ಅಳ್ನಾವರ: ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಕಾರ್ಮಿಕ ಇಲಾಖೆಯ ಸಂಚಾರಿ ಚಿಕಿತ್ಸಾ ಘಟಕದ ವತಿಯಿಂದ ಬುಧವಾರ ಅಂಬೇಡ್ಕರ್ ಭವನದಲ್ಲಿ ನಡೆದ
ಕಾರ್ಮಿಕರ ಆರೋಗ್ಯ ತಪಾಸಣೆ ಶಿಬಿರದಲ್ಲಿ 60 ಜನರ ಆರೋಗ್ಯ ತಪಾಸಣೆ ಮಾಡಿ ಉಚಿತ ಔಷಧೋಪಚಾರ ನೀಡಲಾಯಿತು. ಕಾರ್ಮಿಕ ಇಲಾಖೆಯ ಸಹಯೋಗದಲ್ಲಿ ಸ್ಕೂಡ್ವೇಸ್ ಸಂಸ್ಥೆಯು ಶಿಬಿರ ಆಯೋಜಿಸಿತ್ತು.
ಡಾ. ಎಚ್.ಡಿ. ಆದರ್ಶ ಮಾತನಾಡಿ, ಕಟ್ಟಡ ಕಾರ್ಮಿಕರು, ಇತರೆ ನಿರ್ಮಾಣ ಕಾರ್ಮಿಕರು, ಸಂಘಟಿತ ಹಾಗೂ ಅಸಂಘಟಿತ ಕಾರ್ಮಿಕರ ಆರೋಗ್ಯವನ್ನು ಪ್ರತಿ ಹದಿನೈದು ದಿನಕ್ಕೊಮ್ಮೆ ಇಲ್ಲಿನ ಅಂಬೇಡ್ಕರ್ ಭವನದಲ್ಲಿ ತಪಾಸಣೆ ಮಾಡಲಾಗುವುದು. ಈ ಶಿಬಿರದ ಲಾಭವನ್ನು ಕಾರ್ಮಿಕರು ಪಡೆದುಕೊಳ್ಳಬೇಕು ಎಂದರು.
ಕಾರ್ಮಿಕ ಕಾರ್ಡ್ ಜೊತೆ ಆಧಾರ್ ಕಾರ್ಡ್ ಅಥವಾ ಪಡಿತರ ಚೀಟಿ ತರಬೇಕು. ಕಾರ್ಮಿಕ ಕಾರ್ಡ್ ಜೊತೆ ಆಯುಷ್ಮಾನ ಭಾರತ ಕಾರ್ಡ್, ಈ ಶ್ರಮ ಕಾರ್ಡ್ ಹೊಂದಿದವರು ಕೂಡ ಶಿಬಿರದಲ್ಲಿ ಭಾಗವಹಿಸಬಹುದು. ಕೊರೊನಾ ನಿಯಮ ಪಾಲನೆ ಮಾಡಬೇಕು. ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದರು.
ಫಾರ್ಮಾಸಿಸ್ಟ್ ಯೋಗೇಶ ಹಿರೇಮಠ, ಸ್ಟಾಪ್ ನರ್ಸ್ ಸುಜಾತಾ, ರೂಪಾ ಜಾಡರ್, ಚಂಪಾ ಹುರಕಡ್ಲಿ, ಆರ್.ಕೆ. ಸವಿತಾ ಇದ್ದರು. ಬೆಳಿಗ್ಗೆ ಸಂಚಾರಿ ವಾಹನದ ಸಿಬ್ಬಂದಿ ಪಟ್ಟಣದ ಮನೆ ಮನೆಗೆ ತೆರಳಿ ಶಿಬಿರ ಬಗ್ಗೆ ಜಾಗೃತಿ ಮೂಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.