್ ನಾಡಗೀರ ವಂದಿಸಿದರು. ಎಸ್.ಕೆ. ಆಚಾರ್ಯ ನಿರೂಪಿಸಿದರು.
ನಂತರ ಪಂ. ಜಯತೀರ್ಥ ಮೇವುಂಡಿ, ಅಂಕಿತಾ ಜೋಶಿ, ಡಾ. ಅಶೋಕ ಹುಗ್ಗಣ್ಣವರ, ಕುಮಾರ ಮರ್ಡೂರ, ವಿಜಯಕುಮಾರ ಪಾಟೀಲ, ಆರಾಧನಾ ಹೆಗಡೆ, ಶ್ರುತಿ ಬೋಡೆ, ಆರತಿ ಹೆಗಡೆ ಅವರಿಂದ ಗಾಯನ ನಡೆಯಿತು. ಸುಮಾ ಹೆಗಡೆ ಸಂತೂರ್ ನುಡಿಸಿದರು. ನರೇಂದ್ರ ನಾಯಕ್ ಹಾರ್ಮೋನಿಯಂ ನುಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.