ಹುಬ್ಬಳ್ಳಿ: ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಬಿಜೆಪಿ ಆಯೋಜಿಸಿದ್ದ ಜನಜಾಗೃತಿ ಸಮಾವೇಶ ಮುಗಿಸಿಕೊಂಡು ನಗರದಲ್ಲೇ ತಂಗಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ಬೆಳಿಗ್ಗೆ ಚಿಣ್ಣರಿಗೆ ಪೋಲಿಯೊ ಲಸಿಕೆ ಹಾಕುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು.
ಮಯೂರಿ ಎಸ್ಟೇಟ್ನಲ್ಲಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ನಿವಾಸ ‘ಕಾಮಿತಾರ್ಥ’ಕ್ಕೆ ಭೇಟಿ ನೀಡಿ, ಉಪಹಾರ ಸೇವಿಸಿದರು. ಬಳಿಕ ಜೋಶಿ ಕುಟುಂಬದವರು ಶಾ ಅವರಿಗೆ ಕಿತ್ತೂರು ರಾಣಿ ಚನ್ನಮ್ಮನ ಬೆಳ್ಳಿಯ ಮೂರ್ತಿಯನ್ನು ನೀಡಿ, ಸನ್ಮಾನಿಸಿದರು.
ಅಲ್ಲಿಂದ ಶಾ ಹೊರಡುತ್ತಿದ್ದಂತೆ ಮನೆಯ ಮುಂಭಾಗ ನೆರೆದಿದ್ದ ಪಕ್ಷದ ನೂರಾರು ಕಾರ್ಯಕರ್ತರು, ಮುಖಂಡರು ಜಯಘೋಷ ಮೊಳಗಿಸಿದರು. ಜನರ ಬಳಿ ತೆರಳಿದ ಶಾ ಅವರ ಕೈಕುಲುಕಿದರು. ಈ ಸಂದರ್ಭದಲ್ಲಿ ಮುಖಂಡರು, ಕಾರ್ಯಕರ್ತರು ಅವರೊಂದಿಗೆ ಸೆಲ್ಫಿ ತೆಗೆದುಕೊಂಡರು. ರೈತ ಸಂಘದ ಮುಖಂಡರು ಶಾಲು ಹೊದಿಸಿ ಸನ್ಮಾನಿಸಿದರು. ಮಕ್ಕಳಿಬ್ಬರು ಸಿದ್ಧಾರೂಢರ ಭಾವಚಿತ್ರವಿರುವ ಫೋಟೊವನ್ನು ಉಡುಗೊರೆ ನೀಡಿದರು.
ಶಾ ಮತ್ತು ಜೋಶಿ ವಿಶೇಷ ವಿಮಾನದ ಮೂಲಕ ನವದೆಹಲಿಗೆ ತೆರಳಿದರು. ಗೃಹ ಸಚಿವರು ತೆರಳುವ ಮಾರ್ಗದಲ್ಲಿ ಸಾರ್ವಜನಿಕ ವಾಹನಗಳ ಸಂಚಾರ(ಜೀರೊ ಟ್ರಾಫಿಕ್)ವನ್ನು ತಡೆಹಿಡಿಯಲಾಗಿತ್ತು. ಮಾರ್ಗದುದ್ದಕ್ಕೂ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು.
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ಕುಮಾರ ಕಟೀಲ್, ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಮುಖಂಡ ಮಹೇಶ ಟೆಂಗಿನಕಾಯಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.