ADVERTISEMENT

ಸಕಾರಾತ್ಮಕ ಚಿಂತನೆ ರೂಢಿಸಿಕೊಳ್ಳಿ

ಅಳ್ನಾವರದಲ್ಲಿ ಸಸ್ಯಾಹಾರ ಜನ ಜಾಗೃತಿ ಜಾಥಾ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2022, 4:56 IST
Last Updated 8 ನವೆಂಬರ್ 2022, 4:56 IST
ಅಳ್ನಾವರದಲ್ಲಿ ಸಸ್ಯಾಹಾರ ಜನ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ತಹಶೀಲ್ದಾರ್ ಅಮರೇಶ ಪಮ್ಮಾರ ಚಾಲನೆ ನೀಡಿದರು
ಅಳ್ನಾವರದಲ್ಲಿ ಸಸ್ಯಾಹಾರ ಜನ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ತಹಶೀಲ್ದಾರ್ ಅಮರೇಶ ಪಮ್ಮಾರ ಚಾಲನೆ ನೀಡಿದರು   

ಅಳ್ನಾವರ: ‘ಧ್ಯಾನ, ಸಸ್ಯಹಾರ ಆಹಾರ ಪದ್ದತಿ ಮಾನವ ಬದುಕಿಗೆ ದೊರೆತ ಅದ್ಬುತ ಕೊಡುಗೆ. ಬದುಕಿನ ಜಂಜಾಟ, ದುಃಖ, ಸಮಸ್ಯೆ ದೂರ ಮಾಡಿ ಆನಂದಮಯ ಜೀವನ ಸಾಗಿಸಲು ಈ ಪದ್ಧತಿ ಅಳವಡಿಸಿಕೊಳ್ಳಿ’ ಎಂದು ತಹಶೀಲ್ದಾರ್‌ ಅಮರೇಶ ಪಮ್ಮಾರ ಹೇಳಿದರು.

ಪತ್ರೀಜಿ ವೆಜಿಟೇರಿಯನ್ ಮೂವ್‌ಮೆಂಟ್‌ ಕರ್ನಾಟಕ ಸಂಸ್ಥೆ ಹಾಗೂ ಪಿರಾಮಿಡ್ ಯೋಗ ಸಂಘಟನೆ ಸಹಯೋಗದಲ್ಲಿ ಹಮ್ಮಿಕೊಂಡ ಸಸ್ಯಾಹಾರ ಜನ ಜಾಗೃತಿ ಜಾಥಾ, ಧ್ಯಾನ ಪ್ರಚಾರ ಹಾಗೂ ಸಸಿ ನೆಡುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಸಕಾರಾತ್ಮಕ ಚಿಂತನೆ, ಧ್ಯಾನ ಸಾಧನೆ ಒಪ್ಪಿಕೊಳ್ಳುವ ಮನೋಭಾವನೆ ರೂಢಿಸಿಕೊಳ್ಳಿ’ ಎಂದು ಸಲಹೆ ನೀಡಿದರು.

ADVERTISEMENT

‘ಧ್ಯಾನ ಮಾರ್ಗದಿಂದ ಮಾತ್ರ ಉತ್ತಮ ಆರೊಗ್ಯ, ಶಾಂತಿ ನೆಮ್ಮದಿ ಮೂಡಲು ಸಾಧ್ಯ. ಪರಿಸರ ಸಂರಕ್ಷಣೆಗೆ ಮಾಂಸಾಹಾರ ತ್ಯಜಿಸಬೇಕು. ಯೋಗಾಭ್ಯಾಸ ಮೂಲಕ ಜನಾಂಗದ ಏಕತೆಗೆ ಸಂಘಟಿತರಾಗಬೇಕು. ಪ್ರಸುತ ಸಮಾಜದ ಸದೃಢ ಆರೋಗ್ಯಕ್ಕಾಗಿ ನಿತ್ಯ ಯೋಗ, ಧ್ಯಾನ ಅವಶ್ಯ’ ಪಿರಾಮಿಡ್ ಸಂಘಟನೆಯ ಮುಖ್ಯಸ್ಥೆ ಸುಮಂಗಲಾ ಸಾಲಿಮಠ ಎಂದರು.

