
ಅಣ್ಣಿಗೇರಿ: ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಕಡಲೆ ಕಾಳು ಖರೀದಿಗಾಗಿ ಮೂರು ಕೇಂದ್ರಗಳಿಗೆ ಶಾಸಕ ಎನ್. ಎಚ್. ಕೋನರಡ್ಡಿ ಮಂಗಳವಾರ ಚಾಲನೆ ನೀಡಿದರು.
ಪ್ರತಿ ಕ್ವಿಂಟಲ್ ಕಡಲೆ ಕಾಳು ₹5,875ರಂತೆ ಪ್ರತಿ ರೈತರಿಂದ 40 ಕ್ವಿಂಟಾಲ್ ಖರೀದಿ ಮಾಡಲು ಸರ್ಕಾರ ಆದೇಶ ಮಾಡಿದೆ. ಈ ಹಿನ್ನಲೆಯಲ್ಲಿ ಸರದಿ ಪ್ರಕಾರ ತಾವು ಬೆಳೆದ ಕಡಲೆ ಕಾಳನ್ನು ಸರ್ಕಾರಕ್ಕೆ ಮಾರಾಟ ಮಾಡಿ ಸದುಪಯೋಗ ಪಡಿಸಿಕೊಳ್ಳಿ ಎಂದು ರೈತರಲ್ಲಿ ಮನವಿ ಮಾಡಿದರು.
ನಂತರ ನೂತನ ತಾಲ್ಲೂಕು ಕೃಷಿಕ ಸಮಾಜದ ಕಟ್ಟಡಕ್ಕೆ ಪುರಸಭೆ ನಿವೇಶನವನ್ನು ಬಾಡಿಗೆ ರೂಪದಲ್ಲಿ ನೋಂದಣಿ ಮಾಡಿಸಿ ದಾಖಲೆಯನ್ನು ರೈತ ಪ್ರತಿನಿಧಿಗಳಿಗೆ ಹಸ್ತಾಂತರ ಮಾಡಲಾಯಿತು. ಪಟ್ಟಣದಲ್ಲಿ ಬಾಕಿ ಉಳಿದ ನವಲಗುಂದ ಚಕ್ಕಡಿ ರಸ್ತೆ ಹಾಗೂ ಹೆಟ್ಟದ ದಾರಿ ಚಕ್ಕಡಿ ರಸ್ತೆ ದುರಸ್ತಿ ಕಾಮಗಾರಿಗೆ ಭೂಮಿಪೂಜೆ ಇದೇ ವೇಳೆ ನೆರವೇರಿಸಿದರು.
ಪುರಸಭೆ ಅಧ್ಯಕ್ಷ ಶಿವಾನಂದ ಬೆಳಹಾರ, ಕೃಷಿ ಸಮಾಜದ ಅಧ್ಯಕ್ಷ ಎ.ಪಿ.ಗುರಿಕಾರ, ಅಪ್ಪಣ್ಣ ಬಾಗಿ, ಚಂಬಣ್ಣ ಹಾಳದೋಟರ, ನಿಜಗುಣೆಪ್ಪ ಅಕ್ಕಿ, ಬಸನಗೌಡ ಕುರಹಟ್ಟಿ, ಪ್ರಕಾಶ ಅಂಗಡಿ, ಹನಮಂತಪ್ಪ ಕಂಬಳಿ,ಭಗವಂತಪ್ಪ ಪುಟ್ಟಣ್ಣವರ, ಮುಖ್ಯಾಧಿಕಾರಿ ವೈ.ಜಿ.ಗದ್ದಿಗೌಡರ, ಪ್ರದೀಪ ಲೇಂಕನಗೌಡರ, ಕೃಷ್ಣಗೌಡ ಮಾಡಳ್ಳಿ, ಲಕ್ಷ್ಮಣ ಮುದಕನಾಯಕರ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.