ಹುಬ್ಬಳ್ಳಿ: ಗುಜರಾತ್ ಭವನದಲ್ಲಿ ಇನ್ನು ಒಂದು ವಾರದ ಕಾಲ ಶ್ರೀಗಂಧದ ಕಂಪಿನ ಘಮ, ಬಗೆಬಗೆಯ ಸೋಪು, ಅಗರಬತ್ತಿಗಳ ಪರಿಮಳ ತುಂಬಲಿದೆ.
ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ ವತಿಯಿಂದ ಆಯೋಜಿಸಿರುವ ‘ಸೋಪ್ ಸಂತೆ’ಗೆ ಗುರುವಾರ ಚಾಲನೆ ದೊರೆಯಿತು. ಒಂದೇ ಸೂರಿನ ಅಡಿಯಲ್ಲಿ 38 ಬಗೆಯ ಉತ್ಪನ್ನಗಳನ್ನು ಮಾರಾಟಕ್ಕೆ ಇಡಲಾಗಿದ್ದು, ಸೋಪಿನೊಂದಿಗೆ ಇನ್ನಿತರ ಉತ್ಪನ್ನಗಳು ಮಾರಾಟಕ್ಕೆ ಲಭ್ಯವಿದೆ.
ಸ್ನಾನಕ್ಕೆ ಬಳಸುವ ಸೋಪುಗಳಲ್ಲೇ ಹತ್ತಾರು ಬಗೆಯವು ಇಲ್ಲಿವೆ. ಮೈಸೂರು ಸ್ಯಾಂಡಲ್ ಸೋಪ್, ಗೋಲ್ಡ್, ಕ್ಲಾಸಿಕ್, ಮಿಲೇನಿಯಂ ಸರಣಿಗಳಲ್ಲಿ ಲಭ್ಯವಿದ್ದರೆ, ರೋಸ್, ವೇವ್ಲೈಮ್, ಹರ್ಬಲ್ ಕೇರ್ ಟರ್ಮರಿಕ್, ಕಾರ್ಬೊಲಿಕ್ ಸಾಬೂನುಗಳನ್ನು ಸಹ ಪ್ರದರ್ಶನದಲ್ಲಿ ಇಡಲಾಗಿದೆ.
ಮಕ್ಕಳಿಗೆಂದೇ ತಯಾರಿಸಲಾದ ಮೈಸೂರು ಸ್ಯಾಂಡಲ್ ಬೇಬಿ ಸೋಪ್, ಬೇಬಿ ಪೌಡರ್, ದೊಡ್ಡವರಿಗಾಗಿ ಮೈಸೂರು ಟಾಲ್ಕ್ ಇದೆ. ಬಟ್ಟೆ ತೊಳೆಯಲು ಡಿಟರ್ಜೆಂಟ್ ಪೌಡರ್, ಸೋಪ್ಗಳ ಜೊತೆಗೆ ಸುವಾಸನೆಯುಕ್ತ ಅಗರಬತ್ತಿಗಳ ಕಂಪು ಇಲ್ಲಿದೆ. ದೇವ ಪ್ರಿಯ ಆಸ್ತಿಕರಿಗಾಗಿ ಧೂಪ್ ಉತ್ಪನ್ನವನ್ನು ಸಹ ಕೆಎಸ್ಡಿಎಲ್ ಪರಿಚಯಿಸಿದೆ. ಇದಲ್ಲದೆ ಪರಿಮಳಯುಕ್ತ ಶ್ರೀಗಂಧದ ಎಣ್ಣೆ, ಶ್ರೀಗಂಧದ ಸಸಿಗಳನ್ನೂ ಮಾರಾಟಕ್ಕೆ ಇಡಲಾಗಿದೆ.
ಇದೇ 19ರವರೆಗೆ ಬೆಳಿಗ್ಗೆ 10ರಿಂದ ರಾತ್ರಿ 9ರವರೆಗೆ ಮಾರಾಟವಿರುತ್ತದೆ. ಅಂತರರಾಷ್ಟ್ರೀಯ ಗುಣಮಟ್ಟದ, ರೂ. 740 ಮುಖಬೆಲೆಯ ಮೈಸೂರು ಸ್ಯಾಂಡಲ್ ಮಿಲೇನಿಯಂ ಇಲ್ಲಿ ರೂ. 580ಕ್ಕೆ ಸಿಗುತ್ತದೆ. ಉಳಿದ ಉತ್ಪನ್ನಗಳ ಮಾರಾಟಕ್ಕೂ ರಿಯಾಯಿತಿ ಇದೆ.
ಉದ್ಘಾಟನೆ: ಶಾಸಕ ವಿನಯ್ ಕುಲಕರ್ಣಿ ಹಾಗೂ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಮೇಳವನ್ನು ಉದ್ಘಾಟಿಸಿದರು.
‘ವಿದ್ಯಾರ್ಥಿ ನಿಲಯಗಳ ಸಹಿತ ಸರ್ಕಾರದ ಎಲ್ಲ ಅಂಗಸಂಸ್ಥೆಗಳು ಕೆಎಸ್ಡಿಎಲ್ ಉತ್ಪನ್ನಗಳನ್ನೇ ಖರೀದಿಸುವಂತೆ ಆದೇಶ ಹೊರಡಿಸಬೇಕು’ ಎಂದು ಆಗ್ರಹಿಸಿದರು.
‘ಕೆಎಸ್ಡಿಎಲ್ ಸರ್ಕಾರಿ ಸಂಸ್ಥೆಯಾಗಿದ್ದು, ಇಲ್ಲಿ ಕಮಿಷನ್ ವ್ಯವಸ್ಥೆ ಇಲ್ಲದ ಕಾರಣ ಕೆಲವು ಸಂಸ್ಥೆಗಳು ಖಾಸಗಿ ಸಂಸ್ಥೆಗಳ ಉತ್ಪನ್ನಗಳ ಖರೀದಿಗೆ ಆಸಕ್ತಿ ತೋರುತ್ತಿವೆ. ಈ ಕುರಿತು ಮುಂಬರುವ ಅಧಿವೇಶನದಲ್ಲಿ ಸರ್ಕಾರದ ಗಮನಕ್ಕೆ ತರುತ್ತೇನೆ’ ಎಂದು ಅವರು ಹೇಳಿದರು. ಸುರಕ್ಷಿತ ಪ್ರದೇಶಗಳಲ್ಲಿ ಶ್ರೀಗಂಧ ಬೆಳೆಯಲು ಸರ್ಕಾರ ಆದ್ಯತೆ ನೀಡಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ, ಕೆಎಸ್ಡಿಎಲ್ ವ್ಯವಸ್ಥಾಪಕ ನಿರ್ದೇಶಕ ಎ.ಸಿ. ಕೇಶವಮೂರ್ತಿ, ಉಪ ಪ್ರಧಾನ ವ್ಯವಸ್ಥಾಪಕ ಸಿ.ಎಂ. ಸುವರ್ಣಕುಮಾರ್, ಲೀನಾ ಮಿಸ್ಕಿನ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಹೇಶ ಶಿರೂರ್ ಇತರರು ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.