ಹುಬ್ಬಳ್ಳಿ: ಲಾಕ್ಡೌನ್ ಪರಿಣಾಮದಿಂದ ಸಾರ್ವಜನಿಕ ಸಾರಿಗೆ ಸ್ಥಗಿತಗೊಂಡಿದ್ದರಿಂದ ಮಾರ್ಚ್ ಹಾಗೂ ಏಪ್ರಿಲ್ನಲ್ಲಿ ಹುಬ್ಬಳ್ಳಿ ವಿಭಾಗಕ್ಕೆ ಅಂದಾಜು ₹23 ಕೋಟಿ ಆದಾಯ ನಷ್ಟವಾಗಿದೆ.
ಹುಬ್ಬಳ್ಳಿ ವಿಭಾಗದ ನಾಲ್ಕು ಘಟಕಗಳಲ್ಲಿ ಒಟ್ಟು 462 ಬಸ್ಗಳು ಹಾಗೂ 2,173 ಸಿಬ್ಬಂದಿಯಿದ್ದಾರೆ. ವಿಭಾಗದ ಬಸ್ಗಳು ಪ್ರತಿದಿನ 1.90 ಲಕ್ಷ ಕಿ.ಮೀ.ಕ್ರಮಿಸಿ ವಿವಿಧ ರಿಯಾಯಿತಿ ಪಾಸ್ ಪ್ರಯಾಣಿಕರು ಸೇರಿದಂತೆ 1.45 ಲಕ್ಷ ಪ್ರಯಾಣಿಕರು ಹಾಗೂ 45 ಸಾವಿರ ವಿದ್ಯಾರ್ಥಿಗಳಿಗೆ ಸಾರಿಗೆ ಕಲ್ಪಿಸುವ ಮೂಲಕ ಸಂಸ್ಥೆಗೆ ₹45ರಿಂದ ₹50 ಲಕ್ಷ ಆದಾಯ ಇಲಾಖೆಗೆ ಸಂಗ್ರಹವಾಗುತ್ತಿತ್ತು. ಮಾ. 9ರ ವರೆಗೆ ಬಸ್ಗಳ ಸಂಚಾರ ಎಂದಿನಂತಿದ್ದ ಕಾರಣ ಆದಾಯ ಸಂಗ್ರಹ ನಿರೀಕ್ಷೆಯಂತಿತ್ತು.
‘ಹೋಳಿ ಹಬ್ಬ ಮತ್ತು ಕೊರೊನಾ ಸೋಂಕಿನ ಕಾರಣ ದಿನದಿಂದ ದಿನಕ್ಕೆ ಪ್ರಯಾಣಿಕರ ಸಂಖ್ಯೆ ಕುಸಿಯಿತು. ಮಾರ್ಚ್ನಲ್ಲಿ ಬಸ್ಗಳ ಸಂಚಾರ ಕಡಿಮೆಯಾದ ಕಾರಣ ನಿರೀಕ್ಷಿತ ಆದಾಯದಲ್ಲಿ ₹5.5 ಕೋಟಿ ಕೊರತೆಯಾಯಿತು. ಎಪ್ರಿಲ್ನಲ್ಲಿ ಯಾವುದೇ ಬಸ್ ರಸ್ತೆಗಿಳಿಯದ ಕಾರಣ ಅಂದಾಜು ₹17.50 ಕೋಟಿ ನಷ್ಟವಾಗಿದೆ’ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ್ ತಿಳಿಸಿದ್ದಾರೆ.
‘ಸರ್ಕಾರದ ಆದೇಶ ಬಂದ ಬಳಿಕ ಸಾರಿಗೆ ಸೌಲಭ್ಯ ಆರಂಭಿಸಲು ಸಿದ್ಧರಾಗಿದ್ದೇವೆ. ಇದಕ್ಕಾಗಿ ಪೂರ್ವಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಹೇಳಿದ್ದಾರೆ.
ವಲಸೆ ಕಾರ್ಮಿಕರಿಗೆ ಕ್ಷೌರ
ಇಲ್ಲಿನ ಘಂಟಿಕೇರಿ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ವಾಸವಿರುವ 38 ಜನ ಪುರುಷ ನಿರಾಶ್ರಿತರಿಗೆ ಮತ್ತು ವಲಸೆ ಕಾರ್ಮಿಕರಿಗೆ ಮಂಗಳವಾರ ಕ್ಷೌರ ಮಾಡಿಸಲಾಯಿತು. ಮಾರ್ಚ್ 24ರಿಂದ ಕಾರ್ಮಿಕರು ಇಲ್ಲಿ ತಂಗಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.