ADVERTISEMENT

ಜಿಲ್ಲೆಯಲ್ಲಿ 15 ಗುಲಾಬಿ ಮತಗಟ್ಟೆ ಸಿದ್ಧ

ಮಹಿಳಾ ಮತದಾನ ಹೆಚ್ಚಳಕ್ಕೆ ಚುನಾವಣಾ ಆಯೋಗದ ವಿನೂತನ ಪ್ರಯತ್ನ

​ಪ್ರಜಾವಾಣಿ ವಾರ್ತೆ
Published 11 ಮೇ 2018, 6:16 IST
Last Updated 11 ಮೇ 2018, 6:16 IST
ಧಾರವಾಡದಲ್ಲಿ ಸ್ಥಾಪಿಸಲಾದ ‘ಸಖಿ’ ಮತಗಟ್ಟೆಗಳಲ್ಲಿನ ಅಂತಿಮ ಸಿದ್ಧತೆ ಕುರಿತು ಸ್ನೇಹಲ್ ರಾಯಮಾನೆ ಪರಿಶೀಲನೆ ನಡೆಸಿದರು. ಟಿ.ಎಸ್.ರುದ್ರೇಶಪ್ಪ, ಪ್ರಕಾಶ ಕುದರಿ, ಪಾರ್ವತಿ ರೆಡ್ಡಿ ಇದ್ದಾರೆ
ಧಾರವಾಡದಲ್ಲಿ ಸ್ಥಾಪಿಸಲಾದ ‘ಸಖಿ’ ಮತಗಟ್ಟೆಗಳಲ್ಲಿನ ಅಂತಿಮ ಸಿದ್ಧತೆ ಕುರಿತು ಸ್ನೇಹಲ್ ರಾಯಮಾನೆ ಪರಿಶೀಲನೆ ನಡೆಸಿದರು. ಟಿ.ಎಸ್.ರುದ್ರೇಶಪ್ಪ, ಪ್ರಕಾಶ ಕುದರಿ, ಪಾರ್ವತಿ ರೆಡ್ಡಿ ಇದ್ದಾರೆ   

ಧಾರವಾಡ: ಚುನಾವಣಾ ಆಯೋಗದ ನಿರ್ದೇಶನದಂತೆ ಮಹಿಳಾ ಮತದಾರರ ಸಂಖ್ಯೆ ಹೆಚ್ಚಾಗಿರುವ 15 ಕಡೆ ಗುಲಾಬಿ ಬಣ್ಣ ಬಳಿದ ‘ಸಖಿ’ ಮತಗಟ್ಟೆಗಳನ್ನು ಸಿದ್ಧಪಡಿಸಲಾಗಿದೆ. ಇಲ್ಲಿ ಕಾರ್ಯ ನಿರ್ವಹಿಸುವ ಪ್ರತಿಯೊಬ್ಬ ಚುನಾವಣಾ ಸಿಬ್ಬಂದಿ ಮಹಿಳೆಯರೇ ಆಗಿರುತ್ತಾರೆ. ಈ ಮತಗಟ್ಟೆಗಳಿಗೆ ಗುರುವಾರ ಅಂತಿಮ ಸ್ಪರ್ಶ ನೀಡಲಾಯಿತು.

ಈ ಮತಗಟ್ಟೆಗಳ ಸಿದ್ಧತೆ ಕುರಿತು ಪರಿಶೀಲನೆ ನಡೆಸಿದ ಸ್ವೀಪ್ ಸಮಿತಿ ಅಧ್ಯಕ್ಷೆ ಸ್ನೇಹಲ್ ರಾಯಮಾನೆ, ಮಹಿಳಾ ಸಿಬ್ಬಂದಿ ಹಾಗೂ ಮಹಿಳಾ ಮತದಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅಗತ್ಯ ಮಾರ್ಪಾಡುಗಳನ್ನು ಮಾಡಲು ಸೂಚಿಸಿದರು.

