ADVERTISEMENT

ಶೇ 50ರಷ್ಟು ಯುವಕರಿಗೆ ಜೆಡಿಎಸ್ ಟಿಕೆಟ್

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2012, 5:50 IST
Last Updated 1 ಮಾರ್ಚ್ 2012, 5:50 IST

ಹುಬ್ಬಳ್ಳಿ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಜೆಡಿಎಸ್ ಪಕ್ಷದಿಂದ ಯುವಕರಿಗೆ ಶೇ 50ರಷ್ಟು ಟಿಕೆಟ್ ಮೀಸಲಿಡಲಾಗುವುದು ಎಂದು ಕೇಂದ್ರದ ಮಾಜಿ ಸಚಿವ ಹಾಗೂ ಜೆಡಿಎಸ್ ಮುಖಂಡ ಬಸವನಗೌಡ ಪಾಟೀಲ ಯತ್ನಾಳ ಘೋಷಿಸಿದರು.

ನಗರದಲ್ಲಿ ಬುಧವಾರ ಪಕ್ಷದ ವತಿಯಿಂದ ಆಯೋಜಿಸಿದ್ದ ಯುವಚೇತನ ರ‌್ಯಾಲಿ ಹಾಗೂ ಚಿಂತನೆ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಜೆಟ್ ಮಂಡನೆಗೆ ಮುನ್ನವೇ  ಸರ್ಕಾರವನ್ನು ಕೆಡವಲಿದ್ದಾರೆ. ಬಜೆಟ್‌ನಲ್ಲಿ ಸದಾನಂದಗೌಡ ಉತ್ತಮ ಕಾರ್ಯಕ್ರಮ ಪ್ರಕಟಿಸಿ ತಮಗಿಂತ ಜನಪ್ರಿಯತೆ ಗಳಿಸಬಹುದು ಎಂಬ ಕಾರಣಕ್ಕೆ ಈ ಪ್ರಯತ್ನಕ್ಕೆ ಕೈ ಹಾಕಲಿದ್ದಾರೆ.

ಅವರೊಂದಿಗೆ ತಾವು 25 ವರ್ಷ ಕಾಲ ರಾಜಕೀಯ ಮಾಡಿದ ಅನುಭವದ ಹಿನ್ನೆಲೆಯಲ್ಲಿ ಹೇಳುತ್ತಿದ್ದು, ಬೇರೆಯವರ ಜನಪ್ರಿಯತೆ ಅಥವಾ ಒಳ್ಳೆಯ ಕೆಲಸವನ್ನು ಯಡಿಯೂರಪ್ಪ ಎಂದಿಗೂ ಸಹಿಸುವುದಿಲ್ಲ ಎಂದು ಲೇವಡಿ ಮಾಡಿದರು.
ವಾಜಪೇಯಿ ನಂತರ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಮಾತ್ರ ತಾವು ಕಂಡ ಜನಸಾಮಾನ್ಯರ ನಾಯಕ ಎಂದು ಯತ್ನಾಳ್ ಬಣ್ಣಿಸಿದರು.

ಮಾಜಿ ಸಚಿವ ಬಸವರಾಜ ಹೊರಟ್ಟಿ ಮಾತನಾಡಿ, ಕಳೆದೊಂದು ದಶಕದಿಂದ 48,000 ಕೋಟಿ ಇದ್ದ ರಾಜ್ಯದ ಸಾಲ ಈಗ 1.12 ಲಕ್ಷ ಕೋಟಿಗೆ ಏರಿದೆ. ಬಿಜೆಪಿ ಅಧಿಕಾರಕ್ಕೆ ಬಂದ ಕೇವಲ ಮೂರು ವರ್ಷಗಳಲ್ಲಿ ಸಾಲದ ಮೊತ್ತ 64,000 ಕೋಟಿ ಹೆಚ್ಚಳವಾಗಿದೆ ಎಂದರು.

ಜೆಡಿಎಸ್ ಅಧಿಕಾರಕ್ಕೆ ಬಂದರೆ ಮಧು ಬಂಗಾರಪ್ಪ ಅವರಿಗೆ ಮಹತ್ವದ ಖಾತೆಯ ಮಂತ್ರಿ ಸ್ಥಾನ ದೊರೆಯಲಿದ್ದು, ಮಧು ಅವರ ಅಧ್ಯಕ್ಷತೆಯಲ್ಲಿ ಯುವ ಜನತಾದಳದಿಂದ ಕನಿಷ್ಠ 30ರಿಂದ 35 ಶಾಸಕರು ಆಯ್ಕೆಯಾಗುವಂತೆ ಯುವಕರು ಅವರ ಕೈಬಲಪಡಿಸಿ ಎಂದು ಸಲಹೆ ಮಾಡಿದರು.

