ADVERTISEMENT

ಎಸಿಬಿ ಅಧಿಕಾರಿಗಳ ದಾಳಿ; ಆಹಾರ ಇಲಾಖೆ ಅಧಿಕಾರಿ ಬಳಿ ₹ 5ಲಕ್ಷ ಪತ್ತೆ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2021, 15:42 IST
Last Updated 30 ಅಕ್ಟೋಬರ್ 2021, 15:42 IST
ಧಾರವಾಡದ ಆಹಾರ ಇಲಾಖೆಯ ಮೇಲೆ ಶನಿವಾರ ದಾಳಿ ನಡೆಸಿದ ಸಂದರ್ಭದಲ್ಲಿ ಎಸಿಬಿ ಇನ್‌ಸ್ಪೆಕ್ಟರ್ ಎ.ಎ.ಶೇಖ್ ಅವರು ಶಿವಶಂಕರ ಹಿರೇಮಠ ಅವರ ವಿಚಾರಣೆ ನಡೆಸಿದರು
ಧಾರವಾಡದ ಆಹಾರ ಇಲಾಖೆಯ ಮೇಲೆ ಶನಿವಾರ ದಾಳಿ ನಡೆಸಿದ ಸಂದರ್ಭದಲ್ಲಿ ಎಸಿಬಿ ಇನ್‌ಸ್ಪೆಕ್ಟರ್ ಎ.ಎ.ಶೇಖ್ ಅವರು ಶಿವಶಂಕರ ಹಿರೇಮಠ ಅವರ ವಿಚಾರಣೆ ನಡೆಸಿದರು   

ಧಾರವಾಡ: ಆಹಾರ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿಯ ಮೇಲೆ ಶನಿವಾರ ಸಂಜೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು, ಇಲಾಖೆ ವ್ಯವಸ್ಥಾಪಕ ಶಿವಶಂಕರ ಹಿರೇಮಠ ಅವರಿಂದ ₹1.15ಲಕ್ಷ ಹಾಗೂ ಚೆನ್ನಬಸವೇಶ್ವರ ನಗರದ ಮನೆಯಲ್ಲಿ ₹4.46ಲಕ್ಷ ಹಣವನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.

ಶಿವಶಂಕರ ಹಿರೇಮಠ ಅಕ್ರಮ ಹಣ ಸಂಪಾದನೆ ಮಾಡುತ್ತಿದ್ದಾರೆ ಎಂಬ ದೂರುಗಳು ಬಂದ ಹಿನ್ನಲೆಯಲ್ಲಿ ಎಸಿಬಿ ಅಧಿಕಾರಿಗಳು ಶನಿವಾರ ಏಕಕಾಲಕ್ಕೆ ಕಾರ್ಯಾಚರಣೆ ನಡೆಸಿದರು.

ಶಿವಶಂಕರ ಹಿರೇಮಠ ಅವರು ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡು ಆಹಾರ ನಿರೀಕ್ಷಕರ ಮೂಲಕ ಪ್ರತಿ ತಿಂಗಳು ಸಾವಿರಾರು ರೂಪಾಯಿ ಹಣದ ಬೇಡಿಕೆ ಇಡುತ್ತಾರೆ. ಬೇಡಿಕೆ ಇಟ್ಟ ಹಣ ನೀಡಲು ಆಹಾರ ನಿರೀಕ್ಷರು ನ್ಯಾಯ ಬೆಲೆ ಅಂಗಡಿ ಅವರಿಂದ ಅಕ್ರಮ ಸಂಭಾವನೆ ವಸೂಲಿ ಮಾಡುತ್ತಾರೆ ಎಂಬ ಆರೋಪ ಕೇಳಿ ಬಂದಿತ್ತು.

ADVERTISEMENT

ಎಸಿಬಿ ಡಿಎಸ್‌ಪಿ ಎಲ್. ವೇಣುಗೋಪಾಲ ಸೂಚನೆಯಂತೆ ಇನ್‌ಸ್ಪೆಕ್ಟರ್ ವೀರಭದ್ರಪ್ಪ ಕಡಿ ಅವರು ಇಲಾಖೆಯಲ್ಲಿನ ಭ್ರಷ್ಟಾಚಾರದ ಬಗ್ಗೆ ಗೌಪ್ಯವಾಗಿ ಮಾಹಿತಿ ಸಂಗ್ರಹಿಸಿದ್ದರು. ಶನಿವಾರ ಕಚೇರಿ ವ್ಯವಸ್ಥಾಪಕರ ಮೇಲೆ ಸರ್ಕಾರದ ಪರವಾಗಿ ದೂರನ್ನೂ ಸಲ್ಲಿಸಿದ್ದಾರೆ. ಈ ದೂರಿನ ಆಧಾರದ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.