ನವಲಗುಂದ ವಿಧಾನಸಭಾ ಕ್ಷೇತ್ರದ ಅಣ್ಣಿಗೇರಿ ಅಮೃತೇಶ್ವರ ಕಾಲೇಜು ಮತಗಟ್ಟೆ ಸಂಖ್ಯೆ 170, ಕುಂದಗೋಳ ಕ್ಷೇತ್ರದಲ್ಲಿ ಕುಂದಗೋಳ ಪಟ್ಟಣ ಪಂಚಾಯ್ತಿಯಲ್ಲಿರುವ 39ನೇ ಮತಗಟ್ಟೆ, ಧಾರವಾಡ ವಿಧಾನಸಭಾ ಕ್ಷೇತ್ರದ ವಾರ್ಡ್‌ ಸಂಖ್ಯೆ 6ರಲ್ಲಿರುವ ಹಳೇ ಎಪಿಎಂಸಿಯ 131ನೇ ಮತಗಟ್ಟೆ ಹಾಗೂ ವಾರ್ಡ್‌ ಸಂಖ್ಯೆ 3ರಲ್ಲಿರುವ 161ನೇ ಹಾಗೂ 164ನೇ ಮತಗಟ್ಟೆ, ಹುಬ್ಬಳ್ಳಿ–ಧಾರವಾಡ ಪೂರ್ವ ವ್ಯಾಪ್ತಿಯ 54ನೇ ಮತಗಟ್ಟೆ, ಕೌಲಪೇಟೆಯ ಬಾಲಕಿಯರ ಆಂಗ್ಲೋ ಉರ್ದು ಪ್ರೌಢಶಾಲೆ, ಬೈಪಾಸ್ ಹತ್ತಿರದ ಗುರುಸಿದ್ಧೇಶ್ವರ ಕಾಲೊನಿಯ ಸೇಂಟ್ ಜಾನ್ ಸೇವಾ ಪ್ರಾಥಮಿಕ ಶಾಲೆಯ ಕೊಠಡಿ ಸಂಖ್ಯೆ 2, ಹುಬ್ಬಳ್ಳಿ ಧಾರವಾಡ ಕೇಂದ್ರದ ವ್ಯಾಪ್ತಿಯ ಭೈರಿದೇವರಕೊಪ್ಪದ ಎಂ.ಐ.ಪಾಟೀಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ರಾಜನಗರದ ಕೇಂದ್ರೀಯ ವಿದ್ಯಾಲಯ, ಉಣಕಲ್‌ನ ರಾಚಯ್ಯ ಹಿರೇಮಠ ಶಾಲೆ, ಹುಬ್ಬಳ್ಳಿ ಧಾರವಾಡ ಪಶ್ಚಿಮದ ಸಾಧನಕೇರಿಯ ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್, ಜ್ಯುಬಿಲಿ ವೃತ್ತದಲ್ಲಿರುವ ಮಹಿಳಾ ಶಿಕ್ಷಕರ ತರಬೇತಿ ಕೇಂದ್ರ, ಪವನ್ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆ, ಹಾಗೂ ಕಲಘಟಗಿ ಕ್ಷೇತ್ರದ ಕಲಘಟಗಿ ಹಾಗೂ ಅಳ್ನಾವರ ಪಟ್ಟಣ ಪಂಚಾಯ್ತಿಗಳಲ್ಲಿ ಸಖಿ ಮತೆಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ADVERTISEMENT

ಮಹಿಳಾ ಮತದಾರರನ್ನು ಪ್ರೋತ್ಸಾಹಿಸಲು ಮಹಿಳಾ ಮತದಾರರು ಸಂಖ್ಯೆ ಹೆಚ್ಚು ಇರುವ ಪ್ರದೇಶಗಳಲ್ಲಿ ‘ಸಖಿ’ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ. ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳಿಗೂ ಅವರ ಏಜೆಂಟರನ್ನಾಗಿ ಮಹಿಳೆಯರನ್ನೇ ನೇಮಿಸಲು ಸ್ವೀಪ್ ಸಮಿತಿ ಮನವಿ ಮಾಡಿಕೊಂಡಿದೆ. ಮತಗಟ್ಟೆಯ ವ್ಯಾಪ್ತಿಯ ಪುರುಷರಿಗೂ ಮತ ಚಲಾಯಿಸಲು ಅವಕಾಶ ಇರುತ್ತದೆ.

‘ಮಹಿಳೆಯರು ಸ್ವವಿವೇಚನೆಯಿಂದ ಮತ ಚಲಾಯಿಸಬೇಕು. ಜಿಲ್ಲೆಯ ಮಹಿಳೆಯರು ಹೆಚ್ಚು ಮತ ಚಲಾಯಿಸಿ ಇತರ ಜಿಲ್ಲೆಗಳವರಿಗೆ ಮಾದರಿಯಾಗಬೇಕು’ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಮನವಿ ಮಾಡಿದ್ದಾರೆ.

ಪ್ರೊಬೇಷನರಿ ಉಪ ವಿಭಾಗಾಧಿ ಕಾರಿ ಪಾರ್ವತಿ ರೆಡ್ಡಿ, ನವಲಗುಂದ ಚುನಾವಣಾಧಿಕಾರಿ ಟಿ.ಎಸ್.ರುದ್ರೇಶಪ್ಪ, ತಹಶೀಲ್ದಾರ್ ಪ್ರಕಾಶ ಕುದರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.