ADVERTISEMENT

ಗಂಡನೊಂದಿಗೆ ಬಾಳಲು ಇಚ್ಛಿಸದ ಯುವತಿ

​ಪ್ರಜಾವಾಣಿ ವಾರ್ತೆ
Published 18 ಜುಲೈ 2012, 10:05 IST
Last Updated 18 ಜುಲೈ 2012, 10:05 IST

ಧಾರವಾಡ: ಗಂಡನೊಂದಿಗೆ ಬಾಳಲು ಇಚ್ಛಿಸದೇ ಇರುವುದರಿಂದ ತನ್ನ ಮಾವನೇ (ಗಂಡನ ತಂದೆ) ತನ್ನನ್ನು ಗುಜರಾತ್ ಮೂಲದ ವ್ಯಕ್ತಿಗಳಿಗೆ ಮಾರಾಟ ಮಾಡಿದ ಕಥೆ ಹೆಣೆದದ್ದಾಗಿ ಯುವತಿ ಇಲ್ಲಿನ ಶಹರ ಠಾಣೆಯ ಪೊಲೀಸರು ನಡೆಸಿದ ವಿಚಾರಣೆಯ ವೇಳೆ ಬಹಿರಂಗಪಡಿಸಿದ್ದಾಳೆ!

ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲ್ಲೂಕಿನ ಬೆಳವಡಿ ಗ್ರಾಮದ ಗೀತಾ (ಹೆಸರು ಬದಲಿಸಲಾಗಿದೆ) ಅಪಹರಣದ ಘಟನೆ ಹೆಣೆದ ಯುವತಿ. 2010ರಲ್ಲಿಯೇ ಗೀತಾಳನ್ನು ಧಾರವಾಡ ತಾಲ್ಲೂಕಿನ ಕುಂಬಾರಕೊಪ್ಪ ಗ್ರಾಮದ ಛಾಯಪ್ಪ ಮಟಗಾರ ಅವರ ಪುತ್ರ ಸಂಗಪ್ಪನೊಂದಿಗೆ ಮದುವೆ ನಡೆದಿತ್ತು. ಮದುವೆಯಾಗಿ ಒಂದೂವರೆ ವರ್ಷವಾದರೂ ಗಂಡನ ಮನೆಯಲ್ಲಿ ಹೊಂದಿಕೊಂಡಿರಲಿಲ್ಲ. ಪದೇ ಪದೇ ತವರಿಗೆ ಬರುತ್ತಿದ್ದ ಗೀತಾ, ಕುಂಬಾರಕೊಪ್ಪದಲ್ಲಿ ಕಳೆದದ್ದು ಕೇವಲ ಆರು ತಿಂಗಳ ಅವಧಿ. ಆದ್ದರಿಂದ ಹೇಗಾದರೂ ಮಾಡಿ ಈ ಸಂಬಂಧವನ್ನು ಮುರಿದುಕೊಳ್ಳಲು ನಿರ್ಧರಿಸಿ, “ಮಾವನೊಂದಿಗೆ ಬೆಳವಡಿಯಿಂದ ಕುಂಬಾರಕೊಪ್ಪಕ್ಕೆ ಬರುವಾಗ ಧಾರವಾಡದಲ್ಲಿ ಜೂನ್ 30ರಂದು ಸಂಜೆ 6ಕ್ಕೆ ಗುಜರಾತ್ ಮೂಲದ ಮೂವರು ಮೀರಜ್‌ನತ್ತ ಕರೆದೊಯ್ದರು. ತನ್ನ ಮಾವ ಛಾಯಪ್ಪ ಅವರೊಂದಿಗೆ ಹಿಂದಿಯಲ್ಲಿ ಮಾತನಾಡಿದ” ಎಂದು ಮೊದಲ ಹಂತದ ವಿಚಾರಣೆಯ ವೇಳೆ ಪೊಲೀಸರೆದುರು ಹೇಳಿದ್ದಳು. ಆದರೆ ಮೀರಜ್‌ಗೆ ಆ ಸಮಯದಲ್ಲಿ ಯಾವುದೇ ರೈಲುಗಳು ಇಲ್ಲದ್ದರಿಂದ ಸಂಶಯಗೊಂಡ ಪೊಲೀಸರು, ಯುವತಿ ಸುಳ್ಳು ಹೇಳುತ್ತಿದ್ದಾಳೆ ಎಂದು ಶಂಕಿಸಿ ಸತತ ವಿಚಾರಣೆ ನಡೆಸಿದರು.
ಮೊದಲು ಕೊಲ್ಲಾಪುರದಲ್ಲಿ ಇದ್ದೆ ಎಂದ ಯುವತಿ, ಬಳಿಕ ಬೇರೆಯವರ ಕಣ್ಣು ತಪ್ಪಿಸಿ ಬೆಳವಡಿಯಲ್ಲೇ ಇದ್ದುದಾಗಿ ಒಪ್ಪಿಕೊಂಡಿದ್ದಾಳೆ ಎಂದು ಉನ್ನತ ಪೊಲೀಸ್ ಮೂಲಗಳು `ಪ್ರಜಾವಾಣಿ~ಗೆ ತಿಳಿಸಿವೆ.

ಈ ಹಿನ್ನೆಲೆಯಲ್ಲಿ ನಿರಪರಾಧಿಗಳಾಗಿರುವ ಯುವತಿಯ ಗಂಡ ಸಂಗಪ್ಪ ಹಾಗೂ ಮಾವ ಛಾಯಪ್ಪ ಅವರ ವಿರುದ್ಧ ಯಾವುದೇ ಪ್ರಕರಣ ದಾಖಲಿಸಿಕೊಳ್ಳದ ಪೊಲೀಸರು ರಾಜಿ ಸಂಧಾನದ ಮೂಲಕ ಸಮಸ್ಯೆ ಪರಿಹಾರಕ್ಕೆ ಮುಂದಾಗಿದ್ದಾರೆ. ಮಂಗಳವಾರ ರಾತ್ರಿಯೂ ಯುವತಿಯ ವಿಚಾರಣೆ ನಡೆದೇ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.