‘ಶ್ವಾಸವೇ ನಿನ್ನ ಗುರು ಎಂಬ ಮಂತ್ರ ತಿಳಿದುಕೊಳ್ಳಬೇಕು. ಜೀವನದ ಸಮಸ್ಯೆ ಬಗೆಹರಿಸುವ ಶಕ್ತಿ ಧ್ಯಾನದಲ್ಲಿ ಅಡಗಿದೆ. ಈ ಪದ್ದತಿಯಲ್ಲಿ ನಂಬಿಕೆ ಇರಬೇಕು. ಶಾಂತ ಚಿತ್ತ ಮನೋಭಾವ ಹೊಂದಬೇಕು. ಬಾಲ್ಯದಲ್ಲಿಯೇ ಮಹಾತ್ಮರ ಜೀವನ ಕ್ರಮ ಮಕ್ಕಳಿಗೆ ತಿಳಿಸಿದಾಗ ಮಾತ್ರ ಬದುಕಿನ ಪ್ರತಿ ಹೆಜ್ಜೆ ಉತ್ಸಾಹದಾಯಕವಾಗಿರಲು ಸಾಧ್ಯ’ ಎಂದರು.

ಹಿರಿಯರಾದ ಎಂ.ಸಿ. ಹಿರೇಮಠ ಮಾತನಾಡಿ, ಶಾಕಾಹಾರ ಪದ್ದತಿ ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು. ಹಿತ ಮಿತ ಆಹಾರ ಸೇವಿಸಬೇಕು. ಪಿರಾಮಿಡ್ ಧ್ಯಾನ ಏಕಾಗ್ರತೆ ಮೂಡಿಸಲು ಸಹಕಾರಿ ಎಂದರು.

ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ನೇತ್ರಾವತಿ ಕಡಕೋಳ, ಹಿರಿಯರಾದ ಎಸ್.ಬಿ. ಪಾಟೀಲ, ಪ್ರವೀಣ ಪವಾರ, ರಂಜನಾ ಕಡೋಲಕರ, ಮುಖ್ಯಾಧಿಕಾರಿ ಪ್ರಭಾಕರ ದೊಡ್ಡಮನಿ, ಉದಯ ಗಡಕರ, ಶೀತಲ್‌ ಬೆಟದೂರ, ಪುಂಡಲಿಕ ಪಾರ್ದಿ, ರಾಜು ಕರ್ಲೇಕರ, ಕಲಾವತಿ ಕೊಡಳ್ಳಿ, ಸುವರ್ಣಾ ತೇಗೂರ, ಶ್ವೇತಾ ವಾಗಮೋಡೆ, ಭಾರತಿ ಶೆಟ್ಟಿ, ಡಾ. ಸಂಜಯ ಚಂದರಗಿಮಠ, ಸುವರ್ಣಾ ಕಡಕೋಳ,
ಅಶ್ವಿನಿ ಕರ್ಲೆಕರ, ದತ್ತಾ ನಿಟ್ಟೂರಕರ, ಅಕ್ಕನ ಬಳಗ, ಯೋಗ ಕೇಂದ್ರದ ಸದಸ್ಯರು ಇದ್ದರು.

ಜಾಥಾ ನಂತರ ವೀರಶೈವ ಕಲ್ಯಾಣ ಮಂಟಪದಲ್ಲಿ ಧ್ಯಾನ ಮತ್ತು ಯೋಗ ಅಭ್ಯಾಸ ನಡೆಯಿತು. ಗಣ್ಯರಿಗೆ ಸತ್ಕಾರ ಜರುಗಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.