ಹುಬ್ಬಳ್ಳಿ: ಕೋವಿಡ್ ಸಂಕಷ್ಟದ ಸಮಯದಲ್ಲಿ ಸೇನಾನಿಗಳಾಗಿ ಕರ್ತವ್ಯ ನಿರ್ವಹಿಸಿದ ವೈದ್ಯರು ಹಾಗೂ ರೈಲ್ವೆ ಸಿಬ್ಬಂದಿ ಕಾರ್ಯ ಶ್ಲಾಘನೀಯ ಎಂದು ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಸಂಜೀವ ಕಿಶೋರ ಹೇಳಿದರು.
ನೈರುತ್ಯ ರೈಲ್ವೆಯ ಇಲ್ಲಿನ ಮುಖ್ಯ ಕಚೇರಿ ರೈಲ್ ಸೌಧದಲ್ಲಿ ಭಾನುವಾರ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು ‘ಕೋವಿಡ್ ನಿರೋಧಕ ಲಸಿಕೆ ಅಭಿಯಾನದಲ್ಲಿ ವೈದ್ಯರ ಪಾತ್ರ ದೊಡ್ಡದು. ನಮ್ಮ ವ್ಯಾಪ್ತಿಯ ಶೇ 80ರಷ್ಟು ಸಿಬ್ಬಂದಿಗೆ ಮೊದಲ ಡೋಸ್, ಶೇ 30ರಷ್ಟು ಸಿಬ್ಬಂದಿಗೆ ಎರಡೂ ಡೋಸ್ ಲಸಿಕೆ ಹಾಕಲಾಗಿದೆ’ ಎಂದರು.
‘ನೈರುತ್ಯ ರೈಲ್ವೆ ವೇಗವಾಗಿ ಅಭಿವೃದ್ಧಿಯುತ್ತ ಸಾಗುತ್ತಿದೆ. ಪ್ರಯಾಣಿಕರಿಗೆ ಗುಣಮಟ್ಟದ ಸೇವೆ ಒದಗಿಸಲು ಬದ್ಧವಾಗಿದೆ. 175.5 ಕಿ.ಮೀ. ಜೋಡಿ ರೈಲು ಮಾರ್ಗ ಕಾರ್ಯ ಪೂರ್ಣಗೊಂಡಿದ್ದು, 51.5 ಕಿ.ಮೀ. ಹೊಸದಾಗಿ ಕಾರ್ಯ ಕೈಗೆತ್ತಿಕೊಳ್ಳಲಾಗುವುದು’ ಎಂದರು. ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕ ಪ್ರಶಾಂತಕುಮಾರ ಮಿಶ್ರಾ ಹಾಗೂ ವಿವಿಧ ಇಲಾಖೆಗಳು ಮುಖ್ಯಸ್ಥರು, ಅಧಿಕಾರಿಗಳು ಇದ್ದರು.
ಧ್ವಜಾರೋಹಣ: ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಾರ್ಯಾಲಯದ ಆವರಣದಲ್ಲಿ ವಿಭಾಗೀಯ ವ್ಯವಸ್ಥಾಪಕ ಅರವಿಂದ ಮಾಳಖೇಡೆ ಧ್ವಜಾರೋಹಣ ನೆರವೇರಿಸಿದರು.
ಬಳಿಕ ಮಾತನಾಡಿ ‘ಭಾರತವು ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿದ್ದು ಕೋವಿಡ್ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಸೇನಾನಿಗಳ ಸಾಧನೆ ಶ್ಲಾಘನೀಯ’ ಎಂದರು. ಸರಕು ಸಾಗಣೆಯಿಂದಾಗಿ ಜುಲೈ 2021ರ ವರೆಗೆ ವಿಭಾಗ ₹ 1,127 ಕೋಟಿ ಆದಾಯ ಗಳಿಸಿದ್ದು, ಹಿಂದಿನ ವರ್ಷಕ್ಕೆ ಹೋಲಿಸಿದರೆ ಇದು ಶೇ 54.4ರಷ್ಟು ಹೆಚ್ಚಳವಾಗಿದೆ ಎಂದರು.
ನೈರುತ್ಯ ರೈಲ್ವೆ ಮಹಿಳಾ ಕಲ್ಯಾಣ ಸಂಘಟನೆಯ ಹುಬ್ಬಳ್ಳಿ ವಿಭಾಗದ ಅಧ್ಯಕ್ಷೆ ಮೀನಲ್ ಗಾಂಧೆ, ಹೆಚ್ಚುವರಿ ವಿಭಾಗೀಯ ವ್ಯವಸ್ಥಾಪಕರಾದ ಜೋಗೇಂದ್ರ ಯಾದವೇಂದು, ವಿಶ್ವಾಸ ಕುಮಾರ್, ವರಿಷ್ಠ ವಿಭಾಗೀಯ ಭದ್ರತಾ ಆಯುಕ್ತ ವಲ್ಲೇಶ್ವರ ಬಿ.ಟಿ., ವರಿಷ್ಠ ವಿಭಾಗೀಯ ಸಿಬ್ಬಂದಿ ಅಧಿಕಾರಿ ಕೆ. ಅಸೀಫ್ ಹಫೀಜ್ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.