ಹುಬ್ಬಳ್ಳಿ: ದೆಹಲಿಯಿಂದ ಮರಳಿದ ಮಹದಾಯಿ ಹೋರಾಟಗಾರರನ್ನು ರೈತರು ಭಾನುವಾರ ಸ್ವಾಗತಿಸಿದರು. ನಂತರ ಚನ್ನಮ್ಮ ವೃತ್ತಕ್ಕೆ ತೆರಳಿದ ಹೋರಾಟಗಾರರು ನೀರು ಬಿಡುವವರೆಗೂ ಚಳವಳಿ ನಿಲ್ಲದು, ಈ ಹೋರಾಟ ನಿರಂತರ ಎಂದು ಘೋಷಣೆ ಕೂಗಿದರು.
‘ಪ್ರಧಾನಿ ಅವರನ್ನು ಭೇಟಿಯಾಗಲು ದೆಹಲಿಗೆ ಹೋಗಿದ್ದೆವು. ಆದರೆ, ಅವರ ಪರವಾಗಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಹೋರಾಟಗಾರರ ಮನವಿ ಆಲಿಸಿದರು. ಯೋಜನೆ ಜಾರಿಯಾಗಬೇಕು ಎಂಬುದನ್ನು ಸ್ಪಷ್ಟಪಡಿಸಿದೆವು. ಜುಲೈನಲ್ಲಿ ನ್ಯಾಯಮಂಡಳಿ ಐತೀರ್ಪು ಬರುವ ನಿರೀಕ್ಷೆ ಇದ್ದು, ಅದು ಕರ್ನಾಟಕದ ಹೋರಾಟಗಾರರಿಗೆ ಸಮಾಧಾನ ನೀಡಲಿದೆ ಎಂದು ಗಡ್ಕರಿ ಹೇಳಿದರು’ ಎಂದು ಮಹಾ ವೇದಿಕೆಯ ಅಧ್ಯಕ್ಷ ಶಂಕ್ರಪ್ಪ ಅಂಬಲಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಸಹ್ಯಾದ್ರಿ ಸಂಸ್ಥೆ ಹಾಗೂ ನಾವು ನೀಡಿರುವ 9 ತಾಲ್ಲೂಕುಗಳ ನೀರಾವರಿ (ಮೈಕ್ರೋ ಪ್ರಾಜೆಕ್ಟ್) ಯೋಜನೆಗೆ ಒಪ್ಪಿಗೆ ನೀಡುವ ವಿಷಯದ ಬಗ್ಗೆಯೂ ಗಮನ ಸೆಳೆದವು. ಐತೀರ್ಪಿನ ನಂತರವೆ ಆ ಬಗ್ಗೆ ತೀರ್ಮಾನ ಮಾಡಲಾಗುವುದು ಎಂಬ ಭರವಸೆಯನ್ನು ಸಹ ಅವರು ನೀಡಿದರು. ಆಗಸ್ಟ್ 1ರಂದು ಮತ್ತೆ ಭೇಟಿಯಾಗುವಂತೆ ತಿಳಿಸಿದ್ದಾರೆ’ ಎಂದರು.
‘ಯಾವ ಬೇಡಿಕೆಗಳಿಗಾಗಿ ಹೋರಾಟ ಆರಂಭಿಸಲಾಗಿದೆಯೋ ಅವುಗಳು ಸಂಪೂರ್ಣವಾಗಿ ಈಡೇರಬೇಕು. ಅಲ್ಲಿಯ ವರೆಗೂ ಇದು ನಿರಂತರವಾಗಿ ನಡೆಯಲಿದೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.