ಬೆಂಗಳೂರು: ನಗರದ ಲಾಲ್ಬಾಗ್ ಬಳಿಯ ಅಣ್ಣೀಪುರ ಗ್ರಾಮದಲ್ಲಿ ವಕ್ಫ್ ಮಂಡಳಿಗೆ ಸೇರಿರುವ ಜಮೀನನ್ನು ಖಾಸಗಿ ವ್ಯಕ್ತಿಯೊಬ್ಬರಿಗೆ ಕಡಿಮೆ ಮೊತ್ತಕ್ಕೆ ಪರಭಾರೆ ಮಾಡಿರುವವರ ಆರೋಪ ಹೊತ್ತ ರಾಜ್ಯ ವಕ್ಫ್ ಮಂಡಳಿಯ ಪದಾಧಿಕಾರಿಗಳ ವಿರುದ್ಧ ಸಿಐಡಿ ನಡೆಸುತ್ತಿರುವ ತನಿಖೆ ಮುಂದುವರಿಕೆಗೆ ಹೈಕೋರ್ಟ್ ಹಸಿರು ನಿಶಾನೆ ತೋರಿದೆ.
ಈ ತನಿಖೆ ರದ್ದತಿಗೆ ಕೋರಿ ಮಾಜಿ ಸಚಿವ ಎ.ಎಂ.ಹಿಂಡಸಗೇರಿ, ವಿಜಾಪುರದ ಸೈಯದ್ ಮುಜ್ತಬಾ ಹುಸೇನ್ ಜಾಗೀರ್ದಾರ್, ಬೆಂಗಳೂರಿನ ಆರ್.ಅಬ್ದುಲ್ ರಿಯಾಜ್ ಖಾನ್, ಮೊಹಮ್ಮದ್ ಟಿಪ್ಪು ಸುಲ್ತಾನ್, ಖಾಲಿದ್ ಅಹಮ್ಮದ್, ಮೌಲಾನಾ ಸಯೀಮ್ ರಾಜಾ ಅಬಿದಿ, ಕೊಡಗಿನ ಕೆ.ಎಂ.ಇಬ್ರಾಹಿಂ ಹಾಗೂ ರಾಮ ನಗರದ ಸೈಯದ್ ಮುದೀರ್ ಅಗಾ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯ ಮೂರ್ತಿ ಎನ್.ಆನಂದ ಅವರು ವಜಾ ಮಾಡಿದ್ದಾರೆ.
ಏನಿದು ವಿವಾದ: ಅಣ್ಣೀಪುರ ಗ್ರಾಮದ (ಈಗಿನ ಲಾಲ್ಬಾಗ್) ಬಳಿಯಲ್ಲಿನ ಮಂಡಳಿಗೆ ಸೇರಿರುವ 2.3 ಎಕರೆ (ಸುಮಾರು 66 ಕೋಟಿ ರೂಪಾಯಿ ಬೆಲೆಬಾಳುವ) ಜಮೀನನ್ನು ಈ ಎಲ್ಲ ಆರೋಪಿಗಳು ಖಾಸಗಿ ವ್ಯಕ್ತಿಗಳಿಗೆ ಕೇವಲ ಒಂದು ಕೋಟಿ ರೂಪಾಯಿಗೆ ಮಾರಾಟ ಮಾಡಿರುವ ಆರೋಪ ಹೊತ್ತ ವಿವಾದ ಇದಾಗಿದೆ.
ಸರ್ವೇ ನಂ.18ರಲ್ಲಿನ ಈ ಜಮೀನಿನಲ್ಲಿ ಮುಸ್ಲಿಂ ಸಮುದಾಯದ `ಹಜರತ್ ಅತಾ ಉಲ್ಲಾ ಷಾ ಹಾಗೂ ನಬೀಷಾ ದರ್ಗಾ (ಬಡಾ ಮಕಾನ್) ಕಾರ್ಯ ನಿರ್ವಹಿಸುತ್ತಿದೆ. ಆದರೆ ಇದನ್ನು ಜವಾರಿಲಾಲ್ ಎನ್ನುವವರ ಪತ್ನಿ ಪಿಸ್ತಾಬಾಯಿ ಅವರ ಹೆಸರಿಗೆ ಆರೋಪಿಗಳು ಕೇವಲ ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಪರಭಾರೆ ಮಾಡಿದ್ದಾರೆ.
ಆದರೆ ಇದರ ಮಾರುಕಟ್ಟೆ ದರ 20ಕೋಟಿ ರೂಪಾಯಿಗೂ ಅಧಿಕ ಇದೆ ಎನ್ನುವುದು ಆರೋಪ. ಪರಭಾರೆ ಮಾಡುವಲ್ಲಿ ವಕ್ಫ್ ಮಂಡಳಿ ಮುಖ್ಯ ಆಡಳಿತಾಧಿಕಾರಿ, ಕಾನೂನು ಸಲಹೆ ಗಾರ ಸೇರಿದಂತೆ ಇತರರು ಶಾಮೀಲಾ ಗಿರುವ ಬಗ್ಗೆ ತನಿಖೆ ವೇಳೆ ತಿಳಿದು ಬಂದಿತ್ತು.
ಈ ಹಿನ್ನೆಲೆ ಯಲ್ಲಿ ತಪ್ಪಿತಸ್ಥರ ವಿರುದ್ಧ ಪ್ರಥಮ ಮಾಹಿತಿ ವರದಿ ದಾಖಲು ಮಾಡು ವಂತೆ ಗೃಹ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಗಳು ಸಿಐಡಿಗೆ ಸೂಚಿ ಸಿದ್ದರು. ಇದರ ಅನ್ವಯ ಸಿಐಡಿ ತನಿಖೆ ನಡೆಸುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.