ನಟಿ ಪೂಜಾ ಗಾಂಧಿ, ಮಾಜಿ ಸಚಿವ ಹನುಮಂತಪ್ಪ ಆಲ್ಕೋಡ್, ಮಹಾನಗರ ಜಿಲ್ಲಾ ಜೆಡಿಎಸ್ ಘಟಕದ ಅಧ್ಯಕ್ಷ ರಾಜಣ್ಣಾ ಕೊರವಿ, ಪಕ್ಷದ ಮುಖಂಡರಾದ ಶಿವಾನಂದ ಕರಿಗಾರ, ಚಂದ್ರಶೇಖರ, ಶ್ರೀನಿವಾಸ ಮಾತನಾಡಿದರು. ಇದೇ ಸಂದರ್ಭದಲ್ಲಿ ವಿವಿಧ ಪಕ್ಷಗಳ ಕಾರ್ಯಕರ್ತರು ಜೆಡಿಎಸ್ ಸೇರ್ಪಡೆಗೊಂಡರು.

`ಮಳೆ ಹುಡುಗಿ~ ಮೋಡಿ...
ಜೆಡಿಎಸ್‌ನ ಯುವಚೇತನ ಚಿಂತನಾ ಸಭೆಯಲ್ಲಿ `ಮಳೆ ಹುಡುಗಿ~ ಪೂಜಾಗಾಂಧಿ ಪ್ರಮುಖ ಆಕರ್ಷಣೆಯಾಗಿದ್ದರು. ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಯುವ ಕಾರ್ಯಕರ್ತರು ಪಕ್ಷದ ಮುಖಂಡರು ಮಾತನಾಡುವಾಗಲೂ ಮಧ್ಯೆ ಮಧ್ಯೆ ಪೂಜಾ ಗಾಂಧಿ ಪರ ಘೋಷಣೆ ಕೂಗುತ್ತಾ ತಮ್ಮ ಅಭಿಮಾನ ವ್ಯಕ್ತಪಡಿಸಿದರು.

ಬೇರೆ ಪಕ್ಷದಿಂದ ಜೆಡಿಎಸ್‌ಗೆ ಸೇರಿದವರಿಗೆ ಗುಲಾಬಿ ಹೂ ಕೊಟ್ಟು ಸ್ವಾಗತಿಸಿದ ಪೂಜಾ ಗಾಂಧಿ ಅವರೊಂದಿಗೆ ಫೋಟೊಗೆ ಫೋಸ್ ಕೊಡುತ್ತಿದ್ದಂತೆಯೇ ಪಕ್ಷಕ್ಕೆ ಸೇರುವ ಆಕಾಂಕ್ಷಿಗಳ ಸಾಲು ದೊಡ್ಡದಾಗಿದ್ದು, ಕಾಕತಾಳೀಯ ಎಂಬಂತೆ ಕಾಣಿಸಿತು.

ರಾಜಕೀಯ ಸೇರಿದರೂ ಚಿತ್ರರಂಗದ ನಂಟು ಬಿಡುವುದಿಲ್ಲ ಎಂದು ಘೋಷಿಸಿದ ಪಂಜಾಬಿ ಹುಡುಗಿ `ನನ್ನ ಕನ್ನಡದಲ್ಲಿ ತಪ್ಪಿದ್ದರೆ ಕ್ಷಮಿಸಿ~ ಎನ್ನುತ್ತಲೇ ತಮ್ಮ ಮಾತು ಮುಗಿಸಿದರು. ಬೈಕ್ ರ‌್ಯಾಲಿ ಹಾಗೂ ಮೆರವಣಿಗೆಯ ಮೂಲಕ ಬಿರು ಬಿಸಿಲಿನಲ್ಲಿ ಸಭೆಗೆ ಬಂದಿದ್ದ ಪಕ್ಷದ ಯುವ ಕಾರ್ಯಕರ್ತರಿಗೆ ಮಳೆ ಹುಡುಗಿಯ ಮೋಡಿ ತಂಪನೆಯ ಭಾವ ಮೂಡಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.