ADVERTISEMENT

ಭಾರತ ನಕಾಶೆಯಲ್ಲಿ ಕರ್ನಾಟಕ ಇಲ್ಲವೆ?

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2012, 5:20 IST
Last Updated 1 ಆಗಸ್ಟ್ 2012, 5:20 IST

ಹುಬ್ಬಳ್ಳಿ: `ಕೇಂದ್ರ ಸರ್ಕಾರ ನಮಗೆ ರೈಲ್ವೆ ಸೌಲಭ್ಯ ನೀಡುವಲ್ಲಿ ತಾರತಮ್ಯ ಮಾಡುತ್ತಿರುವುದನ್ನು ನೋಡಿದರೆ ಅವರ ಭಾರತದ ನಕಾಶೆಯಲ್ಲಿ ಕರ್ನಾಟಕ ರಾಜ್ಯವೇ ಇಲ್ಲವೇನೋ ಎಂಬ ಸಂಶಯ ಮೂಡಿದೆ~ ಎಂದು ಸಂಸದ ಪ್ರಹ್ಲಾದ ಜೋಶಿ ಆಕ್ರೋಶ ವ್ಯಕ್ತಪಡಿಸಿದರು.

ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್ ರೈಲನ್ನು ವಾರದ ಏಳೂ ದಿನ ರಾಜ್ಯದ ಮೂಲಕವೇ ಓಡಿಸಬೇಕು ಎಂದು ಆಗ್ರಹಿಸಿ ನೈರುತ್ಯ ರೈಲ್ವೆ ವಲಯ ಪ್ರಧಾನ ಕಚೇರಿ ಮುಂದೆ ಮಂಗಳವಾರ ತಮ್ಮ ನೇತೃತ್ವದಲ್ಲಿ ಸಂಸದರು ನಡೆಸಿದ ಧರಣಿ ಸತ್ಯಾಗ್ರಹದಲ್ಲಿ ಅವರು ಮಾತನಾಡಿದರು.

`ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್ ರಾಜ್ಯದಲ್ಲಿ ಕೇವಲ ಅರ್ಧ ಗಂಟೆ ಪ್ರಯಾಣದ ಬಳಿಕ ಆಂಧ್ರವನ್ನು ಸೇರಿಬಿಡು ತ್ತದೆ. ಇದು ಹೇಗೆ ಕರ್ನಾಟಕದ ರೈಲಾಗುತ್ತದೆ~ ಎಂದು ಅವರು ಪ್ರಶ್ನಿಸಿದರು.

`ಆಂಧ್ರಪ್ರದೇಶದ ಜನರ ಪ್ರತಿಭಟನೆಗೆ ಹೆದರಿ ಕೇಂದ್ರ ಸರ್ಕಾರ ನಮ್ಮ ಬೇಡಿಕೆ ಈಡೇರಿಸಲು ಹಿಂಜರಿ ಯುತ್ತಿದೆ. ಆದರೆ, ದೆಹಲಿಗೆ ಹೋಗಲು ಆಂಧ್ರದ ಮಂದಿಗೆ ಇನ್ನೂ ಹತ್ತು ರೈಲುಗಳಿವೆ. ನಮ್ಮ ಸೌಲಭ್ಯವನ್ನು ಕಿತ್ತುಕೊಂಡು ಅದೇ ಜನಕ್ಕೆ ಕೊಡುವುದೇಕೆ~ ಎಂದು ಆಕ್ರೋಶದಿಂದ ಕೇಳಿದರು. `ರಾಜ್ಯದವರೇ ಆದ ಕೆ.ಎಚ್. ಮುನಿಯಪ್ಪ ಕೇಂದ್ರದ ರೈಲ್ವೆ ಖಾತೆ ಸಹಾಯಕ ಸಚಿವರಾದರೂ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿ ಸುತ್ತಿಲ್ಲ~ ಎಂದೂ ಅವರು ದೂರಿದರು.

`ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ತಪ್ಪಿಸಲು ಜೈಲಿಗೆ ಹೋಗಲೂ ಹಿಂಜರಿಯದೆ ಹೋರಾಟ ನಡೆಸುತ್ತೇವೆ. ಈ ಹೋರಾಟದ ಬಿಸಿಯನ್ನು ಬೆಂಗಳೂರು, ನವದೆಹ ಲಿಗೂ ಮುಟ್ಟಿಸುತ್ತೇವೆ~ ಎಂದು ಹೇಳಿದರು. `ಸ್ಥಗಿತಗೊಂಡ ಕೊಲ್ಲಾ ಪುರ-ಹೈದರಾಬಾದ್ ರೈಲನ್ನು ತಕ್ಷಣ ಆರಂಭಿಸಬೇಕು ಮತ್ತು ವಿಜಾಪುರ- ಬೆಂಗಳೂರು ರೈಲಿನ ವೇಗವನ್ನು ಹೆಚ್ಚಿಸಬೇಕು~ ಎಂದು ಆಗ್ರಹಿಸಿದರು.

`ಗಾಡ್ಗೀಳ್ ಸಮಿತಿ ವರದಿಯಂತೆ ಹುಬ್ಬಳ್ಳಿ-ಅಂಕೋಲಾ ಮಾರ್ಗದಲ್ಲಿ ಮಾರ್ಪಾಡು ಮಾಡಲು ರಾಜ್ಯ ಸರ್ಕಾರ ಸಮ್ಮತಿ ವ್ಯಕ್ತಪಡಿಸಿದ್ದು, ಕೇಂದ್ರೀಯ ಉನ್ನತಾಧಿಕಾರ ಸಮಿತಿ (ಸಿಇಸಿ)ಗೆ ಕೇಂದ್ರ ಸರ್ಕಾರ ಪ್ರಮಾಣ ಪತ್ರ ಸಲ್ಲಿಸಬೇಕಿದೆ~ ಎಂದು ಅವರು ಹೇಳಿದರು.

`ವಿಜಾಪುರದಿಂದ ಬೆಂಗಳೂರಿಗೆ ತಲುಪಲು ಎಕ್ಸ್‌ಪ್ರೆಸ್ ರೈಲು 16 ಗಂಟೆ ತೆಗೆದುಕೊಳ್ಳುತ್ತಿದೆ. ಇದರಿಂದ ಆ ಭಾಗದ ಜನರಿಗೆ ರೈಲು ಪ್ರಯಾಣ ಹಿಂಸೆಯಾಗಿ ಪರಿಣಮಿಸಿದೆ. ರೈಲಿನ ವೇಗ ಹೆಚ್ಚಿಸಿ ಪ್ರಯಾಣದ ವೇಳೆಯನ್ನು ತಗ್ಗಿಸಬೇಕು~ ಎಂದು ರಮೇಶ ಜಿಗಜಿಣಗಿ ಒತ್ತಾಯಿಸಿದರು.

ಪಿ.ಸಿ. ಗದ್ದಿಗೌಡರ ಬಾಗಲಕೋಟೆ-ಕುಡಚಿ ಮಾರ್ಗ ಇನ್ನೂ ಮರೀಚಿಕೆಯಾಗಿಯೇ ಉಳಿದಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಜಿ.ಎಂ. ಸಿದ್ದೇಶ್ವರ, ಸುರೇಶ ಅಂಗಡಿ, ಶಿವಕುಮಾರ ಉದಾಸಿ ಮಾತನಾಡಿ, ರಾಜ್ಯದಲ್ಲಿ ರೈಲ್ವೆ ಯೋಜನೆಗಳಿಗೆ ಕೇಂದ್ರ ಆಸಕ್ತಿಯನ್ನೇ ತೋರುತ್ತಿಲ್ಲ ಎಂದು ಆಕ್ರೊಶದಿಂದ ಹೇಳಿದರು.

ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಎನ್.ಪಿ. ಜವಳಿ, ಡಿ. ದೇವರಾಜ ಅರಸ್ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಅಶೋಕ ಕಾಟವೆ, ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ (ಹುಡಾ)ದ ಅಧ್ಯಕ್ಷ ಲಿಂಗರಾಜ ಪಾಟೀಲ, ಮಹಾನಗರ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಮಹೇಶ ಟೆಂಗಿನಕಾಯಿ, ಉದ್ಯಮಿ ಮದನ ದೇಸಾಯಿ, ಉಪ ಮೇಯರ್ ಭಾರತಿ ಪಾಟೀಲ, ಪಾಲಿಕೆಯ ಬಿಜೆಪಿ ಸದಸ್ಯರು, ಕಾರ್ಯಕರ್ತರು, ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಧರಣಿಯಲ್ಲಿ ಪಾಲ್ಗೊಂಡಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.