ADVERTISEMENT

`ಹೋರಾಟದ ಸ್ವರೂಪ ಬದಲಾಗಲಿ'

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2013, 6:21 IST
Last Updated 3 ಸೆಪ್ಟೆಂಬರ್ 2013, 6:21 IST

ಧಾರವಾಡ: `ಜಾಗತೀಕರಣದ ಪ್ರಭಾವ ಮತ್ತು ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಕಾರ್ಮಿಕ ಸಮುದಾಯ ಇಂದು ಹಲವು ಹತ್ತು ಸವಾಲುಗಳನ್ನು ಎದುರಿಸುತ್ತಿದೆ. ಅವರ ಕಲ್ಯಾಣ ಸಾಧನೆಗೆ ಹೋರಾಟದ ಸ್ವರೂಪದಲ್ಲಿ ಬದಲಾಗಬೇಕಿದೆ' ಎಂದು ಕರ್ನಾಟಕ ಹೈಕೋರ್ಟ್‌ನ ಕಾನೂನು ಸೇವೆಗಳ ಸಮಿತಿಯ ಅಧ್ಯಕ್ಷ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್‌ದಾಸ್ ತಿಳಿಸಿದರು.

ಹೈಕೋರ್ಟ್‌ನ ಧಾರವಾಡ ಪೀಠದಲ್ಲಿ ನ್ಯಾಯಾಲಯದ ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಹಾಗೂ ಕಾರ್ಮಿಕ ಇಲಾಖೆಯ ಸಹಯೋಗದಲ್ಲಿ ಶನಿವಾರ ಕಾರ್ಮಿಕ ಸಂಘಗಳ ಮುಖಂಡರು ಹಾಗೂ ಕಾರ್ಮಿಕರಿಗಾಗಿ ಏರ್ಪಡಿಸಲಾಗಿದ್ದ ಒಂದು ದಿನದ ಕಾನೂನು ಅರಿವು ಕಾರ್ಯಾಗಾರ ಉದ್ಛಾಟಿಸಿ ಮಾತನಾಡಿದರು.

`ಕಾರ್ಮಿಕ ಮುಖಂಡರಿಗೆ ಕಾನೂನುಗಳ ಅರಿವು ಮೂಡಿಸುವ ಕೆಲಸ ತುರ್ತಾಗಿ ಆಗಬೇಕಿದೆ. ಧಾರವಾಡ ಪೀಠದ ಈ ಸಮಿತಿ ಇನ್ನು ಪ್ರತಿ ಶನಿವಾರ ಕಾನೂನು ಸೇವಾ ಸಮಿತಿ ಕಾರ್ಯಕ್ರಮಗಳನ್ನು ಆಯೋಜಿಸಲಿದೆ. ಸೆ 7ರಂದು ಸಮಾಜ ಕಲ್ಯಾಣ ಇಲಾಖಾ ವ್ಯಾಪ್ತಿಯ ಪರಿಶಿಷ್ಟ ಜಾತಿ, ಬುಡಕಟ್ಟು ವರ್ಗಗಳ, ಸೆ 14ರಂದು ಮಹಿಳಾ ಮತ್ತು ಮಕ್ಕಳ ಹಕ್ಕುಗಳ ಕಾರ್ಯಕರ್ತರ ಹಾಗೂ ಸೆ 21ರಂದು ಮಾಧ್ಯಮ ಪ್ರತಿನಿಧಿಗಳಿಗಾಗಿ ಕಾನೂನು ನೆರವು ಶಿಬಿರಗಳನ್ನು ಏರ್ಪಡಿಸಲಾಗುವುದು' ಎಂದು ತಿಳಿಸಿದರು.

