ಹುಬ್ಬಳ್ಳಿ: ದ್ವಿಚಕ್ರಕ್ಕೆ ವಾಹನಕ್ಕೆ ಟೆಂಪೊ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ, ಎಂಜಿನಿಯರಿಂಗ್ ವಿದ್ಯಾರ್ಥಿ ಸ್ಥಳದಲ್ಲೆ ಸಾವಿಗೀಡಾದ ಘಟನೆ ಗೋಕುಲ ರಸ್ತೆಯ ದುರ್ಗಾದೇವಿ ಗುಡಿ ಬಳಿ ಸೋಮವಾರ ಮಧ್ಯಾಹ್ನ ನಡೆದಿದೆ.
ಮೃತನನ್ನು ಗದಗ ನಿವಾಸಿ ಅರುಣ್ ಗೌಡರ್ (23) ಎಂದು ಗುರುತಿಸಲಾಗಿದೆ. ಎಸ್ಡಿಎಂ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವಿ ಓದುತ್ತಿದ್ದ ಅರುಣ್ ತನ್ನ `ಫ್ಯಾಶನ್ ಬೈಕ್~ನಲ್ಲಿ ತಾರೀಹಾಳ ಕಡೆಯಿಂದ ಹುಬ್ಬಳ್ಳಿಗೆ ಬರುತ್ತಿದ್ದಾಗ ಸರಕು ಹೇರಿಕೊಂಡು ಹೋಗುತ್ತಿದ್ದ ಟೆಂಪೊ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ರಸ್ತೆಗೆ ಎಸೆಯಲ್ಪಟ್ಟ ಅರುಣ್ ಸ್ಥಳದಲ್ಲೆ ಸಾವಿಗೀಡಾದ್ದಾನೆ. ಟೆಂಪೊ ಚಾಲಕ ತಲೆಮರೆಸಿಕೊಂಡಿದ್ದಾನೆ.
ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಸಂಚಾರ ಎಸಿಪಿ ಎನ್.ಎಸ್.ಪಾಟೀಲ ಹಾಗೂ ಉತ್ತರ ಸಂಚಾರ ಪೊಲೀಸರು ತೆರಳಿ ಪ್ರಕರಣ ದಾಖಲಿಸಿಕೊಂಡರು.
ಜೀವನ ಜಿಗುಪ್ಸೆ: ಆತ್ಮಹತ್ಯೆ
ಹುಬ್ಬಳ್ಳಿ: ಜೀವನ ಜಿಗುಪ್ಸೆಗೊಂಡ ವ್ಯಕ್ತಿಯೊಬ್ಬರು ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಸದರಸೋಪಾದಲ್ಲಿ ನಡೆದಿದೆ
ಸದರಸೋಪಾ ನಿವಾಸಿ ಸೌದುಸಾಬ ಅಬ್ದುಲಸಾಬ ಬಾರಾವಾಲೆ (55) ಆತ್ಮಹತ್ಯೆ ಮಾಡಿಕೊಂಡವರು. ಜೂನ್ 28ರಂದು ವಿಷ ಸೇವಿಸಿ ಅಸ್ವಸ್ಥಗೊಂಡಿದ್ದ ಸೌದುಸಾಬ ಅವರನ್ನು ಕಿಮ್ಸ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಚಿಕಿತ್ಸೆ ಫಲಿಸದೆ ಸೋಮವಾರ ನಸುಕಿನಲ್ಲಿ ಕೊನೆಯುಸಿರೆಳೆದರು. ಕಸಬಾ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.