ಹುಬ್ಬಳ್ಳಿ: ಕುಂದಗೋಳ ತಾಲ್ಲೂಕಿನ ಯರಗುಪ್ಪಿ ಗ್ರಾಮದ ಕೆರೆಗೆ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ, ಶಾಸಕ ಸಿ.ಎಸ್. ಶಿವಳ್ಳಿ ಸೋಮವಾರ ಬಾಗಿನ ಅರ್ಪಿಸಿದರು. ನಂತರ ಮಾತನಾಡಿದ ಅವರು, ಮಳೆಯಿಲ್ಲದೆ ಯರಗುಪ್ಪಿ ಕೆರೆಯು ಎಂಟು ವರ್ಷಗಳಿಂದ ಬರಿದಾಗಿತ್ತು. ಮೋಡಬಿತ್ತನೆಯಿಂದ ಗ್ರಾಮದ ಸುತ್ತ–ಮುತ್ತ ಉತ್ತಮ ಮಳೆಯಾಗಿದ್ದರಿಂದಾಗಿ ಕೆರೆ ಸಂಪೂರ್ಣ ತುಂಬಿದೆ ಎಂದು ಹೇಳಿದರು.
ಮಳೆಗಾಲ ಹಾಗೂ ಚಂಡಮಾರುತ ಬಂದರೂ ಕೂಡ ಯರಗುಪ್ಪಿ ಭಾಗದಲ್ಲಿ ಮಳೆ ಆಗಿರಲಿಲ್ಲ. ಆದರೆ, ಮೋಡ ಬಿತ್ತನೆ ನಡೆಸಿದ ನಾಲ್ಕೈದು ದಿನಗಳಿಂದ ಈ ಭಾಗದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಕೆರೆ ತುಂಬಿದೆ. ಮೋಡಬಿತ್ತನೆ ಯಶಸ್ವಿಯಾಗಿರುವುದಕ್ಕೆ ಯರಗುಪ್ಪಿ ಕೆರೆಯೇ ಸಾಕ್ಷಿಯಾಗಿದೆ ಎಂದರು.
ಕೆರೆಗಳಲ್ಲಿ ನೀರು ನಿಂತಿರುವುದರಿಂದಾಗಿ ರೈತರ ಖಜಾನೆ ತುಂಬಿದಂತಾಗಿದೆ. ಹಿಂಗಾರು ಕೃಷಿ ಚಟುವಟಿಕೆಗಳು ಇನ್ನು ಮುಂದೆ ಗರಿಗೆದರಲಿದ್ದು, ಗೋಧಿ, ಕುಸುಬೆ, ಜೋಳ, ಕಡ್ಲೆ ಬಿತ್ತನೆ ಮಾಡಬಹುದಾಗಿದೆ. ಯರಗುಪ್ಪಿ ಕೆರೆಯನ್ನು ನರೇಗಾ ಹಾಗೂ ನಬಾರ್ಡ್ ಅನುದಾನದಲ್ಲಿ ಅಭಿವೃದ್ಧಿ ಪಡಿಸಲಾಗಿದೆ ಎಂದು ಹೇಳಿದರು.
₹1.50 ಕೋಟಿ ವೆಚ್ಚದಲ್ಲಿ ಯರ ಗುಪ್ಪಿ ಗ್ರಾಮಕ್ಕೆ ಕುಂದಗೋಳದಿಂದ ಕುಡಿಯುವ ನೀರಿನ ಸರಬರಾಜು ಮಾಡುವ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ. ಅದರಲ್ಲಿ ₹30 ಲಕ್ಷ ವೆಚ್ಚದಲ್ಲಿ ಯರಗುಪ್ಪಿ ಕೆರೆಯ ಪಕ್ಕದಲ್ಲಿ ಕುಡಿಯುವ ನೀರಿನ ಸಂಸ್ಕರಣಾ ಘಟಕ ನಿರ್ಮಿಸಲಾಗುತ್ತಿದೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.