ಕಾರ್ಮಿಕ ಇಲಾಖೆ ಜಂಟಿ ಆಯುಕ್ತ ವಸಂತಕುಮಾರ ಹಿಟ್ಟಣಗಿ, `1952ರಲ್ಲಿ ಜಾರಿಯಾದ ಭವಿಷ್ಯನಿಧಿ (ಪ್ರಾವಿಡೆಂಟ್ ಫಂಡ್) ಪ್ರಯೋಜನವನ್ನು ಎಲ್ಲ ಕಾರ್ಮಿಕವರ್ಗ ಪೂರ್ಣ ಪ್ರಮಾಣದಲ್ಲಿ ಪಡೆದುಕೊಳ್ಳಲು ಸಾಧ್ಯವಾಗಿಲ್ಲ'ಎಂದರು.

`ಅಸಂಘಟಿತ ಕಾರ್ಮಿಕ ವರ್ಗಗಳಿಗಾಗಿ ಸರ್ಕಾರ ರೂಪಿಸಿರುವ ಸಾಮಾಜಿಕ ಭದ್ರತಾ ಯೋಜನೆಗಳ ಪ್ರಯೋಜನ ಪಡೆಯಬೇಕು' ಎಂದರು.

ಧಾರವಾಡ ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತ ಎಸ್.ರೇವಣ್ಣ `ಅಸಂಘಟಿತ ಕಾರ್ಮಿಕರಿಗಾಗಿ ಇರುವ ಪಿಂಚಣಿ ಯೋಜನೆಯ ಸೌಲಭ್ಯಗಳ ಬಗ್ಗೆ ವಿವರಿಸಿದರು. ಜಿಲ್ಲಾ ಕಾರ್ಮಿಕ ಅಧಿಕಾರಿ ಮೊಹಮ್ಮದ್ ಖಾಲಿಕ್ ಕನಿಷ್ಟ ವೇತನ ಕಾಯ್ದೆ ಕುರಿತು ಮಾತನಾಡಿದರು.

ಅಧ್ಯಕ್ಷತೆಯನ್ನು ವಹಿಸಿದ್ದ ಧಾರವಾಡ ಉಚ್ಛ ನ್ಯಾಯಾಲಯದ ವಕೀಲರ ಸಂಘದ ಅಧ್ಯಕ್ಷ ಬಿ.ಡಿ. ಹಿರೇಮಠ ಮಾತನಾಡಿದರು.
ಹೈಕೋರ್ಟ್‌ನ ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿ ಎ.ವಿ.ಶ್ರೀನಿವಾಸ ಸ್ವಾಗತಿಸಿದರು. ಉಪ ವಿಲೇಖನಾಧಿಕಾರಿ ಎಸ್.ದೇವರಾಜು ವಂದಿಸಿದರು.

ಕಬಡ್ಡಿ: ಜಿಲ್ಲಾಮಟ್ಟಕ್ಕೆ ಆಯ್ಕೆ
ಕಲಘಟಗಿ:
ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ತಾಲ್ಲೂಕು ಮಟ್ಟದ ಬಾಲಕರ ಕಬಡ್ಡಿ ಪಂದ್ಯಾವಳಿಯಲ್ಲಿ ತಾಲ್ಲೂಕಿನ ಮಲಕನಕೊಪ್ಪ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಅಂತಿಮ ಪಂದ್ಯದಲ್ಲಿ ಕಲಘಟಗಿ ಕ್ಲಸ್ಟರ್‌ನ ವಿದ್ಯಾರ್ಥಿಗಳನ್ನು ಸೋಲಿಸಿ ಜಿಲ್ಲಾಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

ವಿದ್ಯಾರ್ಥಿಗಳನ್ನು ಮತ್ತು ಶಿಕ್ಷಕ ಸಿಬ್ಬಂದಿಯನ್ನು ಎಸ್‌ಡಿಎಂಸಿ ಅಧ್ಯಕ್ಷ ಅಶೋಕ ಆಡಿನವರ ಮತ್ತು ಸದಸ್ಯರು ಗ್ರಾ.ಪಂ.ಅಧ್ಯಕ್ಷ ಕಮಲವ್ವ ಕುರಿಯವರ ಮತ್ತು ಸದಸ್ಯರು ಅಭಿನಂದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.