ADVERTISEMENT

ಧಾರವಾಡ ರಸ್ತೆಯಲ್ಲೂ ಹೊಂಡಗಳ ಸಾಮ್ರಾಜ್ಯ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2011, 6:50 IST
Last Updated 3 ಸೆಪ್ಟೆಂಬರ್ 2011, 6:50 IST

ಧಾರವಾಡ: ಕಳೆದ ಐದು ದಿನಗಳಿಂದ ಸುರಿಯುತ್ತಿರುವ ಮಳೆಗೆ ನಗರದ ಬಹುತೇಕ ರಸ್ತೆಗಳು ಹಾಳಾಗಿವೆ. ದಿನವೀಡಿ ಸುರಿಯುತ್ತಿರುವ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಶುಕ್ರವಾರ ಕೆಲ ಹೊತ್ತು ಮಾತ್ರ ಬಳೆ ಬಿಡುವು ನೀಡಿತ್ತು.

ಸತತ ಮಳೆಗೆ ನೆಂದಿದ್ದ ಗೋಡೆಯೊಂದು ಕುಸಿದು ಬಿದ್ದಿದೆ. ಇಲ್ಲಿನ ಮದಾರ ಮಡ್ಡಿಯ ತಿಮ್ಮಪ್ಪ ಸಾಂಬ್ರಾಣಿ ಎಂಬುವರ ಮನೆಯ ಗೋಡೆ ಕುಸಿದಿದೆ. ಯಾವುದೇ ಹಾನಿ ಸಂಭವಿಸಿಲ್ಲ.

ಬುಧವಾರ (ಆ. 30) ಮಳೆ ಸುರಿದಿದ್ದರಿಂದ ರಮ್ಜಾನ್ ಹಬ್ಬದ ಅಂಗವಾಗಿ ಮುಸ್ಲಿಂ ಬಾಂಧವರು ಮಳೆಯಲ್ಲಿಯೇ ಪ್ರಾರ್ಥನೆ ಸಲ್ಲಿಸ ಬೇಕಾಯಿತು.

ಗುರುವಾರ (ಆ. 31) ಸಾರ್ವಜನಿಕ ಗಣೇಶೋತ್ಸವ ಮಂಡಳಗಳ ಗಣೇಶ ಮೂರ್ತಿಗಳ ಮೆರವಣಿಗೆಗೆ ಮಳೆಯಿಂದ ತೀವ್ರ ಅಡಚಣೆ ಉಂಟಾಯಿತು. ರಾತ್ರಿ 10ರ ವರೆಗೆ ಗಣೇಶ ಮೂರ್ತಿಗಳ ಮೆರವಣಿಗೆ, ಪ್ರತಿಷ್ಠಾಪನೆ ನಡೆಯಿತು.

ಆ. 28 ರಿಂದ ಸೆ. 2ರ ವರೆಗೆ ಧಾರವಾಡ ತಾಲ್ಲೂಕಿನಲ್ಲಿ 53.97 ಮಿಮೀ, ಹುಬ್ಬಳ್ಳಿಯಲ್ಲಿ 29.57 ಮಿಮೀ, ಕಲಘಟಗಿಯಲ್ಲಿ 83.48 ಮಿಮೀ, ಕುಂದಗೋಳದಲ್ಲಿ 29.9 ಹಾಗೂ ನವಲಗುಂದ ತಾಲ್ಲೂಕಿನಲ್ಲಿ 12.15 ಮಿಮೀ ಮಳೆ ಆಗಿದೆ. ತೇಗೂರು, ಛಬ್ಬಿ, ಕಲಘಟಗಿ, ಧುಮ್ಮವಾಡ, ಅಣ್ಣಿಗೇರಿ ಪ್ರದೇಶಗಳ ಸುತ್ತಮುತ್ತಲು ಹೆಚ್ಚಿನ ಪ್ರಮಾಣದ ಮಳೆ ಆಗಿದೆ ಎಂದು ಜಿಲ್ಲಾಧಿಕಾರಿ ದರ್ಪಣ ಜೈನ್ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಆಗಸ್ಟ್ ತಿಂಗಳಿನಲ್ಲಿ ಸರಾಸರಿ 99.9 ಮಿಮೀ ವಾಡಿಕೆ ಮಳೆ ಆಗಬೇಕಿತ್ತು, ಆದರೆ 116.72 ಮಿಮೀ ಮಳೆ ಆಗಿದೆ. ಧಾರವಾಡ ತಾಲ್ಲೂಕಿನಲ್ಲಿ ವಾಡಿಕೆ ಮಳೆ 118.6 ಮಿಮೀ ಆಗಬೇಕಿತ್ತು ಆದರೆ 150.47 ಮಿಮೀ ಮಳೆ ಆಗಿದೆ.

ಹುಬ್ಬಳ್ಳಿಯಲ್ಲಿ ವಾಡಿಕೆ ಮಳೆ 84.3 ಮಿಮೀ ಆಗಬೇಕಿತ್ತು ಆದರೆ 66.3 ಮಿಮೀ, ಕಲಘಟಗಿಯಲ್ಲಿ 153.7 ಮಿಮೀ ವಾಡಿಕೆ, ಆದರೆ 171.43 ಮಿಮೀ, ಕುಂದಗೋಳದಲ್ಲಿ 75.6 ವಾಡಿಕೆ, ಆದರೆ 63.85 ಮಿಮೀ ಹಾಗೂ ನವಲಗುಂದದಲ್ಲಿ 67.4 ಮಿಮೀ ವಾಡಿಕೆ ಮಳೆ ಆಗಬೇಕಿತ್ತು. ಇದುವರೆಗೆ ಸುಮಾರು 131.56 ಮಿಮೀ ಮಳೆಯಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.