ADVERTISEMENT

ನವನಗರದಲ್ಲಿ ಮೊದಲ ಶೂನ್ಯ ಕಸ ನಿರ್ವಹಣೆ ಕೇಂದ್ರ ಆರಂಭ:ಮನೆ ಕಸ ಇನ್ನು ಸಾವಯವ ಗೊಬ್ಬರ!

​ಪ್ರಜಾವಾಣಿ ವಾರ್ತೆ
Published 26 ಮೇ 2012, 9:10 IST
Last Updated 26 ಮೇ 2012, 9:10 IST

ಹುಬ್ಬಳ್ಳಿ: ನವನಗರದ ಪಾಲಿಕೆ ಉದ್ಯಾನದ ಪಕ್ಕದ ಜಾಗೆಯಲ್ಲಿ ಪಾಲಿಕೆಯಿಂದ ತೆರೆಯಲಾದ ಶೂನ್ಯ ಕಸ ನಿರ್ವಹಣೆ ಕೇಂದ್ರವನ್ನು ಶುಕ್ರವಾರ ಮೇಯರ್ ಡಾ. ಪಾಂಡುರಂಗ ಪಾಟೀಲ ಉದ್ಘಾಟಿಸಿದರು.
ಪ್ರತಿ ಮನೆಯಿಂದ ಕೊಳೆಯುವ ಕಸ ಮತ್ತು ಕೊಳೆಯಲಾರದ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸಿ, ಕೊಳೆಯುವ ಕಸವನ್ನು ಗೊಬ್ಬರವನ್ನಾಗಿ ಪರಿವರ್ತಿಸಲು ಕ್ರಮ ಕೈಗೊಳ್ಳಲಾಗುತ್ತದೆ.

ಇತರ ಕಸವನ್ನು ಡಂಪ್ ಯಾರ್ಡ್‌ಗೆ ಸಾಗಿಸಲಾಗುತ್ತದೆ. ಇದರಿಂದ ಶಿಸ್ತುಬದ್ಧವಾಗಿ ಕಸ ನಿರ್ವಹಣೆಯಾಗಿ ನಗರವನ್ನು ಸ್ವಚ್ಛವಾಗಿಡಲು ಸಾಧ್ಯವಾಗುತ್ತದೆ ಎನ್ನುವುದು ಮೇಯರ್ ಕನಸಾಗಿದೆ.`ಕಸದ ಡಬ್ಬಿ ಮುಕ್ತವಾದ, ಸ್ವಚ್ಛ, ಸುಂದರ ನಗರವನ್ನು ರೂಪಿಸುವುದೇ ಪಾಲಿಕೆ ಗುರಿಯಾಗಿದೆ. ಕಡಿಮೆ ಕಸ, ಕಸದ ಮರುಬಳಕೆ ಶೂನ್ಯ ನಿರ್ವಹಣೆಯ ಮೂಲತತ್ವವಾಗಿದೆ. ತ್ಯಾಜ್ಯವನ್ನು ಅತ್ಯಂತ ಕಡಿಮೆ ಖರ್ಚಿನಲ್ಲಿ ನಿರ್ವಹಣೆ ಮಾಡಿ, ಸಾಧ್ಯವಾದಷ್ಟು ಆದಾಯವನ್ನೂ ಗಳಿಸಲು ಈ ವ್ಯವಸ್ಥೆಯಲ್ಲಿ ಸಾಧ್ಯವಿದೆ~ ಎಂದು ಅವರು ತಿಳಿಸಿದರು.

`ರಸ್ತೆ, ಚರಂಡಿಗಳು ತ್ಯಾಜ್ಯದಿಂದ ಮುಕ್ತವಾದರೆ ಸಹಜವಾಗಿಯೇ ಹಂದಿಗಳ ಕಾಟ ತಪ್ಪಲಿದೆ. ಉಳಿದ ಆಹಾರ ಪದಾರ್ಥಗಳನ್ನು ರಸ್ತೆಗೆ ಚೆಲ್ಲದಿದ್ದರೆ ಬೀದಿ ನಾಯಿಗಳ ಕಾಟವೂ ಇರುವುದಿಲ್ಲ~ ಎಂದು ಅವರು ಹೇಳಿದರು.
ಉದ್ಯಾನದ ಪಕ್ಕದ ಜಾಗದಲ್ಲಿ ಕಸವನ್ನು ಹಾಕಿ ಅದರ ಮೇಲೆ ಮಣ್ಣು ಎಳೆಯಲಾಗುತ್ತದೆ. ಅಲ್ಲಿಯೇ ತ್ಯಾಜ್ಯವೆಲ್ಲ ಕೊಳೆತು ಸಾವಯವ ಗೊಬ್ಬರವಾಗಿ ಮಾರ್ಪಡುತ್ತದೆ. ಹೀಗೆ ಉತ್ಪಾದಿಸಲಾದ ಗೊಬ್ಬರವನ್ನು ಆರಂಭಿಕ ಹಂತದಲ್ಲಿ ಪಾಲಿಕೆ ಉದ್ಯಾನಗಳಿಗೆ ಬಳಸಲು ಉದ್ದೇಶಿಸಲಾಗಿದ್ದು, ಮುಂದಿನ ದಿನಗಳಲ್ಲಿ ಉತ್ಪಾದನೆ ಹೆಚ್ಚಾದರೆ ಮಾರಾಟ ಮಾಡಲೂ ಪಾಲಿಕೆ ಉದ್ದೇಶಿಸಿದೆ.

ಇನ್ನಷ್ಟು ಬಡಾವಣೆಗಳಲ್ಲಿ ಶೀಘ್ರವೇ ಈ ವ್ಯವಸ್ಥೆಯನ್ನು ಅನುಷ್ಠಾನಕ್ಕೆ ತರಲಾಗುವುದು ಎಂದು ಆಯುಕ್ತ ಡಾ.ಕೆ.ವಿ. ತ್ರಿಲೋಕಚಂದ್ರ ಹೇಳಿದರು. ಮಹಿಳಾ ಸ್ವ-ಸಹಾಯ ಗುಂಪುಗಳನ್ನೂ ಈ ಯೋಜನೆಯಲ್ಲಿ ತೊಡಗಿಸಿಕೊಳ್ಳುವ ಉದ್ದೇಶವಿದ್ದು, ನೈರ್ಮಲ್ಯ ಕಾಪಾಡಲು ಪಾಲಿಕೆ ಇಟ್ಟ ದಿಟ್ಟವಾದ ಹೆಜ್ಜೆಯಿದು ಎಂದು ಅವರು ಹೇಳಿದರು.

ಶಾಸಕ ಚಂದ್ರಕಾಂತ ಬೆಲ್ಲದ, ಪಾಲಿಕೆ ಸದಸ್ಯರಾದ ಚಂದ್ರಶೇಖರ ಮನಗುಂಡಿ, ರಾಜಣ್ಣ ಕೊರವಿ, ಜಂಟಿ ಆಯುಕ್ತ ವೀರೇಂದ್ರ ಕುಂದಗೋಳ ಮತ್ತಿತರರು ಹಾಜರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.