ಅಳ್ನಾವರ: ಪಟ್ಟಣ ಹಾಗೂ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಸೋಮವಾರ ರಾತ್ರಿ ಮತ್ತು ಮಂಗಳವಾರ ಬೆಳಗಿನ ಜಾವದವರೆಗೆ 47 ಮಿಮೀ., ಮಳೆ ಬಿದ್ದಿದೆ.
ಸಮೀಪದ ಹೂಲಿಕೇರಿ ಇಂದಿರಮ್ಮನ ಕೆರೆ ತುಂಬಿ ಕೋಡಿ ಬಿದ್ದು, ಕಟ್ಟೆ ಮೇಲೆ ನೀರು ಹರಿಯುತ್ತಿದೆ.
ಮಂಗಳವಾರ ಮಧ್ಯಾಹ್ನ ತಹಶೀಲ್ದಾರ್ ಬಸವರಾಜ ಬೆಣ್ಣೆಶಿರೂರ ವಿವಿಧ ಇಲಾಖೆಯ ಅಧಿಕಾರಿ ತಂಡದೊಂದಿಗೆ ಕೆರೆಗೆ ಭೇಟಿ ನೀಡಿ, ಪರಿಶೀಲಿಸಿದರು.
ನಂತರ ಮಾತನಾಡಿದ ಅವರು, ’ಕೆರೆ ಹಾಗೂ ಹಳ್ಳದಲ್ಲಿ ನೀರಿನ ಪ್ರಮಾಣ ಹೆಚ್ಚಾಗುವ ಸಂಭವ ಇದೆ. ಕೆರೆಯ ಹೆಚ್ಚುವರಿ ನೀರನ್ನು ಹೊರಗೆ ಬಿಡಲಾಗುತ್ತಿದೆ. ಹಳ್ಳದ ಸಮೀಪ ಸಾರ್ವಜನಿಕರು ಬರಬಾರದು, ಜಾನುವಾರಗಳನ್ನೂ ಬಿಡಬಾರದು ಎಂದು ಜನರಿಗೆ ಸೂಚಿಸಲಾಗಿದೆ‘ ಎಂದರು.
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಪ್ರಕಾಶ ಮುಗದಮ, ಶ್ರೀಕಾಂತ ಗಾಯಕವಾಡ, ವಿನಾಯಕ ಕುರುಬರ, ಪರಶುರಾಮ ಮಿಂಡೋಳಕರ, ಸಲೀಂ ಜಾಗಿರದಾರ, ಶಿವಾಜಿ ಡೊಳ್ಳಿನ,
ಸಣ್ಣ ನೀರಾವರಿ, ಕಂದಾಯ, ಪೊಲೀಸ್ ಇಲಾಖೆ ಸಿಬ್ಬಂದಿ, ಗ್ರಾಮದ ಮುಖಂಡರು ಇದ್ದರು.
ಕಳೆದೆರಡು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಗೆ ತತ್ತರಿಸಿರುವ ಜನರು ಕೆಲಸ ಕಾರ್ಯ ಬಿಟ್ಟು ಮನೆಯಲ್ಲಿಯೇ ಕುಳಿತುಕೊಳ್ಳುವಂತಾಗಿದೆ. ಸತತ ಮಳೆಗೆ ಕೆರೆ ಹಳ್ಳಗಳು ತುಂಬಿ ಹರಿಯುತ್ತಿವೆ.
ತಾಲ್ಲೂಕಿನ ಕುಂಬಾರಕೊಪ್ಪ, ಸಿದ್ದಾಪೂರ, ಕಿವಡೆಬೈಲ ಮತ್ತಿತರ ಗ್ರಾಮಗಳಿಗೆ ಸಂಪರ್ಕ ಕಡಿತಗೊಂಡು ವಾಹನಗಳ ಓಡಾಟ ಸ್ಥಗಿತಗೊಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.