ಹುಬ್ಬಳ್ಳಿ: ನೈರುತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗದ ವತಿಯಿಂದ ಶನಿವಾರ ಚಾಲುಕ್ಯ ರೈಲ್ವೆ ಇನ್ಸ್ಟಿಟ್ಯೂಟ್ನಲ್ಲಿ ರೈಲ್ವೆ ಸಪ್ತಾಹ ಕಾರ್ಯಕ್ರಮ ನಡೆಯಿತು.
2017–18ನೇ ಸಾಲಿನಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ ಹುಬ್ಬಳ್ಳಿ ವಿಭಾಗದ 134 ರೈಲ್ವೆ ಸಿಬ್ಬಂದಿಗೆ ಪ್ರಶಸ್ತಿಪತ್ರ ಮತ್ತು ನಗದು ಬಹುಮಾನ ನೀಡಿ ಗೌರವಿಸಲಾಯಿತು. ಅತ್ಯುತ್ತಮ ನಿರ್ವಹಣಾ ನಿಲ್ದಾಣ, ಅತ್ಯುತ್ತಮ ಕಾರ್ಯಾಲಯ ಮತ್ತು ಉತ್ತಮ ಆರೋಗ್ಯ ಘಟಕ ಹೀಗೆ 13 ವಿಭಾಗಗಳಿಗೆ ವಿಶೇಷ ಪ್ರಶಸ್ತಿಗಳನ್ನು ನೀಡಲಾಯಿತು.
ಹುಬ್ಬಳ್ಳಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ರಾಜೇಶ್ ಮೋಹನ್ ಮಾತನಾಡಿ ‘ಹುಬ್ಬಳ್ಳಿ ವಿಭಾಗವು ಈ ಸಾಲಿನಲ್ಲಿ 35.4 ಮಿಲಿಯನ್ ಟನ್ ಸರಕು ಸಾಗಿಸಿದೆ. ಈ ಮೂಲಕ ಸರಕು ಸಾಗಣೆಯಲ್ಲಿ ಭಾರತೀಯ ರೈಲ್ವೆಯ 28 ವಿಭಾಗಗಳಲ್ಲಿ 8ನೇ ಸ್ಥಾನ ಪಡೆದುಕೊಂಡಿದೆ. ನೈರುತ್ಯ ರೈಲ್ವೆ ವಲಯ ಮಟ್ಟದ ರೈಲ್ವೆ ಸಪ್ತಾಹದಲ್ಲಿ ಹುಬ್ಬಳ್ಳಿ ವಿಭಾಗವು ವಾಣಿಜ್ಯ, ಯಾಂತ್ರಿಕ, ಭದ್ರತೆ, ಸಿಗ್ನಲ್ ಮತ್ತು ದೂರಸಂಪರ್ಕ ಕ್ಷೇತ್ರಗಳಲ್ಲಿ ದಕ್ಷತಾ ಶೀಲ್ಡ್ಗಳನ್ನು ಪಡೆದುಕೊಂಡಿದೆ. ಈ ಎಲ್ಲ ಸಾಧನೆಗಳು ನಮ್ಮ ಅಧಿಕಾರಿ ಮತ್ತು ಸಿಬ್ಬಂದಿಯ ಕಠಿಣ ಪರಿಶ್ರಮದಿಂದ ಸಾಧ್ಯವಾಗಿದೆ’ ಎಂದರು.
ಸಿಬ್ಬಂದಿಯ ಯೋಗಕ್ಷೇಮಕ್ಕಾಗಿ ಕೈಗೊಂಡ ಕ್ರಮಗಳ ಬಗ್ಗೆಯೂ ಅವರು ಮಾಹಿತಿ ನೀಡಿದರು. ನೃತ್ಯ, ಸಂಗೀತ ಕಾರ್ಯಕ್ರಮಗಳು ಜರುಗಿದವು.
ಹೆಚ್ಚುವರಿ ರೈಲ್ವೆ ವ್ಯವಸ್ಥಾಪಕರಾದ ಆರ್.ಸಿ. ಪುನೇಠಾ, ನೈರುತ್ಯ ರೈಲ್ವೆ ಮಹಿಳಾ ಕಲ್ಯಾಣ ಸಂಘಟನೆಯ ಉಪಾಧ್ಯಕ್ಷೆ ಮಮತಾ ಪುನೇಠಾ, ವರಿಷ್ಠ ವಿಭಾಗೀಯ ಸಿಬ್ಬಂದಿ ಶುಜಾ ಮಹಮೂದ್, ವಿಭಾಗೀಯ ಸಿಬ್ಬಂದಿ ಅಧಿಕಾರಿ ಪ್ರಸಾದ್ ಇಚ್ಚಂಗಿಮಠ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.