ADVERTISEMENT

ಶ್ರೀಗುರು ಕೊಟ್ಟೂರೇಶ್ವರರ ವಿಜೃಂಭಣೆ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2017, 6:53 IST
Last Updated 1 ಡಿಸೆಂಬರ್ 2017, 6:53 IST

ಹಗರಿಬೊಮ್ಮನಹಳ್ಳಿ: ಇಲ್ಲಿನ ಶ್ರೀಗುರು ಕೊಟ್ಟೂರೇಶ್ವರ ಮಾಲಾವೃಂದದಿಂದ ಕಾರ್ತೀಕೋತ್ಸವ ಅಂಗವಾಗಿ ಗುರುವಾರ ಕೊಟ್ಟೂರೇಶ್ವರರ ಭಾವಚಿತ್ರದ ಮೆರವಣಿಗೆ ವಿಜೃಂಭಣೆಯಿಂದ ಜರುಗಿತು.

ಬೆಳಗಿನ ಜಾವ ಪತ್ರಿಬಸವೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ನಡೆದ ಪಟಾಕ್ಷಿ ಹರಾಜಿನಲ್ಲಿ ಹೂವಿನ ಮಲ್ಲಿಕಾರ್ಜುನ ₹20,100ಗಳಿಗೆ ಪಡೆದರು. ಕಳೆದ ವರ್ಷ ಪಟಾಕ್ಷಿ ಪಡೆದಿದ್ದ ಬಲ್ಲಾಹುಣ್ಸಿಯ ಹೋಟೆಲ್ ಬಣಕಾರ ಬಸಣ್ಣ ಅವರು ಮಾಲಾವೃಂದಕ್ಕೆ ₹41ಸಾವಿರ ನೀಡಿದರು.

ಇಬ್ಬರಿಗೂ ಬೆಳ್ಳಿ ದೀಪ ನೀಡಿ ಆಶೀರ್ವದಿಸಿದ ನಂದಿಪುರ ಮಹೇಶ್ವರ ಸ್ವಾಮೀಜಿ, ಅಜ್ಞಾನವನ್ನು ಹೋಗಲಾಡಿಸಿ ಜ್ಞಾನದ ಬೆಳಕು ಹೊಂದುವುದು ಕಾರ್ತೀಕೋತ್ಸವದ ಹಿನ್ನಲೆಯಾಗಿದೆ ಎಂದರು. ಕಡಲಬಾಳು ಗವಿಮಠದ ಶಾಖಾಮಠದ ಸೋಮಶೇಖರ ದೇವರು ಸಾನ್ನಿಧ್ಯ ವಹಿಸಿದ್ದರು.

ADVERTISEMENT

ದೇವಸ್ಥಾನದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಮಾಳ, ನಂದಿಕೋಲು ಸೇರಿದಂತೆ ವಿವಿಧ ವಾದ್ಯಗಳೊಂದಿಗೆ ಶ್ರೀಗುರು ಕೊಟ್ಟೂರೇಶ್ವರರ ಭಾವಚಿತ್ರದ ಮೆರವಣಿಗೆ ವಿಜೃಂಭಣೆಯಿಂದ ಜರುಗಿತು. ಮಹಿಳೆಯರು ಕಳಸಗಳೊಂದಿಗೆ ಪಾಲ್ಗೊಂಡಿದ್ದರು.

ದಾರಿಯುದ್ದಕ್ಕೂ ಭಕ್ತರು ತೆಂಗಿನ ಕಾಯಿ ಹೂ ಹಣ್ಣು ಸಮರ್ಪಿಸಿದರು. ಇದೇ ಸಂದರ್ಭದಲ್ಲಿ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು. ಪುರಸಭೆ ಸದಸ್ಯ ಬಿ.ಗಂಗಾಧರ, ಮಾಲಾವೃಂದದ ಬಸವರಾಜ ಅಯ್ಯನಗೌಡರ, ಎಂ.ಪಿ.ಎಂ.ಮಂಜುನಾಥ, ಅಕ್ಕಿ ಮಲ್ಲಿಕಾರ್ಜುನ, ಕಿರಾಣಿ ಕೊಟ್ರೇಶ್,ಪ್ರಕಾಶ್, ಕೆ.ಕೆ.ಮಲ್ಲಿಕಾರ್ಜುನ, ಬಿ.ಎಂ.ಶಿವಶಂಕ್ರಯ್ಯ, ಎ.ಎಂ.ಕೊಟ್ರೇಶ್, ನರೇಗಲ್ ಹರ್ಷ, ಬಣಕಾರ ಗುರು ಬಸವರಾಜ, ಬಾಳೆಕಾಯಿ ಸಿದ್ದೇಶ, ಕಾಯಿಗಡ್ಡಿ ಕೊಟ್ರೇಶ್, ಪಿಗ್ಮಿ ಮಂಜುನಾಥ, ಜಾಲಿ ಅಶೋಕ್, ಗಂಗಾಧರ, ಪತ್ರಿಬಸವೇಶ್ವರ ಸೇವಾ ಸಮಿತಿಯ ಅಕ್ಕಿ ಬಸವರಾಜ, ಶಬಾದಿಬಸಪ್ಪ, ಪೂರ್ಣಯ್ಯ, ಪ್ರಧಾನ ಅರ್ಚಕ ಕೆ.ಕೆ.ಬಿ.ಎಂ.ಕೊಟ್ರಯ್ಯ ಇದ್ದರು. ದೇವಸ್ಥಾನದ ಆವರಣದಲ್ಲಿ ಸಾರ್ವಜನಿಕರಿಗೆ ಪ್ರಸಾದ ವಿನಿಯೋಗ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.