ಹುಬ್ಬಳ್ಳಿ: ನಗರದ ಆರ್ಜಿಎಸ್ ರೈಲ್ವೆ ಕಾಲೊನಿಯವಿನೋಬಾನಗರದ ಮೈದಾನದಲ್ಲಿ ಪ್ರತಿಷ್ಠಾಪಿಸಿರುವ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಯ ತೆರವಿಗೆ ಮತ್ತೆ ರೈಲ್ವೆ ರಕ್ಷಣಾ ದಳದ (ಆರ್ಪಿಎಫ್) ಸಿಬ್ಬಂದಿ ಶನಿವಾರ ಮುಂದಾಗಿದ್ದರು. ಈ ವೇಳೆ, ಸ್ಥಳೀಯರು ಮತ್ತು ಪೊಲೀಸ್ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆಯಿತು.
ತೆರವು ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿ ಕೆಲವು ಮುಖಂಡರು, ಪೊಲೀಸರ ಕ್ರಮವನ್ನು ಖಂಡಿಸಿದರು.
ಸಮತಾ ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಗುರುನಾಥ ಉಳ್ಳಿಕಾಶಿ ಮಾತನಾಡಿ, ‘ರೈಲ್ವೆ ಪೊಲೀಸರು ಪುತ್ಥಳಿ ತೆರವುಗೊಳಿಸುವ ಉದ್ದೇಶದಿಂದಲೇ ಸ್ಥಳಕ್ಕೆ ಜೆಸಿಬಿ ಯಂತ್ರವನ್ನು ತಂದಿದ್ದಾರೆ. ತೆರವು ಕಾರ್ಯಕ್ಕೆ ಹಿಂದೆಯೂ ತೀವ್ರ ವಿರೋಧ ವ್ಯಕ್ತಪಡಿಸಿದ್ದೇವೆ. ಆಗ ಮಣಿದಿದ್ದ ಪೊಲೀಸರು ಈಗ ಮತ್ತೆ ತೆರವು ಕಾರ್ಯಕ್ಕೆ ಮುಂದಾಗಿರುವುದು ಖಂಡನೀಯ’ ಎಂದು ತಿಳಿಸಿದರು.
‘ಈ ಸ್ಥಳದಲ್ಲಿ ಸ್ವಚ್ಛತೆ ಕಾಪಾಡಲು ಹಾಗೂ ಅಂಬೇಡ್ಕರ್ ಅವರ ಮೇಲೆ ಅಭಿಮಾನದಿಂದ ಯಾರೋ ಪುತ್ಥಳಿ ತಂದು ಸ್ಥಾಪಿಸಿದ್ದಾರೆ. ಅದನ್ನು ತೆರವು ಮಾಡುವುದು ಸರಿಯಲ್ಲ. ಇದೇ ಜಾಗದಲ್ಲಿ ಉದ್ಯಾನವನ್ನೂ ಅಭಿವೃದ್ಧಿಪಡಿಸಬಹುದು. ಇದರಿಂದ ಸ್ಥಳೀಯರಿಗೆ ಅನುಕೂಲವಾಗಲಿದೆ. ಈ ಕುರಿತು ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಲಾಗುವುದು’ ಎಂದು ತಿಳಿಸಿದರು.
ರೈಲ್ವೆ ಇಲಾಖೆಗೆ ಸೇರಿದ ಜಾಗದಲ್ಲಿ ಸ್ಥಳೀಯರು ಈಚೆಗೆ ಅಂಬೇಡ್ಕರ್ ಪುತ್ಥಳಿ ಪ್ರತಿಷ್ಠಾಪಿಸಿದ್ದರು. ಪೊಲೀಸರು ಪುತ್ಥಳಿ ತೆರವು ಮಾಡಿದಾಗ ಸ್ಥಳೀಯರು ಪ್ರತಿಭಟನೆ ನಡೆಸಿದ್ದರು. ನಂತರ ಪುತ್ಥಳಿಯನ್ನು ಹಿಂದಿರುಗಿಸಲಾಗಿತ್ತು. ಮತ್ತೆ ಅದೇ ಜಾಗದಲ್ಲಿ ಪುತ್ಥಳಿ ಮರುಸ್ಥಾಪಿಸಲಾಗಿದೆ. ವಿವಾದ ಪರಿಹರಿಸಲು ಸೋಮವಾರ ನೈರುತ್ಯ ರೈಲ್ವೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಲು ಎಲ್ಲರೂ ಸಮ್ಮತಿಸಿದರು.
ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ್ ಉಳ್ಳಾಗಡ್ಡಿಮಠ, ಮಹಾನಗರ ಪಾಲಿಕೆ ಸದಸ್ಯ ಸುವರ್ಣಾ ಕಲ್ಲಕುಂಟ್ಲ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.