ಹುಬ್ಬಳ್ಳಿ: ಇಲ್ಲಿಯ ಗಂಗಾಧರನಗರದ ದೊಡ್ಡಕೇರಿ ಓಣಿಯಲ್ಲಿ ಪ್ರತಿಷ್ಠಾಪಿಸುವ ಮುನ್ನ ದುರ್ಗಾದೇವಿ ಹಾಗೂ ಮರೆಮ್ಮದೇವಿ ಮೂರ್ತಿಗಳ ಮೆರವಣಿಗೆ ನಗರದಲ್ಲಿ ವಿಜೃಂಭಣೆಯಿಂದ ಸೋಮವಾರ ನಡೆಯಿತು.
ಬಣಗಾರ ಓಣಿಯಿಂದ ಆರಂಭಗೊಂಡ ಮೆರವಣಿಗೆಯು ದೇಸಾಯಿ ಓಣಿ, ಗೌಡರ ಓಣಿ ಮೂಲಕ ಕರ್ಕಿ ಬಸವೇಶ್ವರನಗರ ಮಾರ್ಗವಾಗಿ ದೊಡ್ಡಕೇರಿ ಓಣಿಯ ಗುಡಿಗೆ ಸಮಾರೋಪಗೊಂಡಿತು.
ಸುತಗಟ್ಟಿಯ ವೀರಭದ್ರೇಶ್ವರ ಮಹಿಳಾ ಜಗ್ಗಲಿಗೆ ಮೇಳದ ಕಲಾವಿದರು ಗಮನ ಸೆಳೆದರು. ಕಾಲೇಜಿನ ವಿದ್ಯಾರ್ಥಿನಿಯರ ಜೊತೆಗೆ ಯುವತಿಯರೂ ಜಗ್ಗಲಿಗೆ ಬಾರಿಸಿದರು. ಆಗಾಗ ಜಗ್ಗಲಿಗೆ ಏರಿ ಕುಣಿದು ಮೆರವಣಿಗೆಗೆ ರಂಗು ತಂದರು. ಇವರೊಂದಿಗೆ ಹೆಗ್ಗೋಡಿನ ಮಹಿಳಾ ಕಲಾ ಮಂಡಳದ ಡೊಳ್ಳಿನ ಮೇಳ, ಸ್ಥಳೀಯ ಅರವಿಂದನಗರದ ನಾಗಸ್ವರ ತಂಡ, ಧಾರವಾಡ ತಾಲ್ಲೂಕಿನ ಶಿಬಾರಗಟ್ಟಿ ಗ್ರಾಮದ ಕರಡಿಮಜಲು ಮೆರವಣಿಗೆಯಲ್ಲಿದ್ದವು. ಕುಂಭ ಹೊತ್ತ 501 ಮಹಿಳೆಯರು ಒಂದೇ ಬಗೆಯ ಸೀರೆಯುಟ್ಟು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಮೆರವಣಿಗೆಯಲ್ಲಿ ಪಾಲ್ಗೊಂಡವರಿಗೆ ಕುಡಿಯುವ ನೀರು ಹಾಗೂ ಕಲ್ಲುಸಕ್ಕರೆ ವ್ಯವಸ್ಥೆಗೊಳಿಸಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.