ಹುಬ್ಬಳ್ಳಿ: ನಗರದಲ್ಲಿ ಗುರುವಾರ ರಾತ್ರಿ ಸುರಿದ ಗುಡುಗು ಸಹಿತ ಭಾರಿ ಮಳೆಯಿಂದಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ನೀರು ನಿಂತುಕೊಂಡಿದ್ದರಿಂದ ಸಂಚಾರಕ್ಕೆ ಅಡಚಣೆಯಾಯಿತು.
ನಗರದ ಹಳೆ ಬಸ್ ನಿಲ್ದಾಣ, ಸಂಗೊಳ್ಳಿ ರಾಯಣ್ಣ ವೃತ್ತ, ಲ್ಯಾಮಿಂಗ್ಟನ್ ರಸ್ತೆಯ ತುಂಬ ನೀರು ನಿಂತುಕೊಂಡಿದ್ದರಿಂದ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಯಿತು.
ಲೋಹಿಯಾ ನಗರದಿಂದ ಸಿಬಿಟಿಗೆ ಹೊರಟಿದ್ದ ಬಸ್ಸೊಂದು ಸಂಚಾರ ದಟ್ಟಣಿಯಿಂದಾಗಿ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಎದುರಿನ ರಸ್ತೆ ಮೂಲಕ ಚಲಿಸಲು ಮುಂದಾಯಿತು.
ಆದರೆ, ನೆಹರೂ ಮೈದಾನದ ಹಿಂಬದಿಯ ಗೇಟ್ ಬಳಿ ಒಳಚರಂಡಿ ಕಾಮಗಾರಿಗಾಗಿ ಅಗೆದು ಮುಚ್ಚಲಾದ ತಗ್ಗಿನಲ್ಲಿ ಬಸ್ಸಿನ ಮುಂಭಾಗದ ಬಲ ಚಕ್ರ ಸಿಲುಕಿತು. ಪ್ರಯಾಣಿಕರನ್ನು ಇಳಿಸಿ ಬಸ್ಸನ್ನು ಮೇಲೆತ್ತಲು ಯತ್ನಿಸಲಾಯಿತು. ಆದರೆ, ಚಕ್ರದ ಅರ್ಧಕ್ಕಿಂತ ಹೆಚ್ಚು ಭಾಗ ಗುಂಡಿಯಲ್ಲಿ ಹೂತುಹೋಗಿದ್ದರಿಂದ ಬಹುಹೊತ್ತಿನವರೆಗೂ ಬಸ್ ಅಲ್ಲಿಯೇ ಸಿಲುಕಿಕೊಂಡಿತ್ತು.
‘ಇಲ್ಲಿ ಕಾಮಗಾರಿ ನಡೆಯುತ್ತಿದ್ದುದರಿಂದ ಒಂದು ಬ್ಯಾರಿಕೇಡ್ ಹಾಕಬೇಕಿತ್ತು. ಬ್ಯಾರಿಕೇಡ್ ಹಾಕಿದ್ದರೆ ನಾವು ಇತ್ತ ಬರುತ್ತಿರಲಿಲ್ಲ’ ಎಂದು ಬಸ್ ನಿರ್ವಾಹಕ ಸಂತೋಷ ತುಪ್ಪದ ಸ್ಥಳಕ್ಕೆ ಭೇಟಿ ನೀಡಿದ್ದ ‘ಪ್ರಜಾವಾಣಿ’ಗೆ ತಿಳಿಸಿದರು.
ಭಗತ್ ಸಿಂಗ್ ವೃತ್ತದಿಂದ ಬಸವ ವನಕ್ಕೆ ಹೋಗುವ ಮುಖ್ಯರಸ್ತೆಯ ತುಂಬ ನೀರು ನಿಂತುಕೊಂಡಿತ್ತು. ವಿದ್ಯಾನಗರದ ಜೆ.ಜಿ. ಕಾಮರ್ಸ್ ಕಾಲೇಜಿನ ಬಳಿ ನಿರ್ಮಾಣ ಹಂತದ ಬಿಆರ್ಟಿಎಸ್ ಬಸ್ ನಿಲ್ದಾಣದ ಬಳಿ ನೀರು ನಿಂತುಕೊಂಡಿದ್ದರಿಂದ ವಾಹನಗಳ ಸ್ವಲ್ಪ ಹೊತ್ತು ಕಾದು ನಿಂತಿದ್ದವು. ಇಂದಿರಾಗಾಜಿನಮನೆ ಎದುರಿನ ಆರ್.ಎನ್. ಶೆಟ್ಟಿ ಕಲ್ಯಾಣ ಮಂಟಪದ ಬಳಿ ಒಳಚರಂಡಿ ತುಂಬಿಕೊಂಡು ರಸ್ತೆಯ ಮೇಲೆ ನೀರು ಹರಿಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.