ಧಾರವಾಡ: ತಮಿಳುನಾಡಿನ ತೂತ್ತುಕುಡಿಯಲ್ಲಿ ಹೋರಾಟ ನಡೆಸುತ್ತಿದ್ದವರ ಮೇಲೆ ಗೋಲಿಬಾರ್ ನಡೆಸಿದ್ದನ್ನುಖಂಡಿಸಿ ಎಸ್ಯುಸಿಐ (ಕಮ್ಯುನಿಸ್ಟ್) ಪಕ್ಷದ ಕಾರ್ಯಕರ್ತರು ಗುರುವಾರ ನಗರದ ವಿವೇಕಾನಂದ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಕೇಂದ್ರ ಸರ್ಕಾರದ ಕುಮ್ಮಕ್ಕಿನೊಂದಿಗೆ ತಮಿಳುನಾಡಿನ ಎಐಡಿಎಂಕೆ ಸರ್ಕಾರವು ಪೊಲೀಸ್ ಇಲಾಖೆ ಬಳಸಿಕೊಂಡು ಜನರ ನ್ಯಾಯಯುತವಾದ ಹೋರಾಟವನ್ನು ಹತ್ತಿಕ್ಕಲು ಇಂತಹ ಬರ್ಬರ ಕೃತ್ಯ ನಡೆಸಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಈ ವೇಳೆ ಮಾತನಾಡಿದ ಪಕ್ಷದ ಜಿಲ್ಲಾ ಸಮಿತಿ ಸದಸ್ಯ ಗಂಗಾಧರ ಬಡಿಗೇರ, ‘ಸರ್ಕಾರ ಮಾಲಿನ್ಯ ನಿಯಂತ್ರಣ ಕಾಯ್ದೆಯ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ವೇದಾಂತ ಕಂಪನಿಯು ತನ್ನ ಉದ್ಯಮವನ್ನು ನಡೆಸುತ್ತಿರುವ ಆರೋಪ ಎದುರಿಸುತ್ತಿದೆ. ಕಾರ್ಖಾನೆಯಿಂದ ಹೊರಬರುವ ವಿಷಕಾರಿ ತ್ಯಾಜ್ಯ ಸುತ್ತಮುತ್ತಲಿನ ಪರಿಸರ, ಕೃಷಿ ಭೂಮಿಯ ಮೇಲೆ ತೀವ್ರ ತರವಾದ ಕೆಟ್ಟ ಪರಿಣಾಮ ಬೀರಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರಿಯ ಹಸಿರು ಮಂಡಳಿಯು ಕಾರ್ಖಾನೆಯನ್ನು ಮುಚ್ಚಲು ಆದೇಶ ನೀಡಿದ್ದರೂ, ಹಿಂಬಾಗಿಲ ಮೂಲಕ ಅನುಮತಿ ಪಡೆದು ತನ್ನ ಚಟುವಟಿಕೆಗಳನ್ನು ಮುಂದುವರೆಸಿತ್ತು’ ಎಂದು ಟೀಕಿಸಿದರು.
‘ಕಂಪನಿಯನ್ನು ಮುಚ್ಚಲು ಒತ್ತಾಯಿಸಿ 20 ಸಾವಿರಕ್ಕೂ ಹೆಚ್ಚು ಜನರು, ರೈತರು, ಪರಿಸರವಾದಿಗಳು ಶಾಂತಿಯುತವಾಗಿ ನಡೆಸುತ್ತಿದ್ದ ಹೋರಾಟದ ಮೇಲೆ ಗೋಲಿಬಾರ್ ನಡೆಸಿರುವುದು ಪ್ರಜಾತಾಂತ್ರಿಕ ಚಳವಳಿಗಳ ಮೇಲಿನ ಮಾರಣಾಂತಿಕ ಹಲ್ಲೆಯಾಗಿದೆ. ಕೂಡಲೇ ಕಾರ್ಖಾನೆ ಮುಚ್ಚಬೇಕು. ಗೋಲಿಬಾರ್ಗೆ ಕಾರಣರಾದ ಪೊಲೀಸ್ ಅಧಿಕಾರಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಮೃತಪಟ್ಟವರ ಕುಟುಂಬಕ್ಕೆ ಹಾಗೂ ಗಾಯಗೊಂಡವರಿಗೆ ಸೂಕ್ತ ಪರಿಹಾರ ನೀಡಬೇಕು’ ಎಂದು ಒತ್ತಾಯಿಸಿದರು.
ಸದಸ್ಯರಾದ ಭುವನಾ, ದೀಪಾ, ಶರಣು ಗೋನವಾರ, ರಮೇಶ ಹೊಸಮನಿ, ಮಧುಲತಾ, ವಿಜಯಲಕ್ಷ್ಮಿ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.