
ಅಳ್ನಾವರ: ಇಲ್ಲಿನ ಇಂದಿರಾ ನಗರ ಬಡಾವಣೆಯ ವೀರಭದ್ರೇಶ್ವರ ದೇವಸ್ಥಾನದ 9ನೇ ವಾರ್ಷಿಕೋತ್ಸವ ಕಾರ್ಯಕ್ರಮ ಫೆ.1ರಂದು ಸಡಗರದಿಂದ ನಡೆಯಲಿದೆ ಎಂದು ದೇವಸ್ಥಾನ ಸಮಿತಿ ತಿಳಿಸಿದೆ.
ಭಾರತ ಹುಣ್ಣಿಮೆಯ ಶುಭ ಗಳಿಗೆಯಲ್ಲಿ ಅಂದು ವಿವಿಧ ಧಾರ್ಮಿಕ ಕೈಂಕರ್ಯಗಳು ನಡೆಯಲಿವೆ. ಬೆಳಿಗ್ಗೆ 5 ಗಂಟೆಗೆ ರುದ್ರಾಭಿಷೇಕ ಸೇರಿದಂತೆ ಸಕಲ ಧಾರ್ಮಿಕ ವಿಧಿ ನೆರವೇರಿಸಲಾಗುವುದು. ನಂತರ 7ಕ್ಕೆ ಗುಗ್ಗುಳೋತ್ಸವ ಆರಂಭವಾಗಲಿದೆ.
ಸವಣೂರದಿಂದ ಬರುವ ನಾಗಪ್ಪ ಕುಂಬಾರ ಪುರವಂತರ ತಂಡ ಗುಗ್ಗುಳೋತ್ಸವ ನಡೆಸಿಕೊಡುವರು. ಈಗಾಗಲೇ ಹಲವರು ಗುಗ್ಗಳದಲ್ಲಿ ಭಾಗಿಯಾಗಲು ತಮ್ಮ ಹೆಸರನ್ನು ನೋಂದಾಯಿಸಿದ್ದಾರೆ. ಪುರವಂತರ ಒಡಪು, ವೀರಾವೇಶದ ನೋಟ ಭಕ್ತರನ್ನು ಆಕರ್ಷಿಸಲಿದೆ.
ನಂತರ ಪಲ್ಲಕ್ಕಿ ಉತ್ಸವ ಜರುಗಲಿದೆ. ಸುಮಂಗಲೆಯರು ಕುಂಭ ಹೊತ್ತು ಗುಗ್ಗುಳದ ಮೆರವಣಿಗೆಯಲ್ಲಿ ಭಾಗವಹಿಸುವರು. ಪಟ್ಟಣದ ವಿವಿದ ಬೀದಿಗಳಲ್ಲಿ ವೀರಗಾಸೆ ಪ್ರದರ್ಶನ ಮೂಲಕ ಗುಗ್ಗಳ ತಂಡ ಹೊರಡಲಿದೆ. ಮಧ್ಯಾಹ್ನ ಮಹಾ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ದೇವಸ್ಥಾನದಲ್ಲಿನ ಭದ್ರಕಾಳಿ, ಗಣೇಶ, ನಾಗದೇವತಾ, ಬಸವಣ್ಣ ಮೂರ್ತಿಗಳ ಪೂಜೆ ಜರುಗಲಿದೆ.
ಈಗಾಗಲೇ ದೇವಸ್ಥಾನಕ್ಕೆ ಬಣ್ಣ ಹಚ್ಚಲಾಗಿದೆ. ಬಣ್ಣ, ಬಣ್ಣದ ದೀಪಗಳ ಅಲಂಕಾರ ನಡೆದಿದೆ. ಉತ್ಸವದ ಪೂರ್ವ ಸಿದ್ದತೆಯನ್ನು ಭಕ್ತರು ಉತ್ಸಾಹದಿಂದ ಮಾಡಿಕೊಂಡಿದ್ದಾರೆ. ಪಟ್ಟಣ ಹಾಗೂ ಸುತ್ತ ಮುತ್ತಲಿನ ಗ್ರಾಮಸ್ಥರು ಆಗಮಿಸಿ ಭಕ್ತಿ ಸೇವೆ ಸಲ್ಲಿಸಲಿದ್ದಾರೆ. ದೇವಸ್ಥಾನದಲ್ಲಿ ವರ್ಷವಿಡಿ ಹಲವಾರು ಧಾರ್ಮಿಕ ಕಾರ್ಯಗಳು ನಡೆಯುತ್ತವೆ. ಸಮಾಜದ ಎಲ್ಲ ವರ್ಗದ ಜನರು ಸೇರಿ ದೇವಸ್ಥಾನದ ಎಲ್ಲ ಕಾರ್ಯಕ್ರಮಗಳಲ್ಲಿ ತೊಡಗಿ ಭಾವೈಕ್ಯ ಮೆರೆಯುತ್ತಾರೆ. ಇಂತಹ ವಾರ್ಷಿಕೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಲು ದೇವಸ್ಥಾನ ಸಮಿತಿ ಮನವಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.