ADVERTISEMENT

‘ಸ್ವಚ್ಚ ರಾಜಕಾರಣಕ್ಕಾಗಿ ಸ್ವಚ್ಚ ಹಣ ಅಭಿಯಾನ’ಕ್ಕೆ ಎಎಪಿ ಚಾಲನೆ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2021, 12:00 IST
Last Updated 9 ಆಗಸ್ಟ್ 2021, 12:00 IST
ಹುಬ್ಬಳ್ಳಿಯಲ್ಲಿ ಎಎಪಿ ಮುಖಂಡರು ಸೋಮವಾರ ‘ಸ್ವಚ್ಛ ರಾಜಕಾರಣಕ್ಕಾಗಿ, ಸ್ವಚ್ಛ ಹಣ ಅಭಿಯಾನ’ದ ಪೋಸ್ಟರ್ ಬಿಡುಗಡೆ ಮಾಡಿದರು
ಹುಬ್ಬಳ್ಳಿಯಲ್ಲಿ ಎಎಪಿ ಮುಖಂಡರು ಸೋಮವಾರ ‘ಸ್ವಚ್ಛ ರಾಜಕಾರಣಕ್ಕಾಗಿ, ಸ್ವಚ್ಛ ಹಣ ಅಭಿಯಾನ’ದ ಪೋಸ್ಟರ್ ಬಿಡುಗಡೆ ಮಾಡಿದರು   

ಹುಬ್ಬಳ್ಳಿ: ‘ಭ್ರಷ್ಟಾಚಾರ ನಿರ್ಮೂಲನೆ ಆಮ್‌ ಆದ್ಮಿ ಪಕ್ಷದ ಮೂಲ ಸಿದ್ಧಾಂತ. ಅದರ ಆಧಾರದ ಮೇಲೆಯೇ ಮುಂಬರುವ ಮಹಾನಗರ ಪಾಲಿಕೆ ಚುನಾವಣೆಗೆ ಸಿದ್ಧತೆ ನಡೆಸಲಾಗಿದೆ. ಶುದ್ಧ ರಾಜಕಾರಣಕ್ಕಾಗಿ ಜನರಿಂದಲೇ ದೇಣಿಗೆ ಪಡೆಯಲು ನಿರ್ಧರಿಸಲಾಗಿದೆ’ ಎಂದು ಪಕ್ಷದ ರಾಜ್ಯ ಸಮಿತಿ ಸದಸ್ಯ ಬಸವರಾಜ ಮುದಿಗೌಡರ ಹೇಳಿದರು.

‘ಸ್ವಚ್ಛ ರಾಜಕಾರಣಕ್ಕಾಗಿ, ಸ್ವಚ್ಛ ಹಣ ಎಂಬ ಅಭಿಯಾನದಡಿ ದೇಣಿಗೆ ಸಂಗ್ರಹಿಸುತ್ತಿದ್ದೇವೆ. ಜನ ಪಕ್ಷದ ಪೋರ್ಟಲ್ https://bit.ly/Donate4_AAP_HDMC ಕ್ಲಿಕ್ ಮಾಡಿ ಹಣ ನೀಡಬಹುದು. ಪ್ರತಿ ಪೈಸೆಗೂ ಲೆಕ್ಕ ನೀಡಲಾಗುವುದು. ಪಕ್ಷದ ಹಿತೈಷಿಗಳಿಂದ ಈಗಾಗಲೇ ದೇಣಿಗೆ ಸಂಗ್ರಹಿಸುತ್ತಿದ್ದು, ಇದುವರೆಗೆ ₹10 ಲಕ್ಷ ಸಂಗ್ರಹವಾಗಿದೆ. ಇದಕ್ಕಾಗಿ ಆರಂಭಿಸಿರುವ ಸಹಾಯವಾಣಿ 9945561803 ಗೆ ಜನ ಕರೆ ಮಾಡಿ ದೇಣಿಗೆ ನೀಡಬಹುದು’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಸಂತೋಷ ನರಗುಂದ ಮಾತನಾಡಿ, ‘ಕೇಂದ್ರ ಮತ್ತು ರಾಜ್ಯಸರ್ಕಾರಗಳು ಕ್ರೋನಿ ಕ್ಯಾಪಿಟಲ್ ಬಂಡವಾಳಶಾಹಿಗಳ ಕೈಗೆ ಸಿಕ್ಕಿವೆ. ಅವರ ಪರವಾಗಿಯೇ ನೀತಿ–ನಿಯಮಗಳನ್ನು ರೂಪಿಸುತ್ತಿವೆ. ಕಾಮಗಾರಿಗಳಲ್ಲಿ ಗುತ್ತಿಗೆದಾರ ಅಧಿಕಾರಿಗಳಿಂದಿಡಿದು ಸಚಿವರವರೆಗೆ ಕಮಿಷನ್ ಕೊಡುವುದು ಸಾಮಾನ್ಯವಾಗಿದೆ’ ಎಂದು ಆರೋಪಿಸಿದರು.

ADVERTISEMENT

‘ಎಲ್ಲಾ ಹಂತದಲ್ಲೂ ಭ್ರಷ್ಟಾಚಾರ ಹಾಸು ಹೊಕ್ಕಿರುವುದರಿಂದ ಅಭಿವೃದ್ಧಿ ನಿರೀಕ್ಷಿಸುವುದು ಅಸಾಧ್ಯವಾಗಿದೆ.ಇದರಿಂದಾಗಿಯೇ ಅವಳಿನಗರದ ಬಿಆರ್‌ಟಿಎಸ್, ಸ್ಮಾರ್ಟ್‌ ಸಿಟಿ, ಅಮೃತ್ ಯೋಜನೆಯಂತಹ ಕಾಮಗಾರಿಗಳು ಜನರಿಗೆ ಸಹಕಾರಿಯಾಗುವ ಬದಲು ಸಮಸ್ಯೆಯಾಗಿವೆ. ಈ ನಿಟ್ಟಿನಲ್ಲಿ ಪಕ್ಷವು ಸ್ವಚ್ಛ ರಾಜಕಾರಣಕ್ಕಾಗಿ ಆರಂಭಿಸಿರುವ ಅಭಿಯಾನಕ್ಕೆ ಜನ ಕೈ ಜೋಡಿಸಬೇಕು’ ಎಂದು ಮನವಿ ಮಾಡಿದರು.

ಪಕ್ಷದ ಮುಖಂಡರಿಂದ ಅಭಿಯಾನದ ಪೋಸ್ಟರ್ ಬಿಡುಗಡೆ ಮಾಡಲಾಯಿತು.ಪಕ್ಷದಜಂಟಿ ಕಾರ್ಯದರ್ಶಿ ಶಾಮ ನರಗುಂದ, ಮುಖಂಡರಾದ ಶಾರದಾ ಬಡಿಗೇರ, ವಿದ್ಯಾ ನಾಡಿಗೇರ, ಮಮತಾ ಅಕ್ಕಸಾಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.