
ಅಣ್ಣಿಗೇರಿ: ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಪುರಸಭೆ ಸದಸ್ಯರು ಎಲ್ಲರೂ ಒಗ್ಗೂಡಿಕೊಂಡು ಶ್ರಮ ವಹಿಸಿ ಕೆಲಸ ಮಾಡಬೇಕು. ಅಲ್ಲದೇ ಪಟ್ಟಣದ ಅಂದವನ್ನು ಹೆಚ್ಚಿಸಲು ತಮ್ಮಲ್ಲಿರುವ ಹೊಸ, ಹೊಸ ಆಲೋಚನೆಗಳನ್ನು ತಿಳಿಸಿದರೆ ಅದಕ್ಕೆ ಪ್ರಾಮುಖ್ಯ ನೀಡಲಾಗುವುದು ಎಂದು ಶಾಸಕ ಎನ್.ಎಚ್.ಕೋನರಡ್ಡಿ ಹೇಳಿದರು.
ಅವರು ಸ್ಥಳೀಯ ಪುರಸಭೆ ಸಭಾ ಭವನದಲ್ಲಿ ಸೋಮವಾರ ನಡೆದ ಸಾಮಾನ್ಯಸಭೆಯಲ್ಲಿ ಭಾಗವಹಿಸಿ ಮಾತನಾಡಿ, ತಾಲ್ಲೂಕು ಕೇಂದ್ರವಾಗಿರುವ ಪಟ್ಟಣಕ್ಕೆ ನೂತನ ಪ್ರಜಾಸೌಧ ನಿರ್ಮಿಸಲು ಈಗಾಗಲೇ ₹ 8 ಕೋಟಿ ಅನುದಾನ ಸರ್ಕಾರ ನೀಡಿದ್ದರು ಸಹ ಇನ್ನು ಹೆಚ್ಚುವರಿ ಅನುದಾನ ನೀಡಲು ಸರ್ಕಾರಕ್ಕೆ ಮನವಿ ನೀಡಲಾಗಿದೆ. ಅನುದಾನ ದೊರೆತ ತಕ್ಷಣ ಕಾಮಗಾರಿ ಪ್ರಾರಂಭಿಸಲಾಗುವುದು ಎಂದರು.
ಅಲ್ಲದೇ ಪುರಸಭೆ ನೂತನ ಕಟ್ಟಡಕ್ಕೆ ₹ 7.50 ಕೋಟಿ ಅನುದಾನ ಬಿಡುಗಡೆ ಹಂತದಲ್ಲಿದೆ. ಪ್ರಾಥಮಿಕ ಅರೋಗ್ಯ ಕೇಂದ್ರವನ್ನು ಸಮುದಾಯ ಅರೋಗ್ಯ ಕೇಂದ್ರವನ್ನಾಗಿ ಮಾಡಲಾಗುತ್ತಿರುವುದರಿಂದ ₹ 5.60 ಲಕ್ಷರಲ್ಲಿ ನವೀಕರಣ ಕಾಮಗಾರಿ ಪ್ರಾಂಭಿಸಲಾಗುವುದು ಎಂದರು.
ಪುರಸಭೆ ಆದಾಯದ ಜೊತೆಗೆ ಅನುದಾನಗಳನ್ನು ಸಮರ್ಪಕವಾಗಿ ಬಳಸಿಕೊಂಡು ಅಭಿವೃದ್ಧಿ ಮಾಡೋಣ ಎಂದರು.
ಪಟ್ಟಣದಲ್ಲಿ ನೂತನವಾಗಿ ಆರಂಭಗೊಂಡ ಅಲ್ಫಸಂಖ್ಯಾತರ ಇಲಾಖೆಯ ಅಬ್ದುಲ್ ಕಲಾಂ ಶಾಲೆಗೆ ಪುರಸಭೆಯ ಸಿಎ ಜಾಗ ನೀಡುವ ಕುರಿತು, ಸಕ್ಕಿಂಗ್ ಮಷೀನ್ ದರ ನಿಗದಿ ಪಡಿಸುವದು, ಪಂಪ ಭವನ ದರ ನಿಗದಿ ಮಾಡುವ ಕುರಿತು ಹಾಗೂ ವಿವಿಧ ಬಿನ್ ಶೇತ್ಕಿ ಜಾಗಗಳಿಗೆ ನಮೂನೆ 3 ನೀಡುವ ಕುರಿತು ಚರ್ಚಿಸಲಾಯಿತು.
ಸಭೆಯಲ್ಲಿ ಸದಸ್ಯರು ನೀಡಿದ ಸಮಸ್ಯೆಗಳು ಹಾಗೂ ಅಭಿವೃದ್ಧಿ ಕೆಲಸಗಳ ಕುರಿತು ಸಾಮಾನ್ಯ ಸಭೆಯ ವಿಷಯ ಸೂಚಿಯಲ್ಲಿ ತೆಗೆದುಕೊಂಡು ಚರ್ಚಿಸುವುದಿಲ್ಲ ಯಾಕೆ, ಮತ್ಯಾಕೆ ಸದಸ್ಯರಿಂದ ಯಾಕೆ ಮಾಹಿತಿ ಪಡೆಯುತ್ತಿರಿ ಎಂದು ಕೆಲ ಸದಸ್ಯರು ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಈ ಸಭೆಯಲ್ಲಿ ಮುಖ್ಯಾಧಿಕಾರಿ ವೈ.ಜಿ.ಗದ್ದಿಗೌಡರ, ಅಧ್ಯಕ್ಷ ಶಿವಾನಂದ ಬೆಳಹಾರ, ಉಪಾಧ್ಯಕ್ಷ ನಾಗರಾಜ ದಳವಾಯಿ, ಸದಸ್ಯರಾದ ಗಂಗಾ ಕರೆಟ್ಟನವರ, ಇಮಾಮಸಾಬ್ ದರವಾನ, ಸಿ.ಜಿ.ನಾವಳ್ಳಿ, ಎ.ಪಿ.ಗುರಿಕಾರ, ಬಸವಣ್ಣೆವ್ವ ದಿಡ್ಡಿ, ಜಯಲಕ್ಷ್ಮಿ ಜಕರಡ್ಡಿ ಹಾಗೂ ಪುರಸಭೆ ಅಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.